ಕೆಜಿಎಫ್‌, ಜಂಟಲ್‌ಮನ್‌ ಮೊದಲಾದ ಚಿತ್ರಗಳಿಗೆ ಸಾಹಿತ್ಯ ರಚಿಸಿ ಹೆಸರು ಮಾಡಿದ್ದ ಕೊಪ್ಪಳದ ಕಿನ್ನಾಳ್‌ ರಾಜ್‌ ಮೊದಲ ಬಾರಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನದ ಅಖಾಡಕ್ಕೂ ಇಳಿದಿದ್ದಾರೆ.

ಸರ್ವಾಧಿಕಾರಿ ‘ಹಿಟ್ಲರ್‌’ ಹೆಸರನ್ನೇ ಟೈಟಲ್‌ ಮಾಡಿಕೊಂಡಿಕೊಂಡು ಕಿನ್ನಾಳ್‌ ರಾಜ್‌ ಭೂಗತ ಲೋಕದ ಕತೆ ಹೇಳಲಿದ್ದಾರೆ. ಶ್ರೀಮುರುಳಿ ಅವರು ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಅನಾಥ ಹುಡುಗನೊಬ್ಬನ ಕಾನೂನುಬಾಹಿರ ಚಟುವಟಿಕೆಗಳು, ಅವನ ದರ್ಬಾರ್‌ಅನ್ನು ಈ ಚಿತ್ರ ಬಿಚ್ಚಿಡಲಿದೆ. ಭಾವನಾತ್ಮಕ ಸನ್ನಿವೇಶಗಳು, ಹಾಸ್ಯವೂ ಸೇರಿಕೊಂಡಿರುವ ಪಕ್ಕಾ ಮಾಸ್‌, ರೌಡಿಸಂ ಚಿತ್ರ ಇದಾಗಿದೆ ಎಂದು ಹೇಳಿಕೊಳ್ಳುತ್ತದೆ ಚಿತ್ರತಂಡ.

Add Asianetnews Kannada as a Preferred SourcegooglePreferred

ಲೋಹಿತ್‌ ಚಿತ್ರದ ನಾಯಕ. ಸಸ್ಯ ನಾಯಕಿ. ಬಲರಾಜವಾಡಿ, ವರ್ಧನ್‌ ತೀರ್ಥಹಳ್ಳಿ, ವಿಜಯ್‌ ಚಂಡೂರ್‌, ವೈಭವ್‌ ನಾಗರಾಜ್‌, ಮನಮೋಹನ್‌ ರೈ, ಗಣೇಶ್‌ ರಾವ್‌ ಕೇಸರ್‌ಕರ್‌, ವೇದ ಹಾಸನ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮೂರು ಹಾಡುಗಳಿಗೆ ಆಕಾಶ್‌ ಪರ್ವ ಸಂಗೀತ ನೀಡಿದ್ದಾರೆ.

ಛಾಯಾಗ್ರಹಣ ಜಿ.ವಿ. ನಾಗರಾಜ ಕಿನ್ನಾಳ, ಸಂಕಲನ ಗಣೇಶ್‌ ತೋರಗಲ್‌, ಸಾಹಿತ್ಯ ಪ್ರಮೋದ್‌ ಮರವಂತೆ, ಸಾಹಸ ಚಂದ್ರುಬಂಡೆ ಅವರದ್ದು. ಸದ್ಯ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡು, ಫೈಟ್‌ನ್ನು ಸಂಡೂರಿನಲ್ಲಿ ಚಿತ್ರೀಕರಣ ಮಾಡಲು ಯೋಚನೆ ರೂಪಿಸಲಾಗಿದೆ. ಗಾನಶಿವ ಮೂವೀಸ್‌ ಸಂಸ್ಥೆಯ ಮಮತಾ ಲೋಹಿತ್‌ ನಿರ್ಮಾಣ ಮಾಡುತ್ತಿರುವ ಚಿತ್ರವಿದು.