ಬರಬೇಡಿ ಎನ್ನಲು ಮನಸ್ಸಿಲ್ಲ, ಇರೋ ಕಡೆಯಿಂದ ಹಾರೈಸಿ: ಧ್ರುವ ಸರ್ಜಾ
ನಟ ಧ್ರುವ ಸರ್ಜಾ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಎಲ್ಲರಿಗೂ ಇದಕ್ಕೆ ಕಾರಣವೇನೆಂದು ಗೊತ್ತು. ಅಭಿಮಾನಿಗಳು ಇರುವ ಕಡೆಯಿಂದಲೇ ಹಾರೈಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಕ್ಟೋಬರ್ 6ರಂದು 32ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ವರ್ಷ ಅಣ್ಣ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ಕಾರಣ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದು ಬೇಡ ಎಂದು ನಿರ್ಧರಿಸಿದ್ದಾರೆ. ಇದರ ಬಗ್ಗೆ ಟ್ಟೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಇದ್ದಲಿಯೇ ಶುಭ ಹಾರೈಸ ಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.
ಒಂದುವರೆ ಕೋಟಿ ಸೆಟ್ನಲ್ಲಿ ಪೊಗರು ಟೈಟಲ್ ಸಾಂಗ್!
ಧ್ರುವ ಟ್ಟೀಟ್:
'ಅಭಿಮಾನಿಗಳೇ ನಮ್ಮ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದಲ್ಲಾದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲೂ ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ,' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿ ಕೊಂಡಿದ್ದಾರೆ.
ಪ್ರತಿ ವರ್ಷವೂ ಧ್ರುವ ಸರ್ಜಾ ತಮ್ಮ ಹುಟ್ಟು ಹಬ್ಬದ ದಿನವನ್ನು ಅಭಿಮಾನಿಗಳಿಗೆ ಎಂದು ಮೀಸಲಿಡುತ್ತಾರೆ. ಬೆಳಗ್ಗೆಯಿಂದ ರಾತ್ರಿಯವರಿಗೂ ಅವರೊಟ್ಟಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ ಈ ವರ್ಷ ಚಿರು ಇಲ್ಲದೆ ಆಚರಣೆ ಮಾಡಲು ಯಾರಿಗೂ ಇಷ್ಟವಿಲ್ಲ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಧ್ರುವರನ್ನು ನೋಡಲು ಜನರು ಬಂದೇ ಬರುತ್ತಾರೆ ಎನ್ನುವ ಕಾರಣಕ್ಕೆ ಧ್ರುವ ಈ ಟ್ಟೀಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಧ್ರುವ ಹಾಗೂ ಪ್ರೇರಣಾಗೆ ಕೋವಿಡ್19 ಪಾಸಿಟಿವ್ ಇದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆರೋಗ್ಯದ ದೃಷ್ಟಿಯಿಂದಾನೂ ನಟ ಇಂಥದ್ದೊಂದು ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.
"
ಜೂನ್ 8ರಂದು ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ಬಲಿಯಾಗಿದ್ದು, ಪತ್ನಿ ಮೇಘನಾ ರಾಜ್ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಅ.4ರಂದು ಮೇಘನಾಗೆ ಸೀಮಂತ ಶಾಸ್ತ್ರವನ್ನು ಸರಳವಾಗಿ ಮಾಡಿದ್ದು, ಅಲ್ಲಿಯೂ ಧ್ರುವ ಅಣ್ಣನನ್ನು ನೆನೆದು ಕಣ್ಣೀರು ಹಾಕಿದ್ದರು.