ಎಸ್ಪಿಬಿ ಚೇತರಿಕೆಗೆ ಚಿತ್ರರಂಗದ ಪ್ರಾರ್ಥನೆ; ಕಲಾವಿದರಿಂದ ಮೃತ್ಯುಂಜಯ ಮಂತ್ರ ಪಠಣ!
ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಶೀಘ್ರ ಚೇತರಿಕೆಗೆ ಕನ್ನಡ ಚಿತ್ರರಂಗದ ಪ್ರಮುಖರು ಹಾರೈಸಿದ್ದು, ಕಲಾವಿದರು ಮೃತ್ಯುಂಜಯ ಮಂತ್ರ ಪಠಿಸಿದ್ದಾರೆ.
ಬೆಂಗಳೂರಿನ ಕಲಾವಿದರ ಸಂಘದ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ನಟ ಯಶ್, ಗಾಯಕ ವಿಜಯ್ ಪ್ರಕಾಶ್, ಹಿರಿಯ ನಟ ದೊಡ್ಡಣ್ಣ, ಹಂಸಲೇಖ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಮುಖ್ಯಮಂತ್ರಿ ಚಂದ್ರು, ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಭಾಗವಹಿಸಿ ಎಸ್ಪಿಬಿ ಶೀಘ್ರ ಚೇತರಿಕೆಗೆ ಹಾರೈಸಿದರು.
"
ಈ ಸಂದರ್ಭ ಮಾತನಾಡಿದ ಸುಮಲತಾ, ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮೆಲ್ಲರ ಆಸ್ತಿ. ಕೋಟ್ಯಂತರ ಅಭಿಮಾನಿಗಳ ಹಾರೈಕೆಯ ಪರಿಣಾಮ ಅವರು ಬೇಗ ಚೇತರಿಸಿಕೊಳ್ಳಲಿದ್ದಾರೆ. ಅವರನ್ನು ಕಳೆದುಕೊಳ್ಳಲು ನಾವ್ಯಾರೂ ಸಿದ್ಧರಿಲ್ಲ ಎಂದರು.
'ಅಂಬಿ ಸಂಭ್ರಮಕ್ಕಾಗಿ ದೊಡ್ಡ ರಾಜಿ ಮಾಡಿಕೊಂಡಿದ್ದ SPB' ಚೇತರಿಕೆಗೆ ಸ್ಯಾಂಡಲ್ವುಡ್ ಪ್ರಾರ್ಥನೆ
ನಟ ಯಶ್ ಮಾತನಾಡಿ, ‘ನನ್ನ ರಾಕಿ ಚಿತ್ರಕ್ಕಾಗಿ ಎಸ್ಪಿಬಿ ಅವರು 1 ಹಾಡು ಹಾಡಿದ್ದಾರೆ. ಅದನ್ನು ಕೇಳಿ ಥ್ರಿಲ್ ಆಗಿದ್ದೆ. ಹಂಸಲೇಖ-ಎಸ್ಪಿಬಿ ಜೋಡಿಯ ಹಾಡಿನಲ್ಲಿ ಶಾಲಾ ಪಠ್ಯಕ್ಕಿಂತ ಹೆಚ್ಚಿನ ನೀತಿಗಳನ್ನು ಕಲಿತಿದ್ದೇವೆ. ಎಸ್ಪಿಬಿ ಕರ್ನಾಟಕದ ಜೊತೆ ಬೆರೆತುಹೋಗಿದ್ದಾರೆ. ಅವರು ಆದಷ್ಟುಬೇಗ ಹಾಡುವಂತಾಗಲಿ. ಯಾರೇ ನೋವಲ್ಲಿದ್ದರೂ ಅವರ ಬೆಂಬಲಕ್ಕೆ ನಿಲ್ಲುವ ಒಳ್ಳೆಯ ಗುಣ ಕನ್ನಡ ಚಿತ್ರರಂಗದ್ದು. ಇವತ್ತಿನ ಕಾರ್ಯಕ್ರಮದ ಮೂಲಕ ನಾವೆಲ್ಲ ಎಸ್ಪಿಬಿ ಅವರೊಂದಿಗಿದ್ದೇವೆ ಎಂದು ಸಾರಿ ಹೇಳಿದಂತಾಗಿದೆ. ಚಿಕ್ಕಂದಿನಿಂದ ಅವರ ಹಾಡು ಕೇಳುತ್ತಾ ಬೆಳೆದವರು ನಾವು, ಅವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತೇವೆ’ ಎಂದರು.