ವಾರದ ಹಿಂದೆ ಚಿತ್ರಮಂದಿರಗಳು ತೆರೆದಾಗ ಸಹಜವಾಗಿಯೇ ಗಾಂಧಿನಗರದಲ್ಲಿ ಒಂದಷ್ಟುಲೆಕ್ಕಾಚಾರಗಳಾಗಿದ್ದವು. ಮೊದಲ ವಾರದಲ್ಲಿ ಹೆಚ್ಚು ಪ್ರೇಕ್ಷಕರು ಬರದೇ ಇದ್ದರೂ ಎರಡು, ಮೂರನೇ ವಾರದಲ್ಲಿ ತುಸು ಚೇತರಿಕೆ ಕಾಣುತ್ತದೆ, ಹೊಸ ಚಿತ್ರಗಳು, ಸ್ಟಾರ್‌ಗಳ ಎಂಟ್ರಿಯಿಂದ ಪರಿಸ್ಥಿತಿ ಕೊಂಚ ಸುಧಾರಣೆ ಕಾಣಬಹುದು ಎಂದು ಅಂದಾಜಿಸಲಾಗಿತ್ತು. ಈಗ ವಾರ ತುಂಬಿದೆ. ಅಂದುಕೊಂಡಂತೆಯೇ ಆಗಿದೆ, ಏಳು ದಿನವಾದರೂ ಪ್ರೇಕ್ಷಕ ಎದ್ದಿಲ್ಲ.

ಅ.15ಕ್ಕೆ ಮಲ್ಟಿಪ್ಲೆಕ್ಸ್‌ಗಳು, ಅ. 16ಕ್ಕೆ ಸಿಂಗಲ್‌ ಸ್ಕ್ರೀನ್‌ಗಳು ತೆರೆದುಕೊಂಡ ಬಳಿಕ ‘ಐದು ಅಡಿ ಏಳು ಅಂಗುಲ’, ‘ಥರ್ಡ್‌ ಕ್ಲಾಸ್‌’, ‘ಶಿವಾರ್ಜುನ’, ‘ಶಿವಾಜಿ ಸುರತ್ಕಲ್‌’, ‘ಲವ್‌ ಮಾಕ್‌ಟೇಲ್‌’, ‘ಕಾಣದಂತೆ ಮಾಯವಾದನು’ ಚಿತ್ರಗಳು ಮರುಬಿಡುಗಡೆಯಾದವು. ಮೊದಲ ದಿನ ಚಿತ್ರತಂಡದ ಮಂದಿಯೇ ಸಿನಿಮಾ ನೋಡಿದರು. ಶನಿವಾರ, ಭಾನುವಾರದಂದು ಪ್ರೇಕ್ಷಕರ ಸಂಖ್ಯೆಯಲ್ಲಿ ತುಸು ಏರಿಕೆ ಕಂಡರೂ ಮಳೆಯ ಕಾರಣ ನಿರೀಕ್ಷೆಯ ಮಟ್ಟಮುಟ್ಟಲಾಗಿಲ್ಲ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದಂತೆ ಕಂಡರೂ ಡೌನ್‌ ಸೆಂಟರ್‌ಗಳಲ್ಲಿ ಇನ್ನೂ ಥಿಯೇಟರ್‌ಗಳ ಬಾಗಿಲೇ ತೆರೆದಿಲ್ಲ. ಶುರುವಾಗಿರುವ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆರಳೆಣಿಕೆಯಷ್ಟುಪ್ರೇಕ್ಷಕರು ಮಾತ್ರ ದರ್ಶನ ನೀಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಕಾಯಂ ಬಾಗಿಲು ಮುಚ್ಚಿತು ಪ್ರಸಿದ್ಧ ಕನ್ನಡ ಚಿತ್ರಮಂದಿರ! 

ರಾಜ್ಯದಲ್ಲಿ ಇರುವ 650 ಸಿಂಗಲ್‌ ಸ್ಕ್ರೀನ್‌, 260 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ ತೆರೆದಿರುವ ಶೇ. 20ರಷ್ಟುಸ್ಕ್ರೀನ್‌ಗಳಲ್ಲಿ ಶೇ. 20ರಿಂದ 30ರಷ್ಟುಪ್ರೇಕ್ಷಕರು ಭರ್ತಿಯಾಗಿದ್ದರು. ಕೆಲವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಇಲ್ಲದೇ ನಿಗದಿಯಾಗಿದ್ದ ಶೋಗಳನ್ನೂ ಕ್ಯಾನ್ಸಲ್‌ ಮಾಡಿದ ಘಟನೆಗಳೂ ದಾಖಲಾಗಿವೆ. ಇದೇ ವೇಳೆ ಮಲ್ಟಿಪ್ಲೆಕ್ಸ್‌ನಲ್ಲಿ ಒಬ್ಬ ಪ್ರೇಕ್ಷಕನಿಗಾಗಿಯೇ ಪ್ರದರ್ಶನ ಮಾಡಿದ ಪ್ರಸಂಗವೂ ನಡೆದಿದೆ.

"

ಈ ಹಿಂದೆಯೇ ಬಿಡುಗಡೆಯಾದ ಚಿತ್ರಗಳಿಂದ ಹೆಚ್ಚಿನ ಪರಿಣಾಮ ಆಗದು, ಹೊಸ ಚಿತ್ರಗಳು ಬರಬೇಕು, ಸ್ಟಾರ್‌ಗಳ ಎಂಟ್ರಿಯಾಗಬೇಕು ಆಗ ಮಾತ್ರವೇ ನೈಜ ಚಿತ್ರಣ ಸಿಕ್ಕುವುದು ಎನ್ನುವುದು ಗಾಂಧಿನಗರದ ಮಾತಾಗಿತ್ತು. ಅದರಂತೆ ದಸರಾ ಅಂಗವಾಗಿ ಈ ವಾರ ಚಿರಂಜೀವಿ ಸರ್ಜಾ ಅಭಿನಯದ ಹೊಸ ಚಿತ್ರ ‘ರಣಂ’, ನೇಹಾ ಪಾಟೀಲ್‌ ಅಭಿನಯದ ‘ಹುಲಿದುರ್ಗ’ ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿಕೊಂಡಿದ್ದರೂ ಅಂತಿಮ ಹಂತದಲ್ಲಿ ಬಿಡುಗಡೆಯಿಂದ ಹಿಂದೆ ಸರಿದಿವೆ.

ಪೇಪರ್‌ಲೆಸ್‌ ಟಿಕೆಟ್‌ ವ್ಯವಸ್ಥೆ: ಆ.1ರಿಂದ ಸುರಕ್ಷಿತ ಚಿತ್ರ ಪ್ರದರ್ಶನ..?

ಜೊತೆಗೆ ಸುದೀಪ್‌ ನಟನೆಯ ‘ಕೋಟಿಗೊಬ್ಬ 2’ ರಾಧಿಕಾ ಕುಮಾರಸ್ವಾಮಿ ನಟನೆಯ ‘ದಮಯಂತಿ’ ವಿನೋದ್‌ ಪ್ರಭಾಕರ್‌ ಅವರ ‘ರಗಡ್‌’ ಹೊಸಬರ ‘ವಜ್ರಮುಖಿ’, ‘ಕೆಜಿಎಫ್‌ ಚಾಪ್ಟರ್‌ 1’, ‘ಟಗರು’, ‘ನಾಗರಹಾವು’ ಮೊದಲಾದ ಹಿಟ್‌ ಚಿತ್ರಗಳು ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಮರು ಬಿಡುಗಡೆ ಕಾಣುತ್ತಿವೆ. ‘ದಿಯಾ’ ಕ್ಲೈಮ್ಯಾಕ್ಸ್‌ ಬದಲಾಯಿಸಿಕೊಂಡು ಹೊಸ ರೂಪದಲ್ಲಿ ಬರುತ್ತಿದೆ. ಇವುಗಳಿಂದ ಈ ವಾರ ಪ್ರೇಕ್ಷಕರ ಸಂಖ್ಯೆ ವೃದ್ಧಿಸಬಹುದು ಎನ್ನುವ ಭರವಸೆ ಗಾಂಧಿನಗರದ್ದು.