ನಾನು ಯಾರಿಗೂ ಕರೆ ಮಾಡಿ ಕ್ಷಮೆ ಕೇಳಿ ಅಂತ ಹೇಳಿಲ್ಲ ಎಂದು ಕಿಚ್ಚ ಸುದೀಪ್  ದಿಢೀರ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಕಿಚ್ಚ ಸುದೀಪ್ ಸದ್ಯ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ತೆರಳಿ ಕಿಚ್ಚ ಬಿಜೆಪಿ ನಾಯಕರ ಪರ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಕಿಚ್ಚ ಸುದೀಪ್ ಕುರಿತು ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಪುತ್ರ ಎನ್‌. ಲೋಕೇಶ್ ಅವಹೇಳನಕಾರಿಯಾಗಿ ಮಾತಾಡಿದ್ದರು ಎನ್ನುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಲೋಕೇಶ್ ಕ್ಷಮೆ ಕೇಳಬೇಕು ಎಂದು ಸುದೀಪ್ ಅಭಿಮಾನಿಗಳು ಆಗ್ರಹಿಸಿದ್ದರು. ಸ್ವತಃ ಸುದೀಪ್ ಕರೆ ಮಾಡಿ ತನ್ನೊಂದಿಗೆ ಈ ಬಗ್ಗೆ ಮಾತನಾಡಿದ್ರು ಎಂದಿರುವ ಲೋಕೇಶ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವತಃ ಕಿಚ್ಚ ಸುದೀಪ್ ಅವರೇ ಉತ್ತರ ನೀಡಿದ್ದಾರೆ. ನಾನು ಯಾರಿಗೂ ಕರೆ ಮಾಡಿ ಕ್ಷಮೆ ಕೇಳಿ ಎಂದಿಲ್ಲ ಹೇಳಿದ್ದಾರೆ. 

ಸುದೀಪ್ ಟ್ವೀಟ್‌ನಲ್ಲಿ, 'ನಾನು ಕ್ಷಮೆ ಕೇಳುವಂತೆ ಯಾರಿಗೂ ಕರೆ ಮಾಡಲಿಲ್ಲ ಅಂತ ಹೇಳುವುದಕ್ಕೆ ಇಷ್ಟಪಡ್ತೀನಿ. ಯಾರೋ ಕ್ಷಮೆ ಕೇಳುವುದರಿಂದ ನಾನು ಹೆಮ್ಮೆಪಡುವುದಿಲ್ಲ. ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಹಳೆಯ ಸಿದ್ದಾಂತ. ಇದು ನಾನು ಹೇಳಿದ್ದಲ್ಲ' ಎಂದು ಸುದೀಪ್ ಉತ್ತರ ನೀಡಿದ್ದಾರೆ. 

ಘಟನೆ ಹಿನ್ನಲೆ ಏನು?

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಎನ್. ನಂಜುಂಡಸ್ವಾಮಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಎನ್ ಮಹೇಶ್ ಕಣದಲ್ಲಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಕಿಚ್ಚ ಮಹೇಶ್ ಪರವಾಗಿ ಪ್ರಚಾರ ಮಾಡಲು ಕೊಳ್ಳೆಗಾಲಕ್ಕೆ ಹೋಗುತ್ತಾರೆ ಎನ್ನಲಾಗ್ತಿದೆ. ಸುದೀಪ್ ಪ್ರಚಾರಕ್ಕೆ ಬರ್ತಾರೆ ಎನ್ನುವ ಮಾತನನ್ನು ಬಿಜೆಪಿ ಅಭ್ಯರ್ಥಿ ಎನ್‌ ಮಹೇಶ್ ಪದೇ ಪದೇ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಎನ್. ನಂಜುಂಡಸ್ವಾಮಿ ಪುತ್ರ ಲೋಕೇಶ್ ಟಾಂಗ್ ಕೊಟ್ಟಿದ್ದಾರೆ. 

ಜೂನ್ 1ಕ್ಕೆ ಕಾದಿದೆ ಬಿಗ್ ಸರ್ಪ್ರೈಸ್: ಪ್ರಚಾರದ ನಡುವೆಯೇ ಭರ್ಜರಿ ಸುದ್ದಿ ನೀಡಿದ ಕಿಚ್ಚ ಸುದೀಪ್

ಕಾರ್ಯಕ್ರಮವೊಂದರಲ್ಲಿ ಮಾತಾಡುವಾಗ ಲೋಕೇಶ್ 'ಎನ್.ಮಹೇಶ್ ಅವರು ಪದೇ ಪದೇ ಕಿಚ್ಚ ಸುದೀಪ್ ನಮ್ಮ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಯಾರೇ ಬಂದರೂ ಊಟ ಮಾಡಿ, ಜೇಬು ತುಂಬಿಸಿಕೊಂಡು ಹೋಗ್ತಾ ಇರ್ತಾರೆ ಅಷ್ಟೇ' ಎಂದು ಹೇಳಿದ್ದರು. ಈ ಮಾತು ಸುದೀಪ್ ಅಭಿಮಾನಿಗಳನ್ನು ಕೆರಳಿಸಿತ್ತು. ಸಿಟ್ಟಿಗೆದ್ದ ಕಿಚ್ಚನ ಫ್ಯಾನ್ಸ್ ಲೋಕೇಶ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಈ ನಡುವೆ ಕಿಚ್ಚ ಸುದೀಪ್ ಲೋಕೇಶ್‌ಗೆ ಕರೆ ಮಾಡಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು ಎನ್ನುವ ಟ್ವೀಟ್ ವೈರಲ್ ಆಗಿತ್ತು.

Scroll to load tweet…

ಆಯ್ತು ಜೆ.ಪಿ ನಡ್ಡಾ ಜತೆ ಕಿಚ್ಚ ಸುದೀಪ್ ಹೆಲಿಕಾಫ್ಟರ್ ಸೆಲ್ಫಿ!

ಇದರ ಬೆನ್ನಲ್ಲೇ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಲೋಕೇಶ್ ಮಾತನಾಡಿ, 'ಕಿಚ್ಚ ಸುದೀಪ್ ನನಗೆ ಕರೆ ಮಾಡಿದ್ದರು. ಅವರು ನಮ್ಮ ಜನಾಂಗದವರು, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೋ, ಅವರು ಅಷ್ಟೇ ನನ್ನನ್ನು ಪ್ರೀತಿಸುತ್ತಾರೆ' ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.