ಸ್ಟಾರ್ ಸಿನಿಮಾಗಳು ಓಟಿಟಿಗೆ ಬರುತ್ತವೆಯೇ?
ಚಿತ್ರಪ್ರದರ್ಶಕರು ಹಾಗೂ ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯ ಸ್ಪೋಟಗೊಂಡ ಕಾರಣ, ಕನ್ನಡದ ಪ್ರತಿಷ್ಠಿತ ನಿರ್ಮಾಪಕರು ತಮ್ಮ ದೊಡ್ಡ ಸಿನಿಮಾಗಳನ್ನೂ ಓಟಿಟಿಯಲ್ಲೇ ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.
ಪ್ರದರ್ಶಕರು ಥೇಟರ್ ಬಾಡಿಗೆಯ ಬದಲು ಮಲ್ಟಿಪ್ಲೆಕ್ಸ್ ಮಾದರಿಯಲ್ಲಿ ಲಾಭ ಹಂಚಿಕೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಯಶ್ಗೆ ವಿಶ್ ಮಾಡಿದ ಕ್ರಿಶ್, ಕೆಜಿಎಫ್ -2ಗೆ ಹೊಸ ಸುಳಿವು ಕೊಟ್ಟ ಹೃತಿಕ್!
ಪ್ರದರ್ಶಕರ ಬೇಡಿಕೆಯ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಚರ್ಚಿಸಲು ಸಕ್ರಿಯ ನಿರ್ಮಾಪಕರ ಸಂಘ ಬುಧವಾರ ಸಭೆ ಸೇರಿತ್ತು. ಈಗ ಬಿಡುಗಡೆಗೆ ಸಿದ್ಧವಿರುವ ಚಿತ್ರಗಳ ನಿರ್ಮಾಪಕರೆಲ್ಲ ಭಾಗವಹಿಸಿದ್ದ ಸಭೆಯಲ್ಲಿ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ಸೂರಪ್ಪ ಬಾಬು, ಉಮಾಪತಿ, ಜಾಕ್ ಮಂಜು, ಜಯಣ್ಣ, ಗಂಗಾಧರ್, ಕೆಪಿ ಶ್ರೀಕಾಂತ್ -ಮುಂತಾದವರು ಪಾಲ್ಗೊಂಡಿದ್ದರು. ಪ್ರದರ್ಶಕರು ಪಟ್ಟು ಹಿಡಿದರೆ ಓಟಿಟಿಯ ಮೂಲಕ ಚಿತ್ರ ಪ್ರದರ್ಶನಕ್ಕೆ ಮುಂದಾಗುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ಮಧ್ಯೆ ಶೇಕಡಾ 100 ಪ್ರೇಕ್ಷಕರಿಗೆ ಅವಕಾಶ ಕೊಡುವ ತಮಿಳ್ನಾಡಿನ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಆಕ್ಷೇಪಿಸಿದೆ. ಹೀಗಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಓಟಿಟಿಯತ್ತ ನಿರ್ಮಾಪಕರು ಮನಸ್ಸು ಮಾಡುವುದಕ್ಕೆ ಇದೂ ಕೂಡ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ.