ಸಿಡ್ನಿಯಲ್ಲಿ ಕಾಂತಾರದ ‘ವರಾಹ ರೂಪಂ’ ಮಿಂಚು; ಪಾಕಿಸ್ತಾನಿಯರೂ ಕೂಡಾ ಮೋದಿ ಪ್ರೀತಿಸ್ತಾರೆ ಎಂದ ಗಾಯಕ
ಯಕ್ಷಗಾನದ ಜತೆಗೆ ಸಾಂಪ್ರಾದಾಯಿಕ ಶೈಲಿಯ ಭರತನಾಟ್ಯ ಮತ್ತು ಜಾನಪದ ಶೈಲಿಯ ನಾಟ್ಯವನ್ನು ಪ್ರದರ್ಶಿಸಲಾಯಿತು. ಶ್ರೀಮತಿ ಪಲ್ಲವಿ ಭಾಗವತ್ ನೇತೃತ್ವದ ನ್ಯಾಟ್ಯೋಕ್ತಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ವರಾಹ ರೂಪಂ ಮತ್ತು ವಾ ಪೊರ್ಲಯಾ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು.
ಸಿಡ್ನಿ (ಮೇ 24, 2023): ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಕ್ಯುಡೋಸ್ ಬ್ಯಾಂಕ್ ಅರೇನಾ ಸ್ಟೇಡಿಯಂನಲ್ಲಿ ಕನ್ನಡದ ಸೂಪರ್ಹಿಟ್ ಚಿತ್ರ ‘ಕಾಂತಾರ’ದ ‘ವರಾಹ ರೂಪಂ’ ಮತ್ತು ‘ವಾ ಪೊರ್ಲುಯಾ’ ಹಾಡಿಗೆ ನೃತ್ಯ ಪ್ರದರ್ಶನ ಆಯೋಜಿಸಲಾಗಿತ್ತು. ವೇದಿಕೆಗೆ ಮೋದಿ ಆಗಮನಕ್ಕೂ ಮುನ್ನ ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ಭಾಗವಾಗಿ ಯಕ್ಷಗಾನದ ಜತೆಗೆ ಸಾಂಪ್ರಾದಾಯಿಕ ಶೈಲಿಯ ಭರತನಾಟ್ಯ ಮತ್ತು ಜಾನಪದ ಶೈಲಿಯ ನಾಟ್ಯವನ್ನು ಪ್ರದರ್ಶಿಸಲಾಯಿತು. ಶ್ರೀಮತಿ ಪಲ್ಲವಿ ಭಾಗವತ್ ನೇತೃತ್ವದ ನ್ಯಾಟ್ಯೋಕ್ತಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ವರಾಹ ರೂಪಂ ಮತ್ತು ವಾ ಪೊರ್ಲಯಾ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು.
ಮೋದಿ ಭೇಟಿಯಾಗಿದ್ದು ನನ್ನ ಅದೃಷ್ಟ: ಸೆಲೆಬ್ರಿಟಿ ಶೆಫ್ ಸಾರಾ ಬಣ್ಣನೆ
ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೆಲೆಬ್ರಿಟಿ ಶೆಫ್ ಸಾರಾ ಟಾಡ್ ಭೇಟಿ ಮಾಡಿ ಪ್ರಾಚೀನ ಭಾರತೀಯ ತಿನಿಸುಗಳು ಹಾಗೂ ಆಯುರ್ವೇದದ ಬಗ್ಗೆ ಚರ್ಚಿಸಿದರು. ಬಳಿಕ ಮೋದಿ ಜೊತೆಗಿನ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಸಾರಾ, ‘ಪ್ರಧಾನಿ ಮೋದಿ ಅದ್ಭುತ ಮನುಷ್ಯ. ಅವರನ್ನು ಭೇಟಿಯಾಗಿದ್ದು ನನ್ನ ಅದೃಷ್ಟ. ಜನರ ಮಾತಿಗೆ ಬೆಲೆ ಸಿಗುವಂತೆ ಮಾಡಿದ ವ್ಯಕ್ತಿ ಮೋದಿ. ದೇಶದ ಬಗ್ಗೆ ಅವರಿಗೆ ನಿಜವಾದ ಕಳಕಳಿ ಹಾಗೂ ದೂರದೃಷ್ಟಿಯಿದೆ. ತುಂಬಾ ಸರಳವಾದ ಹಿನ್ನೆಲೆಯಿಂದ ಬಂದ ಅವರು ದೇಶಕ್ಕಾಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ’ ಎಂದು ಬಣ್ಣಿಸಿದ್ದಾರೆ.
ಇದನ್ನು ಓದಿ: ಆಸ್ಪ್ರೇಲಿಯಾದಲ್ಲೂ ನಮೋ ಅಲೆ: ಸಿಡ್ನಿಯಲ್ಲಿ ‘ಮೋದಿ ಮೋದಿ’ ಜೈಘೋಷ; ಮೋದಿಯೇ ಬಾಸ್ ಎಂದ ಆಸೀಸ್ ಪ್ರಧಾನಿ
ಪಾಕಿಗಳು ಕೂಡ ಮೋದಿ ಪ್ರೀತಿಸ್ತಾರೆ: ಅನೂಪ್ ಜಲೋಟಾ
‘ಜನರು ಪ್ರಧಾನಿ ನರೇಂದ್ರ ಮೋದಿಯನ್ನು ಪ್ರೀತಿಸುತ್ತಾರೆ. ಪಾಕಿಸ್ತಾನದವರು ಕೂಡ ಅವರನ್ನು ಪ್ರೀತಿಸುತ್ತಾರೆ. ಪಾಕಿಸ್ತಾನದ ಜನರಿಗೆ ಮೋದಿಯಂತಹ ನಾಯಕರು ಬೇಕಂತೆ... ಸಿಡ್ನಿಯಲ್ಲಿರುವ ಜನರು ಕೂಡ ಮೋದಿ ಶಾಶ್ವತವಾಗಿ ಪ್ರಧಾನಿಯಾಗಿರಲಿ ಎಂದು ಬಯಸುತ್ತಾರೆ’ ಎಂದು ಪ್ರಸಿದ್ಧ ಗಾಯಕ ಅನೂಪ್ ಜಲೋಟಾ ಹಾಡಿ ಹೊಗಳಿದ್ದಾರೆ. ಸಿಡ್ನಿಯಲ್ಲಿ ಪ್ರಧಾನಿ ಮೋದಿ ಬಂದಿಳಿಯುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು.
‘ಲಿಟ್ಲ್ ಇಂಡಿಯಾ’ಕ್ಕೆ ಮೋದಿ ಅಡಿಗಲ್ಲು
ಆಸ್ಪ್ರೇಲಿಯಾ ಹಾಗೂ ಭಾರತದ ನಡುವಿನ ಸ್ನೇಹದ ಪ್ರತೀಕವಾಗಿ ಮತ್ತು ಆಸ್ಪ್ರೇಲಿಯಾದ ಅಭಿವೃದ್ಧಿಗೆ ಭಾರತೀಯ ವಲಸಿಗರು ನೀಡಿದ ಕೊಡುಗೆಯ ಸ್ಮರಣಾರ್ಥ ಸಿಡ್ನಿಯಲ್ಲಿ ‘ಲಿಟ್ಲ್ ಇಂಡಿಯಾ ಗೇಟ್ವೇ’ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಜಂಟಿಯಾಗಿ ಲಿಟ್ಲ್ ಇಂಡಿಯಾ ಗೇಟ್ವೇ ನಿರ್ಮಾಣಕ್ಕೆ ಮಂಗಳವಾರ ಅಡಿಗಲ್ಲು ಹಾಕಿದರು.
ಇದನ್ನೂ ಓದಿ: ನಿಮ್ಮ ಬಳಿ ಆಟೋಗ್ರಾಫ್ ತಗೋಬೇಕು: ಪ್ರಧಾನಿ ಮೋದಿ ಬಳಿ ದುಂಬಾಲು ಬಿದ್ದ ವಿಶ್ವದ ದೊಡ್ಡಣ್ಣ ಜೋ ಬೈಡೆನ್!
ಪಶ್ಚಿಮ ಸಿಡ್ನಿಯಲ್ಲಿರುವ ಹ್ಯಾರಿಸ್ ಪಾರ್ಕ್ ಪ್ರದೇಶದಲ್ಲಿ ಭಾರತೀಯ ಸಮುದಾಯದವರು ಪ್ರತಿ ವರ್ಷ ದೀಪಾವಳಿ ಮುಂತಾದ ಹಬ್ಬಗಳನ್ನು ಹಾಗೂ ಆಸ್ಪ್ರೇಲಿಯಾ ದಿವಸವನ್ನು ಆಚರಿಸುತ್ತಾರೆ. ಇಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿ ‘ಲಿಟ್್ಲ ಇಂಡಿಯಾ ಗೇಟ್ವೇ’ ನಿರ್ಮಿಸಲಾಗುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.
ವಿಮಾನದ ಹೊಗೆ ಬಳಸಿ ‘ವೆಲ್ಕಮ್ ಮೋದಿ’ ಎಂದು ಬರೆದು ಸ್ವಾಗತ
ಆಸ್ಟೇಲಿಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಆಸ್ಪ್ರೇಲಿಯಾ, ವಿಮಾನದ ಹೊಗೆ ಬಳಸಿ ‘ವೆಲ್ಕಮ್ ಮೋದಿ’ ಎಂದು ಬರೆಯುವ ಮೂಲಕ ಸ್ವಾಗತ ಕೋರಿದ್ದಾರೆ. ಸಿಡ್ನಿಯ ನೀಲಾಕಾಶದಲ್ಲಿ ಪೈಲಟ್ ಒಬ್ಬರು ವೆಲ್ಕಮ್ ಮೋದಿ ಎನ್ನುವ ವಿನ್ಯಾಸದಲ್ಲಿ ವಿಮಾನದ ಹೊಗೆಯನ್ನು ಬಿಡುವ ಮೂಲಕ ಮೋದಿ ಅವರ ಸ್ವಾಗತವನ್ನು ವಿಶೇಷವಾಗಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪ್ರೇಲಿಯಾದಲ್ಲಿರುವ ಭಾರತೀಯರು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಕ್ವಾಡ್ ಶೃಂಗಸಭೆ ರದ್ದಾದ್ರೂ ಆಸ್ಪ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ; ಜೋ ಬೈಡೆನ್ ಭೇಟಿಯಾಗ್ತಾರಾ ಮೋದಿ?
ಈ ಪ್ರದೇಶವನ್ನು ಈಗಾಗಲೇ ‘ಲಿಟ್ಲ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ಇಲ್ಲಿ ಭಾರತೀಯ ಖಾದ್ಯಗಳನ್ನು ಉಣಬಡಿಸುವ 20ಕ್ಕೂ ಹೆಚ್ಚು ಹೋಟೆಲ್ಗಳಿವೆ. ಭಾರತದ ಸೀರೆ, ಬಳೆ ಹಾಗೂ ಸಂಬಾರ ಪದಾರ್ಥಗಳನ್ನು ಮಾರಾಟ ಮಾಡುವ ಸಾಕಷ್ಟುಅಂಗಡಿಗಳಿವೆ. ಇಲ್ಲಿಗೆ ಮುಂಬೈನಿಂದ ನೇರವಾಗಿ ಭಾರತೀಯ ವಸ್ತುಗಳು ಸರಬರಾಜಾಗುತ್ತವೆ. ಹೀಗಾಗಿ ಈ ಪ್ರದೇಶದಲ್ಲಿ ‘ಲಿಟ್ಲ್ ಇಂಡಿಯಾ ಗೇಟ್ವೇ’ ನಿರ್ಮಿಸಲಾಗುತ್ತಿದೆ. ಆಸ್ಪ್ರೇಲಿಯಾದ ಈ ನಡೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಮೇ 19ರಿಂದ 6 ದಿನ ಮೋದಿ ವಿದೇಶ ಪ್ರವಾಸ: 71 ಸಾವಿರ ಜನರಿಗೆ ಉದ್ಯೋಗ ಪತ್ರ ವಿತರಣೆ