ನಗರ ಜೀವನದ ಜಂಜಾಟದಿಂದ ಬೇಸತ್ತ ಮನಸುಗಳು ಸ್ವಲ್ಪ ಹಗುರಾಗಲು ಟ್ರಿಪ್ ಹೊರಡುತ್ತಾರೆ. ಅಲ್ಲಿಗೆ ಹೋದಾಗ ಏನೇನಾಗುತ್ತದೆ? ಏನೆಲ್ಲಾ ಬದುಕಿನ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ತುಂಬಾ ರೋಚಕವಾಗಿ ಪಯಣಿಗರು ಚಿತ್ರದಲ್ಲಿ ಹೇಳಲಾಗಿದೆ. 

ಬೆಂಗಳೂರಿನಂಥಾ ನಗರಗಳ ತಿರುಗಣಿಗೆ ಬಿದ್ದವರ ಪಾಲಿಗೆ ಪರವೂರುಗಳಿಗೆ ಪಯಣ ಬೆಳೆಸೋದು ತಾತ್ಕಾಲಿಕ ರಿಲೀಫ್. ಆದರೆ ಕೊಂಚ ಎಚ್ಚರ ತಪ್ಪಿದರೂ ಅವಘಡಗಳು ಮೈಲಿಗಲ್ಲಿಗೊಂದರಂತೆ ಕಾದು ಕೂತಿರುತ್ತವೆ. 

Add Asianetnews Kannada as a Preferred SourcegooglePreferred

ಮೋಜು ಗಾಢ ಮೌನವಾಗಿ ಬದಲಾಗೋದಕ್ಕೆ ಹೆಚ್ಚು ಸಮಯವೇನೂ ಹಿಡಿಯುವುದಿಲ್ಲ. ರಾಜ್ ಗೋಪಿ ನಿರ್ದೇಶನ ಮಾಡಿರುವ ಪಯಣಿಗರು ಚಿತ್ರ ಕೂಡಾ ಇಂಥಾ ಎಳೆಯ ಆಚೀಚಿನ ರೋಚಕವಾದ, ಎಲ್ಲರ ಬದುಕಿಗೂ ಹತ್ತಿರವಾದ ಕಥಾ ಹಂದರವನ್ನೊಳಗೊಂಡಿದೆ.

ಇಂಥಾ ಪ್ರವಾಸ ಅಂದಾಗ ಯುವ ಮನಸುಗಳನ್ನಿಟ್ಟುಕೊಂಡು ಕಥೆ ಹೇಳೋದು ಮಾಮೂಲು. ಆದರೆ ರಾಜ್ ಗೋಪಿ ಇಲ್ಲಿ ಸಂಸಾರದ ಭಾರ ಹೊತ್ತಿರೋ ನಡುವಯಸ್ಸಿನ ಸ್ನೇಹಿತರ ಕಥೆ ಹೇಳ ಹೊರಟಿದ್ದಾರೆ. ಎಲ್ಲ ಜಂಜಾಟಗಳಿಂದ ಒಂದಷ್ಟು ದಿನಗಳ ಮಟ್ಟಿಗೆ ತಲೆತಪ್ಪಿಸಿಕೊಳ್ಳುವ ಇರಾದೆಯಿಂದಲೇ ಐವರು ಸ್ನೇಹಿತರು ಗೋವಾದತ್ತ ಟ್ರಿಪ್ಪು ಹೊರಡುತ್ತಾರೆ. ಈ ಜರ್ನಿಯಲ್ಲಿ ಎಂಥವರೂ ಬೆಚ್ಚಿಬೀಳುವ, ಅಚ್ಚರಿಗೊಳ್ಳುವಂಥಾ ಅನಿರೀಕ್ಷಿತ ಘಟನಾವಳಿಗಳು ತೆರೆದುಕೊಳ್ಳುತ್ತಾ ಸಾಗುತ್ತವೆ.

ಹೀಗೆ ಬೆಂಗಳೂರಿನಿಂದ ಗೋವಾ ದಿಕ್ಕಿಗೆ ಸಾಗೋ ಗೆಳೆಯರ ಪಯಣದ ಮೂಲಕವೇ ಥ್ರಿಲ್ಲರ್ ಅನ್ನಿಸುವಂಥಾ, ವಾಸ್ತವಕ್ಕೆ ಹತ್ತಿರಾದಂಥಾ, ನೋಡಿದವರೆಲ್ಲ ತಮ್ಮನ್ನೇ ತಾವು ಪರದೆಯ ಮೇಲೆ ಕಂಡುಕೊಳ್ಳುವಂಥಾ ಕಥೆಯನ್ನು ಪಯಣಿಗರು ಚಿತ್ರ ಒಳಗೊಂಡಿದೆ. ಜರ್ನಿ ಬೇಸಿನ ಒಂದಷ್ಟು ಕಥೆಗಳು ಈಗಾಗಲೇ ಬಂದಿವೆ. ಆದರೆ ಪಯಣಿಗರು ಕಥೆ, ನಿರೂಪಣೆ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಡಿಫರೆಂಟು.

ಲಕ್ಷ್ಮಣ್ ಶಿವಶಂಕರ್, ರಾಘವೇಂದ್ರ ನಾಯಕ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು ಮತ್ತು ಸುಧೀರ್ ಮೈಸೂರು ಪಯಣಿಗರಾಗಿ ಎಲ್ಲರನ್ನೂ ಆವರಿಸಿಕೊಳ್ಳುವಂಥಾ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ಪ್ರತೀ ಪಾತ್ರಗಳೂ ಕೂಡಾ ಒಂದೊಂದು ತೆರನಾದ ಮನಸ್ಥಿತಿಗಳನ್ನು ಬಿಂಬಿಸಲಿವೆಯಂತೆ. ಈ ಪಯಣಿಗರ ಜರ್ನಿರ ರೋಚಕತೆ ಎಂಥಾದ್ದೆಂಬುದು ಇದೇ ತಿಂಗಳ ಹದಿನೇಳರಂದು ಜಾಹೀರಾಗಲಿದೆ.