KM Chaithanya: 'ಬಲರಾಮನ ದಿನಗಳು' ಸಿನಿಮಾ, ಕೆ.ಎಂ. ಚೈತನ್ಯ ಅವರ ಜನಪ್ರಿಯ 'ಆ ದಿನಗಳು' ಚಿತ್ರದ ಮುಂದುವರಿದ ಭಾಗವಲ್ಲ. ಆದರೆ ಅದೇ ಕಾಲಘಟ್ಟದ ಮತ್ತೊಂದು ಕಥೆಯನ್ನು ಹೇಳುವ ಪ್ರಯತ್ನವಾಗಿದೆ.

ಸ್ಯಾಂಡಲ್‌ವುಡ್‌ನ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಬಲರಾಮನ ದಿನಗಳು' ಸಿನಿಮಾ ಜೂನ್ 26ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ನಿರ್ದೇಶಕ ಕೆ.ಎಂ. ಚೈತನ್ಯ ಈ ಸಂತಸದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆ.ಎಂ. ಚೈತನ್ಯ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, "ಕಿಚ್ಚ ಸುದೀಪ್ ಸರ್ ತಮ್ಮ ಖಾಸಗಿ ಚಿತ್ರಮಂದಿರದಲ್ಲಿ 'ಬಲರಾಮನ ದಿನಗಳು' ಚಿತ್ರ ವೀಕ್ಷಿಸಿದ್ದು ನಮ್ಮ ತಂಡಕ್ಕೆ ಸಂತೋಷ ಹಾಗೂ ಹೆಮ್ಮೆಯ ಕ್ಷಣ. 80 ಮತ್ತು 90ರ ದಶಕದ ಬೆಂಗಳೂರನ್ನು ಹತ್ತಿರದಿಂದ ಕಂಡಿರುವ ಅವರು, ಚಿತ್ರದಲ್ಲಿನ ಹಲವು ಪಾತ್ರಗಳು ಮತ್ತು ಘಟನೆಗಳ ನೈಜತೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿನೋದ್ ಪ್ರಭಾಕರ್ ಅವರ ಬಲರಾಮ ಪಾತ್ರ ಸೇರಿದಂತೆ ವಿನಯ್ ಗೌಡ ಮತ್ತು ಇತರ ಕಲಾವಿದರ ಅಭಿನಯವನ್ನು ಶ್ಲಾಘಿಸಿದರು. ಚಿತ್ರದ ತಾಂತ್ರಿಕ ಗುಣಮಟ್ಟ, ವಿವರಗಳ ನಿರೂಪಣೆ ಹಾಗೂ ಆ ಕಾಲಘಟ್ಟವನ್ನು ಮರುಸೃಷ್ಟಿಸಿರುವ ರೀತಿಯೂ ಅವರಿಗೆ ಇಷ್ಟವಾಯಿತು. ಅವರೊಂದಿಗೆ ಆ ದಿನಗಳ ನೆನಪುಗಳನ್ನು ಹಂಚಿಕೊಂಡ ಕ್ಷಣ ಮರೆಯಲಾಗದು. ನಮ್ಮ ಇಡೀ ತಂಡದ ಪರವಾಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಮಿಸ್ ಮಾಡದೆ ಚಿತ್ರಮಂದಿರಗಳಲ್ಲಿ ನೋಡಿ

ಇದಕ್ಕೂ ಮುನ್ನ ಮೊಗ್ಗಿನ ಮನಸ್ಸು ಸಿನಿಮಾ ಖ್ಯಾತಿಯ ನಿರ್ದೇಶಕ, ನಿರ್ಮಾಪಕ ಹಾಗೂ ಬರಹಗಾರ ಶಶಾಂಕ್ ಕೂಡ ಸಿನಿಮಾ ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, 'ಬಲರಾಮನ ದಿನಗಳು' ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಅಂಡರ್‌ವರ್ಲ್ಡ್‌ ಸಿನಿಮಾಗಳಲ್ಲಿ ಒಂದು. ನಿರ್ದೇಶಕ ಕೆ.ಎಂ. ಚೈತನ್ಯ 80ರ ದಶಕದ ಭೂಗತ ಜಗತ್ತನ್ನು ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಕಲಾವಿದರ ಅಭಿನಯ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಸೇರಿದಂತೆ ಪ್ರತಿಯೊಂದು ತಾಂತ್ರಿಕ ಅಂಶವೂ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ತಪ್ಪದೇ ವೀಕ್ಷಿಸಿ" ಎಂದು ಪ್ರೇಕ್ಷಕರಿಗೆ ಸಲಹೆ ನೀಡಿದ್ದರು.

'ಬಲರಾಮನ ದಿನಗಳು' ಸಿನಿಮಾ, ಕೆ.ಎಂ. ಚೈತನ್ಯ ಅವರ ಜನಪ್ರಿಯ 'ಆ ದಿನಗಳು' ಚಿತ್ರದ ಮುಂದುವರಿದ ಭಾಗವಲ್ಲ. ಆದರೆ ಅದೇ ಕಾಲಘಟ್ಟದ ಮತ್ತೊಂದು ಕಥೆಯನ್ನು ಹೇಳುವ ಪ್ರಯತ್ನವಾಗಿದೆ. 1980ರಿಂದ 1990ರ ಅವಧಿಯ ಬೆಂಗಳೂರಿನ ಅಂಡರ್‌ವರ್ಲ್ಡ್‌ ಹಾಗೂ ಅಪರಾಧ ಜಗತ್ತಿನ ಹಲವು ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ರೂಪಿಸಲಾಗಿದೆ.

ಕೆ.ಎಂ. ಚೈತನ್ಯ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶೀಷ್ ವಿದ್ಯಾರ್ಥಿ, ವಿನಯ್ ಗೌಡ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಾವತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಿಸಿರುವ ಚಿತ್ರಕ್ಕೆ ಹೆಚ್.ಸಿ. ವೇಣು ಛಾಯಾಗ್ರಹಣ, ಸಂತೋಷ್ ನಾರಾಯಣನ್ ಸಂಗೀತ ಹಾಗೂ ಹರಿದಾಸ್ ಸಂಕಲನ ನೀಡಿದ್ದಾರೆ. ಚಿತ್ರದ ವಿತರಣೆಯನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ವಹಿಸಿದೆ.