ಹಳೆಯ ಪೆಟ್ರೋಮ್ಯಾಕ್ಸ್ಗೆ ಮರುಜೀವ;ಸತೀಶ್ ನೀನಾಸಂ, ವಿಜಯ್ ಚಿತ್ರದ ಹೊಸ ಕತೆ!
ಸತೀಶ್ ನೀನಾಸಂ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ರಂಗಭೂಮಿ ಹಂತದಿಂದಲೂ ಉತ್ತಮ ಒಡನಾಟ ಹೊಂದಿದ್ದವರು. ವಿಜಯ್ ನಿರ್ದೇಶನದಲ್ಲಿ ಸಿನಿಮಾ ಮಾಡಬೇಕು, ಸತೀಶ್ ನಿರ್ದೇಶನ ಮಾಡಬೇಕು ಎನ್ನುವ ಆಸೆ ಪರಸ್ಪರರಲ್ಲಿ ಇದ್ದರೂ ಅದಕ್ಕೆ ಕಾಲ ಕೂಡಿಬಂದಿರಲಿಲ್ಲ.
ಹಿಂದೊಮ್ಮೆ ಪೆಟ್ರೋಮ್ಯಾಕ್ಸ್ ಟೈಟಲ್ನಲ್ಲಿ ಈ ಜೋಡಿ ಒಂದಾಗುವ ಸುಳಿವು ನೀಡಿದ್ದರೂ ಅದು ಕಾರಣಗಳ ಸುಳಿಗೆ ಸಿಲುಕಿ ಹಿನ್ನೆಲೆಗೆ ಸರಿದಿತ್ತು. ಈಗ ಮತ್ತೆ ಹಳೆ ಪೆಟ್ರೋಮ್ಯಾಕ್ಸ್ ತುಸು ರಿಪೇರಿಯಾಗಿ ತೆರೆಯ ಮೇಲೆ ಬೆಳಗಲು ಸಿದ್ಧವಾಗುತ್ತಿದೆ. ಈ ಹಿಂದೆ ಮಾಡಿಕೊಂಡಿದ್ದ ಮೂಲ ಕತೆಯನ್ನೇ ತುಸು ಬದಲಾವಣೆ ಮಾಡಿ, ಅದಕ್ಕೊಂದಷ್ಟುಪಾಲಿಶ್ ಕೊಟ್ಟು ವಿಜಯ್ ಪ್ರಸಾದ್ ಹೊಸ ಸಿನಿಮಾ ಆಗಿಸುವ ಪ್ರಯತ್ನದಲ್ಲಿದ್ದಾರೆ.
ಶೀಘ್ರದಲ್ಲಿ ನೀನಾಸಂ ಸತೀಶ್ ಹೊಸ ಸಿನಿಮಾ ಶೀರ್ಷಿಕೆ ಬಿಡುಗಡೆ!
ಹಿಂದೆ ಸಿದ್ಲಿಂಗು, ನೀರ್ ದೋಸೆ ಚಿತ್ರಗಳಿಂದ ಪ್ರಸಿದ್ಧರಾಗಿದ್ದ ವಿಜಯ್ ಪರಿಮಳ ಲಾಡ್ಜ್ ಎನ್ನುವ ಚಿತ್ರ ಘೋಷಣೆ ಮಾಡಿದ್ದರು. ಅದರಲ್ಲಿ ಸತೀಶ್ ನೀನಾಸಂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವವರಿದ್ದರೂ ಅದಕ್ಕಿಂತ ಮೊದಲು ಹೊಸ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
‘ಈ ಹಿಂದೆ ಪೆಟ್ರೋಮ್ಯಾಕ್ಸ್ ಹೆಸರಿನಲ್ಲಿ ಕತೆ ಮಾಡಿಕೊಂಡಿದ್ದೆ. ಈಗ ಅದೇ ಕತೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಆಗದು. ಸತೀಶ್ ಬೆಳೆದಿದ್ದಾರೆ, ಅವರ ಇಮೇಜ್ಗೆ ತಕ್ಕಂತೆ ಕೆಲವು ಬದಲಾವಣೆ ಅನಿವಾರ್ಯ. ಬೇರೆ ಬೇರೆ ಪಾತ್ರಗಳನ್ನು ಸೇರಿಸಿದ್ದೇನೆ. ಮೂಲ ಕತೆ ನನ್ನೊಳಗೇ ಮಥಿಸಿ ಮಥಿಸಿ ತುಸು ಹೊಸ ರೂಪ ಪಡೆದುಕೊಂಡಿದೆ’ ಎನ್ನುವ ವಿಜಯ್ ಪ್ರಸಾದ್ ಅವರು ಭಾವನಾತ್ಮಕ ಅಡಿಪಾಯದ ಮೇಲೆ ಕಾಮಿಡಿ, ಮನರಂಜನೆಯ ಅಂಶಗಳನ್ನು ಸೇರಿಸಲು ಮುಂದಾಗಿದ್ದಾರೆ.
ನೀನಾಸಂ ಸತೀಶ್ ಸ್ಯಾಂಡಲ್ವುಡ್ಗೆ ಬಂದು 12 ವರ್ಷ!
ಮನುಷ್ಯ ಮೊದಲೇ ಮನಸ್ಸುಗಳಿಂದ ದೂರ ಆಗುತ್ತಿದ್ದ, ಕೊರೋನಾ ಬಂದು ದೈಹಿಕವಾಗಿಯೂ ದೂರವಾಗುವ ಸ್ಥಿತಿ ಬಂದಿದೆ. ಈ ವೇಳೆ ಜಾತಿ, ಧರ್ಮ, ಮೇಲು ಕೀಳು ಯಾವುದೂ ಇಲ್ಲದೇ ಒಬ್ಬ ತಾಯಿ ಮತ್ತು ನಾಲ್ಕು ಅನಾಥ ಮಕ್ಕಳ ನಡುವೆ ನಡೆಯುವ ಸಾಮಾಜಿಕ ಕತೆ ಇದು ಎನ್ನುವ ವಿಜಯ್ ಈಗ ಸ್ಟ್ರಿಪ್ಟ್ ವರ್ಕ್ ಮಾಡಿಕೊಳ್ಳುತ್ತಿದ್ದು, ಸದ್ಯದಲ್ಲೇ ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಿ ಶೂಟಿಂಗ್ಗೆ ಹೊರಡುವವರಿದ್ದಾರೆ. ಕಡೆಗೆ ಪೆಟ್ರೋಮ್ಯಾಕ್ಸ್ ಎನ್ನುವ ಹಳೆಯ ಟೈಟಲ್ಲೇ ಇದಕ್ಕೂ ಫಿಕ್ಸ್ ಆಗಬಹುದು. ಬದಲೂ ಆಗಬಹುದು. ಸದ್ಯದಲ್ಲೇ ಎಲ್ಲವೂ ಸ್ಪಷ್ಟವಾಗಲಿದೆ.