ಶಿವಣ್ಣ 'ಆಯುಷ್ಮಾನ್ ಭವ' ರಿಲೀಸ್ ಡೇಟ್ ಮುಂದೂಡಿಕೆ | ತಾಂತ್ರಿಕ ದೋಷವೇ ಚಿತ್ರ ಬಿಡುಗಡೆ ಮುಂದೆ ಹೋಗಲು ಕಾರಣ ಎಂದ ನಿರ್ಮಾಪಕ | ಮುಂದಿನ ರಿಲೀಸ್ ದಿನಾಂಕ ಸದ್ಯದಲ್ಲೇ ಗೊತ್ತಾಗಲಿದೆ
ಸೆಂಚುರಿ ಸ್ಟಾರ್ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ ಕೊಂಚ ಕಡಿಮೆ ಆಗಬಹುದು. ಯಾಕೆಂದರೆ ತಮ್ಮ ನೆಚ್ಚಿನ ನಾಯಕನ ನಟನ ಸಿನಿಮಾ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಈ ಮೊದಲೇ ನಿರ್ಧರಿಸಿದಂತೆ ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಶಿವಣ್ಣ ನಟನೆಯ ‘ಆಯುಷ್ಮಾನ್ಭವ’ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು.
ಅಭಿಮಾನಿಗಳು ಕೂಡ ಈ ವರ್ಷದ ಕನ್ನಡ ರಾಜ್ಯೋತ್ಸವನ್ನು ಮತ್ತಷ್ಟು ರಂಗಾಗಿ ಆಚರಿಸುವ ಯೋಚನೆಯಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.
ಈ ನಿರ್ಧಾರಕ್ಕೆ ಕಾರಣ ಏನು..
ತಾಂತ್ರಿಕ ಸಮಸ್ಯೆ ಎಂಬುದು ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ಕೊಡುವ ಉತ್ತರ. ಅವರೇ ಹೇಳುವಂತೆ, ‘ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದೇನೆ. 20 ಕೋಟಿ ರು. ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದೆ. ಗ್ರಾಫಿಕ್ಸ್ ಈ ಚಿತ್ರದ ಪ್ರಮುಖ ಹೈಲೈಟ್. ಪಿ ವಾಸು ಹಾಗೂ ಶಿವರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ‘ಶಿವಲಿಂಗ’ ಸಿನಿಮಾ ಬಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಹೀಗಾಗಿ ‘ಆಯುಷ್ಮಾನ್ಭವ’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸಣ್ಣ ಪುಟ್ಟ ತಪ್ಪುಗಳಿದ್ದರೂ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಸಾಧ್ಯತೆ ಇದೆ.
ರಿಲೀಸ್ ಆಯ್ತು ಆಯುಷ್ಮಾನ್ ಭವ ಟೀಸರ್; ಶಿವಣ್ಣ ಅಬ್ಬರ ಹೀಗಿದೆ ನೋಡಿ
ಒಂದು ಒಳ್ಳೆಯ ಹಾಗೂ ಅದ್ದೂರಿ ಕಮರ್ಷಿಯಲ್ ಸಿನಿಮಾ ಮಾಡಿದ್ದೇವೆ. ಗ್ರಾಫಿಕ್ಸ್ ಕಾರಣಕ್ಕಾಗಿ ಒಂದಿಷ್ಟು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಪ್ರಾಣಿಗಳನ್ನು ಬಳಸಿದ್ದೇವೆ. ದೊಡ್ಡ ಮಟ್ಟದಲ್ಲಿ ಚಿತ್ರಕ್ಕೆ ಪ್ರಚಾರ ಬೇಕಿದೆ. ಕ್ವಾಲಿಟಿಗೆ ಹೆಚ್ಚು ಮಹತ್ವ ಕೊಡಬೇಕು.. ಈ ಎಲ್ಲ ಕಾರಣಗಳಿಗೆ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡುತ್ತಿದ್ದೇವೆ ಎನ್ನುತ್ತಾರೆ ಯೋಗೀಶ್ ದ್ವಾರಕೀಶ್.
ಹಾಗಾದರೆ ಮತ್ತೆ ಸಿನಿಮಾ ಯಾವಾಗ ಬಿಡುಗಡೆ ಎನ್ನುವ ಕುತೂಹಲಕ್ಕೆ ಕನಿಷ್ಠ ಎರಡು ವಾರ ಕಾಯಬೇಕು. ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್ ತಿಂಗಳಲ್ಲೇ ಸಿನಿಮಾ ತೆರೆ ಮೇಲೆ ಮೂಡಲಿದೆ. ಅನಂತ್ನಾಗ್, ಪ್ರಭು ಮುಂತಾದ ದಿಗ್ಗಜರ ತಾರಾಗಣ ಇರುವ ಸಿನಿಮಾ. ಇಲ್ಲಿ ನಟ ಶಿವರಾಜ್ಕುಮಾರ್ ಅವರಿಗೆ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
