ರ್ದೇಶಕ ಮಂಸೋರೆ ಎರಡು ದೊಡ್ಡ ಬಜೆಟ್‌ನ ಕತೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಆ ಎರಡೂ ಕತೆಗಳನ್ನೂ ದಕ್ಷಿಣ ಭಾರತ ಚಿತ್ರರಂಗದ ಇಬ್ಬರು ಸ್ಟಾರ್‌ ನಟಿಯರ ಮುಂದೆ ಇಟ್ಟಿದ್ದಾರೆ. ಒಬ್ಬರು ಅನುಷ್ಕಾ ಶೆಟ್ಟಿ, ಮತ್ತೊಬ್ಬರು ಸಾಯಿಪಲ್ಲವಿ. ಈ ಇಬ್ಬರನೂ ಭೇಟಿ ಮಾಡಿರುವ ಮಂಸೋರೆ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

ಮಂಸೋರೆ ಮಾತುಗಳು ಇಲ್ಲಿವೆ:

ಸ್ವತಂತ್ರ ಭಾರತದ ರಾಜಕೀಯ ಕತೆ

ಕಳೆದ ವರ್ಷ ‘ಆ್ಯಕ್ಟ್ 1978’ ಚಿತ್ರ ತೆರೆಕಂಡು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು. ಈ ಚಿತ್ರದ ನಂತರ ಸಿನಿಮಾದಂತಹ ಪ್ರಭಾವಿ ಮಾಧ್ಯಮದಲ್ಲೂ ಸೃಜನಶೀಲವಾಗಿ ಪ್ರಶ್ನಿಸುವ ಕೆಲಸ ಮಾಡಲು ಸಾಧ್ಯ ಎಂದುಕೊಂಡಾಗ ಹುಟ್ಟಿಕೊಂಡಿದ್ದೇ ಒಂದು ಪೊಲಿಟಿಕಲ್‌ ಕತೆ. 75 ವರ್ಷಗಳ ಸ್ವತಂತ್ರ ಭಾರತದಲ್ಲಿ ರಾಜಕೀಯವಾಗಿ ಮಹಿಳೆಯರನ್ನು ನೋಡಿದ ರೀತಿ ಮತ್ತು ಅದರ ಹಿಂದಿನ ಸಂಗತಿಗಳನ್ನು ಹೇಳುವ ನಿಟ್ಟಿನಲ್ಲಿ ಒಂದು ಕತೆ ಮಾಡಿಕೊಂಡಿದ್ದೆ.

ಸಾಯಿಪಲ್ಲವಿ ಕತೆ ಕೇಳಿಸಿಕೊಂಡರು

ಕರ್ನಾಟಕದ ಕೇಂದ್ರವಾಗಿ ಇಡೀ ದಕ್ಷಿಣ ಭಾರತದ ರಾಜಕೀಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಈ ಕತೆಗೆ ನಟಿ ಸಾಯಿಪಲ್ಲವಿ ಸೂಕ್ತ ಎನಿಸಿದ್ದು ಅವರ ನಟನೆಯ ತಮಿಳಿನ ಎನ್‌ಬಿಕೆ ಹಾಗೂ ಪಾವ ಕಧೈಗಳ್‌ ಚಿತ್ರಗಳನ್ನು ನೋಡಿ. ನನ್ನ ಪೊಲಿಟಿಕಲ್‌ ಕತೆಗೆ ಇವರೇ ಸೂಕ್ತ ಎನಿಸಿ ನಿರ್ಮಾಪಕರಿಗೆ ಹೇಳಿದೆ. ನಂತರ ಅವರೇ ಫೋನ್‌ ಮಾಡಿ ಕೊಟ್ಟರು. ಸಾಯಿಪಲ್ಲವಿ ಜತೆ ನಾನೇ ಮಾತನಾಡಿದೆ. ಒಂದು ಸಾಲಿನ ಕತೆ ಸಾಯಿಪಲ್ಲವಿಗೆ ಇಷ್ಟಆಗಿದೆ. ಹೀಗಾಗಿ ಪೂರ್ತಿ ಸ್ಕಿ್ರಪ್ಟ್‌ ಕೇಳಿದ್ದಾರೆ. ಇದರ ನಡುವೆ ನನ್ನ ಪ್ರೊಫೈಲ್‌ ಕೂಡ ಕಳಿಸಿದ್ದೆ. ಅವರಿಗೆ ನನ್ನ ‘ನಾತಿಚರಾಮಿ’ ಸಿನಿಮಾ ಇಷ್ಟಆಗಿದ್ದನ್ನು ಹೇಳಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಷ್ಟ್ರ ಪ್ರಶಸ್ತಿ ಪುರಸ್ಕೃತ' ನಿರ್ದೇಶಕ ಮಂಸೋರೆ!

ಅನುಷ್ಕಾ ಶೆಟ್ಟಿಮೆಚ್ಚಿದ ಅಬ್ಬಕ್ಕ ಕತೆ

ನಾನು ರಾಣಿ ಅಬ್ಬಕ್ಕನ ಬಗ್ಗೆ ಕತೆ ಮಾಡಿಕೊಂಡಿದ್ದೆ. ಈ ಕತೆಗೆ ಅನುಷ್ಕಾ ಶೆಟ್ಟಿಬೇಕು ಎಂದು ಕೇಳಿದಾಗ ನಿರ್ಮಾಪಕರು ತೆಲುಗಿನವರು ಆಗಿದ್ದರಿಂದ ಅನುಷ್ಕಾ ಜತೆಗೆ ಮಾತುಕತೆ ಮಾಡಿಸಿದರು. ಅವರಿಗೆ ರಾಣಿ ಅಬ್ಬಕ್ಕನ ಕತೆ ಇಷ್ಟವಾಗಿದೆ. ಆದರೆ, ಅವರು ‘ಬೇರೆ ನಿರ್ಮಾಣ ಸಂಸ್ಥೆಯಲ್ಲಿ ಚಿತ್ರ ಮಾಡಲಾರೆ. ಯುವಿ ಕ್ರಿಯೇಷನ್‌ನಲ್ಲಿ ಈ ಕತೆ ಸಿನಿಮಾ ಆಗುವುದಾದರೆ ನಾನು ನಟಿಸುತ್ತೇನೆ’ ಎಂದು ಹೇಳಿ ಯುವಿ ಕ್ರಿಯೇಷನ್‌ ಜತೆಗೆ ಮೀಟಿಂಗ್‌ ಕೂಡ ಮಾಡಿಸಿದರು. ನಾನು ಆ ನಿರ್ಮಾಣ ಸಂಸ್ಥೆಗೆ ರಾಣಿ ಅಬ್ಬಕ್ಕನ ಕತೆ ಕಳುಹಿಸಿದ್ದೇನೆ. ಅಬ್ಬಕ್ಕನ ಕತೆ ಸೆಟ್ಟೇರುವ ಮುನ್ನ ಮತ್ತೊಂದು ಸಿನಿಮಾ ಮಾಡಬೇಕು ಎಂದುಕೊಂಡಾಗ ಸಾಯಿಪಲ್ಲವಿ ನಟನೆಯ ಪೊಲಿಟಿಕಲ್‌ ಕತೆ ಮಾಡುವ ಯೋಜನೆಗೆ ಚಾಲನೆ ಕೊಟ್ಟಿದ್ದೇನೆ.

ಒಂದು ಐತಿಹಾಸಿಕ ಕತೆಯ ಸಿನಿಮಾ. ಮತ್ತೊಂದು ರಾಜಕೀಯ ಆಧಾರಿತ ಚಿತ್ರ. ಇವೆರಡಕ್ಕೂ ನಿರ್ಮಾಪಕರು ಇದ್ದಾರೆ. ಒಂದು ಕತೆಯನ್ನು ನಿರ್ಮಾಣ ಸಂಸ್ಥೆ ಹಾಗೂ ಮತ್ತೊಂದು ಚಿತ್ರದ ಚಿತ್ರಕಥೆಯನ್ನು ನಟಿಗೆ ಒಪ್ಪಿಸುವ ಹಂತದಲ್ಲಿದ್ದೇನೆ.