Asianet Suvarna News Asianet Suvarna News

ಅಬ್ಬಬ್ಬಾ! ಮೆಜೆಸ್ಟಿಕ್ ಎಂಬ ಮಾಯಾಜಾಲದ ಬಗ್ಗೆ ನಟ ಸಂಚಾರಿ ವಿಜಯ್ ಬರೆದ ಕಟು ಸತ್ಯವಿದು

ನಟ ಸಂಜಾರಿ ವಿಜಯ್  ಹೇಗೆ ಸ್ಟೈಲ್ ಮಾಡುತ್ತಿದ್ದರು ಗೊತ್ತಾ? ಬೆಂಗಳೂರಿಗೆ ಬರಬೇಕೆಂದು, ಸಿಟಿ ಬಸ್‌ನಲ್ಲಿ ಸೀಟು  ಗಿಟ್ಟಿಸಿಕೊಳ್ಳಲು ಪಟ್ಟ ಸಾಹಸ, ಊರಿನಿಂದ ತಂದ ಹಣವನ್ನು ಜೋಪಾನ ಮಾಡಲು ಹೇರ್‌ಪಿನ್ ಹಾಕಿದ ಕಥೆಯನ್ನು ಹಂಚಿಕೊಂಡಿದ್ದಾರೆ.

Kannada actor Sanchari Vijay recalls entering Bengaluru Majestic vcs
Author
Bangalore, First Published Jun 11, 2021, 12:35 PM IST

ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು!!!
******************************************
ವರುಷಗಳ ಹಿಂದೆ ನನ್ನ ಕೈಗೆ ಒಂದಿಷ್ಟು ಹಣ ಸಿಕ್ಕರೆ ಮುಗಿಯಿತು. ಹೇಳಿ ಕೇಳಿ ಶೋಕಿವಾಲನ ಬ್ರೀಡಿನಂತಿದ್ದ ನಾನು ಬೆಳ್ಳಂಬೆಳಗ್ಗೆ ಎದ್ದು ರೆಡಿಯಾಗಿ ಮುರುಕು ಮಸುಕು ಕನ್ನಡಿ ಮುಂದೆ ನಿಂತು ಮುಸುಡಿ  ಯಾವುದು ಕನ್ನಡಿಯ ಮೇಲಿನ ಧೂಳ್ಯಾವುದೂ ಗೊತ್ತಾಗದೆ ಅಳತೆ ಮೀರಿ ಮುಖದ ತುಂಬಾ ಪಾಂಡ್ಸ್ ಪೌಡರ್ ಮೆತ್ತಿಕೊಂಡು, ತಲೆಗೆ ಕೊಬ್ಬರಿ ಎಣ್ಣೆ ಸುರಿದು ಸೈಡಿನಿಂದ ಕ್ರಾಪು ತೆಗೆದು ಮೂವತ್ತು ರೂಪಾಯಿಯ ಕನ್ನಡಕ ಕಣ್ಣಿಗೆ ಬಿತ್ತೆಂದರೆ ಆಹ!!! ಜಗತ್ತೇ ಕಲರ್ಫುಲ್. ನಮ್ಮ ತಂದೆಯ ಶೂ ನನಗೂ ಮುಕ್ಕಾಲು ಭಾಗ ಸೈಜ್ ಆಗುತ್ತಿದ್ದರಿಂದ ಸ್ವಲ್ಪ ಬಟ್ಟೆಯನ್ನು ಹಿಮ್ಮಡಿಯ ಜಾಗಕ್ಕೆ ತುರುಕಿ ಬಿಗಿ ಮಾಡಿ ನೀರಿನಿಂದ ಅದರ ಮೇಲ್ಮೈ ಎಲ್ಲ ಒರೆಸಿ ಎರೆಡೂ ಪಾದಗಳಿಗೆ ಕೂರಿಸಿ ಊರಲ್ಲಿ ಟಾರ್ರೋಡು ಇರುತ್ತಿರಲಿಲ್ಲವಾದ್ದರಿಂದ ಶೂಗೆ ಮಣ್ಣು ಮೆತ್ತಿಕೊಳ್ಳಬಾರದೆಂದು ತುದಿಗಾಲಿನಲ್ಲೇ ಸೂಕ್ಷ್ಮವಾಗಿ ನಡೆಯುತ್ತಾ ದಾರಿಯಲ್ಲಿ ಎದುರು ಸಿಗುತ್ತಿದ್ದ ಶನಿ ಮಹಾತ್ಮನ ಗುಡಿಗೆ ಡೈ ಹೊಡೆದು ಬಸ್ ಸ್ಟಾಂಡ್ ಗೆ ಬಂದರೆ ಊರಿಗೆ ಊರೇ ಈ ನವರಂಗಿಯ ಅವತಾರ ನೋಡಿ ಮೂರ್ಛೆ ಹೋಗದೆ ಉಳಿದರೆ ಪುಣ್ಯ....

ಇಂಥಾ ಈ ನವರಂಗಿ ನಮ್ಮೂರಿಂದ ಹೊರಡುವ ಬೆಂಗಳೂರು-ಚಿಕ್ಕಮಗಳೂರಿನ ಬಸ್ಸು ಹತ್ತಿದವನೇ ಮೊದಲು ಜೋಪಾನ ಮಾಡುತ್ತಿದ್ದುದು ಪ್ಯಾಂಟ್ ಒಳಗಿನ ಸುರಂಗದೋಪಾದಿಯಲ್ಲಿದ್ದ ಚಡ್ಡಿಯ ಜೇಬಿನ ಹೇರ್ ಪಿನ್ನನ್ನು. ಕಾರಣ ಇವನ ಹತ್ತಿರ ಇರುವ ಹಣವನ್ನು ಎಲ್ಲಿ ಯಾರು ಕದ್ದುಬಿಡುತ್ತಾರೋ ಎಂದು ಜೋಪಾನ ಮಾಡುತ್ತಿದ್ದುದು ದೊಗಳೆಯ ಪ್ಯಾಂಟ್ ಒಳಗಿನ ಚಡ್ಡಿ ಅದರ ಮೇಲೊಂದು ಜಗದಗಲದ ಜೇಬು ಅಲ್ಲಿ ಮನೆಯಿಂದ ತಂದ  ಹಣನಿಧಿ. ಅದನ್ನು ಒಂದರಮೇಲೊಂದು ಸುರುಳಿಯಾಕಾರದಲ್ಲಿ ಸುತ್ತಿ ಅದಕ್ಕೊಂದು ರಬ್ಬರ್ ಬ್ಯಾಂಡ್ ಬಿಗಿದು, ಆ ಜೇಬನ್ನು ಸೀಲ್ ಮಾಡಲೆಂಬಂತೆ ಒಂದಷ್ಟು ಹೇರ್ ಪಿನ್ ಸಿಕ್ಕಿಸಿ ಎಂಥ ಚತುರ ಕಳ್ಳ ಕಾಕನೇ ಬಂದರೂ ಈ ಭದ್ರವಾದ ಕೋಟೆಯ ಒಂದು ಪಿನ್ನನ್ನೂ ಅಲುಗಾಡಿಸಲು ಸಾಧ್ಯವಾಗದಷ್ಟು ಸೇಫ್ಟಿ ಪಿನ್ನಿನ ಸೇಫ್ಟಿ....

Kannada actor Sanchari Vijay recalls entering Bengaluru Majestic vcs

ಭದ್ರವಾಗಿರುವುದು ಖಾತ್ರಿಯಾದ ಮೇಲೆ ಆಟ ಶುರು, ಅವರಿವರ ಜೊತೆ ಕಿತ್ತಾಡಿ ನೂಕಾಡಿ ತಳ್ಳಾಡಿ ಹಿಮಾಲಯ ಪರ್ವತದ ನೆತ್ತಿಯನ್ನೇ ಮುಟ್ಟಿದವನಂತೆ ಹೆಮ್ಮೆಯಿಂದ ಬೀಗುತ್ತಾ ಕೊನೆಗೂ ಡ್ರೈವರ್ ನ ಎಡ ಪಕ್ಕದಲ್ಲಿರುವ ಉದ್ದನೆಯ ಸೀಟನ್ನು ಗಿಟ್ಟಿಸಿಕೊಂಡೆ ತೀರಬೇಕು. ಅಷ್ಟು ಸಾಲದೆಂಬಂತೆ ನಾವು ಕೂರುವ ಜಾಗ ಡ್ರೈವರ್ ಸೀಟಿಗಿಂತ ತುಸು ಮುಂದೆಯೇ ಇರಬೇಕು ಹಾಗಿದ್ದರೆ ನಾವು ಡ್ರೈವರಿಗಿಂತ ಮುಂದಿದ್ದೇವೆ ಎಂಬ ಮಂಕು ಗರ್ವ ಬೇರೆ ಅಲ್ಲದೆ ನಮ್ಮ ಎಡ ಭುಜವನ್ನು ಗ್ಲಾಸಿಗೆ ಆನಿಸಿಕೊಂಡೇ ಕೂರಬೇಕು. ಅಪ್ಪಿ ತಪ್ಪಿ ಒಮ್ಮೆಲೇ ಬ್ರೇಕ್ ಏನಾದರೂ ಒತ್ತಿದರೆ ಗ್ಲಾಸು ಒಡೆದು ಬಸ್ಸಿನಾಚೆಗೆ ಮೊದಲನೇ ಪಲ್ಟಿ ಇವನೇ ಆಗಬೇಕು. ಹೀಗೆ  ಮಂಗನಾಟ ಆಡುತ್ತ ಅಡ್ಡ ಕೂತು ಡ್ರೈವರ್ ಗೆ ಸರಿಯಾಗಿ ಹಿಂದಿನ ಮಿರರ್ ಕಾಣದೆ ಹತ್ತಾರು ಸಲ ಒರಟು ಲಾಲಿ ಹಾಡಿಸಿ ಕೊಳ್ಳದಿದ್ದರೆ ತಿಂದದ್ದು ಅರಗುವುದು ಎಲ್ಲಿಂದ....

ಅದರಲ್ಲೂ ಚಳಿಗಾಲ ಅಥವಾ ಮಳೆಗಾಲವೇನಾದರೂ ಆಗಿದ್ದರಂತೂ ಮುಚ್ಚಿದ ಕಿಟಕಿಯ ಸಂದಿಯಿಂದ ಸಿಡಿಯುವ ಇರುಚಲು ನೀರನ್ನು ಪಕ್ಕದಲ್ಲಿ ಕುಳಿತಿದ್ದವರ ಮೇಲೆ ಸಿಡಿಯಲು ಬಿಟ್ಟು  ಬೀಗುವುದೊಂದು ಖಯಾಲಿ. ಸ್ವಲ್ಪ ಥಂಡಿಯಾಯಿತೆಂದರೆ ಸಾಕು ಎರೆಡು ಮೊಣಕಾಲನ್ನು ಮತ್ತು ಅಂಗೈಯ್ಯನ್ನು ಬಾನೆಟ್ ಗೆ ಒದ್ದುಕೊಂಡು ಕೂರುವುದು ಅದು ಬಿಸಿಯಾಗಿ ಅದರ ಶಾಖ ಮೊಣಕಾಲಿಗೋ ಅಂಗೈಗೋ ತಾಕಿದರೆ ಮನೆಯಲ್ಲಿ ಅಮ್ಮನ ಅಡುಗೆಯ ಒಲೆಯ ಮುಂದೆ ಕೂತು ಬಿಸಿ ಕಾಯಿಸಿದಷ್ಟೇ ಹಿತವಾದ ಅನುಭವ ನೀಡಿದಂತೆ  ಅನುಭವಿಸುವುದು. ಹೀಗೆ ಹಿಂದಿನ ಸೀಟಿನಲ್ಲಿ ಕೂರುವವರಿಗೆ ಯಾರಿಗಾದರು ಉಂಟೆ ಈ ಸ್ವರ್ಗ ಸುಖ. ಜೊತೆಗೆ ಮುಂದೆ ಕೂತರೆ ಆ ಗ್ಲಾಸಿನ ಮೂಲಕ ಕಾಣುವ ಎಲ್ಲ ಹಳ್ಳಿಗಳನ್ನು ನೋಡುತ್ತಾ ಕಳೆದ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆದ್ದುಬಂದ ಕ್ಯಾಂಡಿಡೇಟ್ ನಂತೆ ಚಿಳ್ಳೆಪಿಳ್ಳೆಗಳಿಂದ ಹಿಡಿದು ಕಂಡ ಕಂಡವರಿಗೆಲ್ಲಾ ಕೈ ಬೀಸಿದ್ದೇ ಬೀಸಿದ್ದು, ಏಕೆಂದರೆ ಎಲ್ಲಾ ಊರಿನ ಮುಂದಿನ ಉಸಾಬರಿಯೆಲ್ಲಾ ಮುಂದೆ ಕೂತ ಇವನದೇ ಅಲ್ಲವೇ? ಅದೂ ಅಲ್ಲದೆ ನಮ್ಮ ಬಸ್ಸು ಇರೋಬರೋ ವಾಹನಗಳನ್ನೆಲ್ಲಾ ಹಿಂದಿಕ್ಕಿ ಎಲ್ಲರಿಗಿಂತ ಮುಂದಿರಬೇಕು ಯಾಕಂದ್ರೆ ಇದು ನಮ್ಮಪ್ಪ ಕೊಡಿಸಿದ್ದಲ್ಲವೇ? 

5 ರೂಪಾಯಿ CT ಸ್ಕ್ಯಾನ್ ನಿಜವೇ?; ನಟ ಸಂಚಾರಿ ವಿಜಯ್ ಸ್ವಂತ ಅನುಭವ! 

ಆದರೆ ಇದೋ ಎಪ್ಪತ್ತು ಎಂಭತ್ತು ಸ್ಪೀಡ್ ಮುಟ್ಟಿದ ತಕ್ಷಣ ಲೇಯ್ ಯಾಕೋ ಹಿಂಗ್ ತುಳೀತಿಯ ನನ್ನಾ ಅಂತ ಬುಸುಗುಡುತ್ತಾ ಬಾನೆಟ್ ಒಳಗಿಂದ ಬಿಸಿ ನೀರ ಬುಗ್ಗೆಗಳ ತೆಗೆದು ನಮ್ಮ ಕಾಲುಗಳ ಮೇಲೆ ಸಿಡಿಸಿ ಆಗಾಗ ಸೇಡು ತೀರಿಸಿಕೊಳ್ಳುತ್ತಿತ್ತು. ಅಂಥದ್ರಲ್ಲಿ ನಮ್ಮ ಬಸ್ಸು ಯಾವುದಾದರೊಂದು ವಾಹನವನ್ನು ಹಿಂದಿಕ್ಕಿದರೆ ಮುಗಿಯಿತು ಫಾರ್ಮುಲಾ ಒನ್ ನಾವೇ ಗೆದ್ದಂತೆ ಕಿರುಚಿದ್ದೇ ಕಿರುಚಿದ್ದು. ನಮ್ಮ ಡ್ರೈವರ್ಗೋ ಚಿಯರ್ ಗರ್ಲೆ ಚಿಯರ್ ಮಾಡುತ್ತಿರಬೇಕು ಎಂದೆನಿಸಿ  ಮೈಮೇಲೆ ದೇವರ ಬರಿಸಿಕೊಂಡವನಂತೆ ಮುದ್ದೆ ಕೋಲು ತಿರುಗಿಸುವಂತೆ ಎಡಗೈ ನಿಂದ ಘಡ್ರ ಘಡ್ರ ಅಂತ ಗೇರ್ ತಿರುಗಿಸಿ ಹಾಕಿದವನೇ, ಮಳೆಗೆ ನೆಂದು ಬಿಸಿಲಿಗೆ ಒಣಗಿ ಕೊರಡಿನಂತಾಗಿರುತ್ತಿದ್ದ ಹಾರನ್ನನ್ನು ಅಂಬೋ ಅಂತ ಕಿರುಚಿಸಿ ಬರ್ರೋ ಅನ್ನಿಸಿಬಿಡುತ್ತಿದ್ದರೂ ಅದರ ವೇಗ ಮಾತ್ರ ಅರವತ್ತೇ ಆಗಿರುತ್ತಿತ್ತು....

ಹೀಗೆ ಆಗರ್ಭ ತುಂಬಿರುತ್ತಿದ್ದ ನಮ್ಮ ಬಸ್ಸು ಯಾವುದಕ್ಕೂ ಜಗ್ಗದೆ ಕುಗ್ಗದೆ ಯಾರ ಮಾತಿಗೂ ಕಿವಿಗೊಡದೆ ಅಲ್ಲೊಂದು ಸಣ್ಣ ಗುಂಡಿಗೆ ನಮ್ಮನ್ನು ಅಲುಗಾಡಿಸಿ ಇಲ್ಲೊಂದು ದೊಡ್ಡ ಗುಂಡಿಗೆ ತನ್ನ ಎದೆ ಗೂಡನ್ನು ಕುಕ್ಕಿ ಎಡಗಡೆ ಇದ್ದವರನ್ನು ಬಲಕ್ಕೆ ಎಸೆದು ಬಲಗಡೆ ಇದ್ದವರನ್ನು ಎಡಕ್ಕೆ ನೂಕಿ, ತಳ್ಳಾಡಿಸಿ ಕಿರುಚಾಡಿಸಿ ಅರಚಾಡಿಸಿ ತನ್ನೊಡಲೊಳಗೊಂದು ಮಿನಿ ಕುರುಕ್ಷೇತ್ರ ಸೃಷ್ಠಿಸಿ ತಾನು ಮಾತ್ರ ಏನು ಮಾಡದ ಗುಮ್ಮನಂತೆ ಮಧ್ಯಾಹ್ನದ ಊಟದ ಹೊತ್ತಿಗೆ ಬೆಂಗಳೂರಿನ ಮೆಜೆಸ್ಟಿಕ್ಕಿಗೆ ತಂದು ಬಿಡುತ್ತಿತ್ತು....

ಕಂಗನಾ ರಣಾವತ್ ಭೇಟಿ ಮಾಡಿದ ಸಂಚಾರಿ ವಿಜಯ್; 'ಎಷ್ಟು ಬೇಕಾದ್ರೂ ಫೋಟೋ ಹಿಡಿಯಿರಿ'!

ಬೆಂಗಳೂರಿನ ಹೃದಯ ಭಾಗಕ್ಕೆ ಬಂದು ಇಳಿದವನಿಗೆ ಖುಷಿಯೋ ಖುಷಿ ಸಾಗರದಂತೆ ತುಂಬಿ ತುಳುಕುವ ಜನಸಾಗರ, ಅಲ್ಲಲ್ಲಿ ಕಾಣುವ ಎತ್ತರದ ಬಿಲ್ಡಿಂಗು, ಹೊಟ್ಟೆ ತುಂಬಾ ಉಂಡು ಹೊರಳಾಡುವಂತೆ ಆಡುವ VOLVO ಬಸ್ಸುಗಳು. ಮೆಜಸ್ಟಿಕ್ ಬ್ರಿಜ್ ಹತ್ತಿ ಎಡಕ್ಕೆ ನೋಡಿದರೆ ಬೆಂಗಳೂರಿನ ಮೂಲೆ ಮೂಲೆ ತಲುಪಿಸಲು ಸಾಲುಗಟ್ಟಿ ನಿಂತ BMTC ಬಸ್ಸುಗಳು ಅಲ್ಲೊಂದಷ್ಟು ಕಿಕ್ಕಿರಿದ ಜನಗಳು ಅವಕ್ಕೊಂದಷ್ಟು ಮಾರ್ಗದ ನಂಬರ್ಗಳು. ಬಲಕ್ಕೆ ತಿರುಗಿದರೆ ನಮ್ಮನ್ನು ಊರುಗಳಿಗೆ ಹೊತ್ತೊಯ್ಯಲು ನಿಂತ ಕಡುಗೆಂಪು ಬಸ್ಸುಗಳು ಮತ್ತವುಗಳ ಮುಂದೆ ತಮಿಳುನಾಡು, ಆಂಧ್ರ, ಕಡಪ, ಶಿಮೊಗ್ಗ, ಮಂಗಳೂರು,ಉಡುಪಿ, ಕುಂದಾಪುರ, ಮಂಡ್ಯ, ಕೋಲಾರ, ರಾಯಚೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಅಂತ ಒಂದೇ ಸಮನೆ ಕಂಡಕ್ಟರುಗಳ ಕೂಗು. ಈ ಮಧ್ಯೆ ಪ್ರೈವೇಟ್ ಬಸ್ಸುಗಳ ಕಂಡಕ್ಟರ್ ಗಳು ತಾವೇನು ಕಡಿಮೆ ಎನ್ನುವಂತೆ ಬರೀ ಕೂಗುವುದಷ್ಟೇ ಅಲ್ಲ ಜೊತೆಗೆ ವಿಷಲ್ ಊದುತ್ತ ಊರುಗಳ ಹೆಸರು ಹೇಳುತ್ತಾ ಬಸ್ಸಿನ ಡೋರನ್ನು ಗುದ್ದಿದ್ದೇ ಗುದ್ದಿದ್ದು ಸದ್ಯ ಅವು ಗುದ್ದಿಸಿಕೊಂಡ ಹೊಡೆತಕ್ಕೆ ಉದುರಿ ಹೋಗದೆ ಉಳಿದದ್ದೇ ಹೆಚ್ಚು....

ಎರೆಡು ಬಸ್ಸು ನಿಲ್ದಾಣಗಳನ್ನು ಸೀಳಿಕೊಂಡ ಮೆಜೆಸ್ಟಿಕ್ ಸೇತುವೆ ದಾಟಿ ದಾರಿಯನ್ನು ಬಳಸಿ ಕೆಳಗಿಳಿದರೆ ತರೇವಾರಿ ಕೊಳ್ಳುವ ವಸ್ತುಗಳು, ಆಹಾ!!! ಎರೆಡು ಕಣ್ಣು ಸಾಲದು ಕಿವಿಗಳಂತೂ ಸಾಧ್ಯವೇ ಇಲ್ಲ ಬಿಡಿ ಒಬ್ಬರಿಗಿಂತ ಒಬ್ಬರು ನಾಮೇಲು ತಾಮೇಲು ಅಂತ ಕೂಗಿದ್ದೇ ಕೂಗಿದ್ದು. ಅಲ್ಲಿಂದ ಸಾಗಿ ಮುಂದೆ ಬಂದು ಗಾಂಧಿನಗರದ ಸಂದಿಗೊಂದಿಗಳಲ್ಲಿ ಬಿರಿಯಾನಿ,ಪೂರಿ,ಇಡ್ಲಿ,ವಡೆಯ ಪರಿಮಳ ಹೀರಿ ಹೊರಬಂದರೆ ಅಲ್ಲಿ ಕಣ್ಣಿಗೆ ಬೇಕಾದ, ಬಡವರಿಗೆ ಸಾಮಾನ್ಯರಿಗೆ ಕೈಗೆಟುಕುವ ಸಸ್ತಾ ಬಟ್ಟೆಗಳನ್ನು ಮೈತುಂಬ ಹೊದ್ದುಕೊಂಡು ನಿಂತಿರುವ ಬಜಾರುಗಳು ಕಾಣಿಸುತ್ತವೆ. ಒಮ್ಮೆ ನಮ್ಮಂತ ಆಸೆಗಣ್ಣಿನ ಕಮಂಗಿಗಳು ಈ ಬಜಾರಿನ ಒಳ ಹೊಕ್ಕರೆ ಮುಗಿಯಿತು ಒಂದಾ ಮೈತುಂಬ ಬಟ್ಟೆಗಳು ಇರುತ್ತವೆ ಇಲ್ಲ ಮೈಮೇಲೆ ಇರುವ ಬಟ್ಟೆಗಳೂ ಮಾಯವಾಗಿಬಿಟ್ಟಿರುತ್ತವೆ....

ಹೀಗೆ ಬಜಾರಿನಲ್ಲಿ ಕಣ್ಣಿಗೆ ರಂಗು ರಂಗಾಗಿ ಕಾಣುವ ಬಟ್ಟೆಗಳನ್ನು ಕೊಂಡುಕೊಂಡು ವಾಪಸ್ಸು ಊರಿಗೆ ಹೋಗಿ ಬಸ್ ನಿಲ್ದಾಣದಲ್ಲಿ ಇಳಿದರೆ ಹೃತಿಕ್,ಸಲ್ಮಾನ್,ಶಾರುಖ್ ಗಿಂತ ನನಗೇ ಆಗ್ರಸ್ಥಾನ. ಏಕೆಂದರೆ ನಮ್ಮಂತ ಸಾಮಾನ್ಯ ಅಥವಾ ಬಡ ಕುಟುಂಬದವರಿಗೆ ಬ್ರಾಂಡೆಡ್ ವಸ್ತುಗಳು ಅಥವಾ ಬಟ್ಟೆಗಳು ಶ್ರೀಮಂತರಿಗೆ ಮಾತ್ರ ಮೀಸಲು ಎಂದುಕೊಳ್ಳುತ್ತಿದ್ದ ಕಾಲವದು. ಹೀಗೆ ನಮ್ಮಂಥವರ ಕೈಗೆಟುಕುವ ಬಡವರ ಬಟ್ಟೆಯ ಬಜಾರಿನೊಳಕ್ಕೆ ಹೋದವನೇ ನನ್ನ ಅವತಾರವನ್ನು ಅಲ್ಲಿದ್ದವನೊಬ್ಬ ಗಮಿನಿಸಿ ಕೇಳಿಯೇಬಿಟ್ಟ....

ಪುಕ್ಸಟ್ಟೆ ಲೈಫಿಗಾಗಿ ಮುಸಲ್ಮಾನನಾದ ಸಂಚಾರಿ ವಿಜಯ್ ! 

'ಬಾ ಗುರು ಇಲ್ಲಿ ಯಾವ ಥರ ಬಟ್ಟೆ ಬೇಕು ಹೇಳು ತೋರಿಸುತ್ತೀನಿ ಇಲ್ಲಿ ಸಿಗೋ ಬಟ್ಟೆ ಸಿಂಗಾಪುರದಲ್ಲೂ ಸಿಗಲ್ಲ ನಿಂಗೆ' ಎಂದು ಕೈಹಿಡಿದು ಎಳೆದುಕೊಂಡು ಬಂದು ಅಲ್ಲಿದ್ದ ಎಲ್ಲ ಟೀಶರ್ಟ್ ಪ್ಯಾಂಟ್ ಗಳನ್ನೂ ನನ್ನ ಮುಂದೆ ಹರವಿಬಿಟ್ಟ. ನಾನು ಇವನನ್ನು ಏನು ಕೇಳೇ ಇಲ್ಲವಲ್ಲ ಎಂದು ಮನಸಿನೊಳಗೆ ಚಿಂತಿಸುತ್ತಿರುವಾಗಲೇ ಮತ್ತೊಂದಷ್ಟು ಬಟ್ಟೆಗಳ ತಂದು ಸುರುವಿಬಿಟ್ಟ. ಅದೇಕೋ ಏನೋ ಯಾವೊಂದು ಶರ್ಟ್ ಪ್ಯಾಂಟು ನನಗೆ ಇಷ್ಟವಾಗಲಿಲ್ಲ. 'ಇಲ್ಲ ನನಗೆ ಇಷ್ಟ ಆಗಲಿಲ್ಲ' ಅಂದಿದ್ದೆ ತಡ ಪಕ್ಕದ ಅಂಗಡಿಯಿಂದ ಮತ್ತೊಂದು ಲಾಟು ಬಂದು ಬಿತ್ತು. ಇದು ಯಾಕೋ ಸರಿ ಹೋಗುತ್ತಿಲ್ಲ ಎಂದವನೇ 'ಯಾವುದು ಇಷ್ಟ ಆಗ್ತಾ ಇಲ್ಲ ಗುರು ನನ್ನ ಬಿಟ್ಬಿಡು' ಎಂದು ಗರಮ್ಮಾಗಿ ಹೇಳಿ ಹೊರಟವನ ಕೈಯ್ಯನ್ನು ಯಾರೋ ಹಿಡಿದು ಎಳೆದಂತಾಯ್ತು, ಹೊರಳಿ ನೋಡಿದರೆ ಅದೇ ಆಸಾಮಿ 'ಇಷ್ಟು ಬಟ್ಟೆ ತೋರಿಸಿದ್ದೀನಿ, ನೋಡಿದಮೇಲೆ ತಗೊಳ್ಳೇ ಬೇಕು, ಏನು ಆಟ ಆಡ್ತೀಯ' ಅಂದ. 'ಅಲ್ಲಾ ಗುರು ಮೊದಲನೇದಾಗಿ ನಾನು ನಿನ್ನನ್ನು ಮಾತನಾಡಿಸಲೇ ಇಲ್ಲ, ನೀನಾಗೆ ಕೈ ಹಿಡಿದು ಕರೆದುಕೊಂಡು ಬಂದು ಎಲ್ಲಾ ಸುರಿದೆ, ನೋಡು ಅಂದೆ, ಈಗ ನೋಡಿದರೆ ತಗೊಳ್ದೆ ಹೋಗೋ ಹಾಗೆ ಇಲ್ಲ ಅಂತ ಬೆದರಿಕೆ ಹಾಕ್ತಾ ಇದ್ದೀಯ, ಯಾವ ನ್ಯಾಯ' ಎಂದೆ. ಅಷ್ಟು ಹೊತ್ತಿಗೆ ಅಲ್ಲಿದ್ದ ಅಕ್ಕ ಪಕ್ಕದ ನಾಲ್ಕು ಜನ ಸೇರಿಕೊಂಡರು. ಸ್ವಲ್ಪ ಧೈರ್ಯ ಬಂತು 'ಅಬ್ಬಾ ಸದ್ಯ ಇವನಿಂದ ಬಚಾವಾದೆ' ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಅದರಲ್ಲಿದ್ದವನೊಬ್ಬ ಕೇಳಿದ 'ಯಾಕೆ ಗುರು ಒತ್ತಾಯ ಮಾಡ್ತಿಯಾ? ಅವನು ಇಲ್ಲೇ ತಗೋಳ್ತಾನೆ ಸುಮ್ನೆ ಇರು' ಎಂದು ನನಗೆ ಮೃದುವಾಗಿ ಒತ್ತಾಯ ಮಾಡಲು ಶುರು ಮಾಡಿದ, ಅದರ ಜೊತೆಗೆ ಉಳಿದವರೂ ನನಗೆ ಮೆಲ್ಲಗೆ ಗದರುವ ಧಾಟಿಯಲ್ಲಿ ಮಾತನಾಡಿದರು, ಆಗ ನನಗೆ ಅರಿವಾಯಿತು ಇವರೆಲ್ಲ ಒಬ್ಬರಿಗೊಬ್ಬರು ಗೊತ್ತಿರುವವರೇ ಅಂತ. ನಾನು ಅವರ ಮಾತಿನ ಹೊಡೆತದಿಂದ ಸುಧಾರಿಸಿಕೊಳ್ಳುವಷ್ಟರಲ್ಲಿ ನನ್ನನ್ನು ಅವರ ಅಂಗಡಿಯ ಒಳಕ್ಕೆ ಕರೆದುಕೊಂಡು ಹೋದವರೇ ಬಟ್ಟೆಯನ್ನು ತೆಗೆದುಕೊಳ್ಳುವವರೆಗೆ ಬಿಡದೆ ಹಿಂಸಿಸಿ ನನ್ನ ಬಳಿಯಿದ್ದ ಅಷ್ಟೂ ಹಣವನ್ನು ಪೀಕಿ ನನಗೆ ಇಷ್ಟವಿಲ್ಲದ ಬಟ್ಟೆಗಳನ್ನು ಕೈಗೆ ತುರುಕಿ ಹೊರ ಕಳುಹಿಸಿದರು...

ಜೋಲು ಮುಖ ಹಾಕಿ ಸೀದಾ ಮೆಜೆಸ್ಟಿಕ್ ಕಡೆ ನಡೆದವನೇ, ಕಲ್ಲು ಬೆಂಚಿನ ಮೇಲೆ ಕೂತು ಬಟ್ಟೆ ಅಂಗಡಿಯವನಿಗೂ ಮತ್ತು ನನ್ನಿಂದ ಹಣವನ್ನು ಕಿತ್ತ ಅವನ ಜೊತೆಯವರಿಗೂ  ಮನಸ್ಸಿನಲ್ಲಿ ಹಿಡಿ ಶಾಪ ಹಾಕಿ ಕುಳಿತಿದ್ದೆ. ಅಷ್ಟರಲ್ಲಿ ನಮ್ಮೂರ ಬಸ್ಸು ಬಂದು ನಿಂತಿತು ಅದಾಗಲೇ ಹೆಚ್ಚು ಕಡಿಮೆ ಭರ್ತಿಯಾಗಿದ್ದ ಬಸ್ಸಿನಲ್ಲಿ ಸಿಕ್ಕಿದ್ದು ಕೊನೆಯ ಸಾಲಿನ ಕೊನೆಯ ಸೀಟು, ಮುಂದಿನ ಸೀಟಿಗಾಗಿ ಕಿತ್ತಾಡುವಷ್ಟು ಶಕ್ತಿಯೂ ಉಳಿದಿರಲಿಲ್ಲ, ಇನ್ನು ನನಗೆ ಯಾವ ಊರಿನ ಯಾರ ಉಸಾಬರಿಯು ಇಲ್ಲ ಎಂದು ಯಾರಿಗೂ ಕೈಬೀಸದೆ ಅವರು ಕೊಟ್ಟ ಬಟ್ಟೆಯ ಬ್ಯಾಗನ್ನು ಅವಚಿ ಹಿಡಿದು ಹಾಗೆಯೇ ಅದರ ಮೇಲೆ ತಲೆಯೂರಿದ್ದಷ್ಟೇ, ಗೊತ್ತಿಲ್ಲದೇ ಗಾಢವಾದ ನಿದ್ರೆಗೆ ಜಾರಿದ್ದೆ. ಕಣ್ಣು ಬಿಟ್ಟು ನೋಡುವಾಗ ಊರ ಬಸ್ಸು ನಿಲ್ದಾಣದ ಹೆಬ್ಬಾಗಿಲ ಮುಂದೆ ನಿಂತು ಮಳೆಗೆ ತೊಯ್ದಿತ್ತು. ನಾನು ಯಾರಿಗೂ ಕಾಣದಂತೆ ಬಸ್ಸು ಇಳಿದವನೇ ನಸುಗತ್ತಲಿನಲ್ಲಿ ಮನೆ ಸೇರಿದೆ. ಹೀಗೆ ಮುಗಿದಿತ್ತು ಬಟ್ಟೆಯ ಪ್ರಸಂಗವೊಂದು.
ಈ ಕೆಳಗಿನ ವಿಡಿಯೋ ನೋಡಿ ನನಗೂ ಈ ಅನುಭವ ಆಗಿತ್ತಲ್ಲ ಅನ್ನಿಸಿತು. ಜೇವನಕ್ಕಾಗಿ ದುಡಿಯುವ ದಿನಗೂಲಿ ಕಾರ್ಮಿಕರು ಒಂದುಕಡೆ, ಅವರಿಗೆ ಜಾಗ ಕೊಡುವ ನೆಪದಲ್ಲಿ ಅವರಿಂದ ಕಿತ್ತು ತಿನ್ನುವ ವ್ಯವಸ್ಥೆ ಇನ್ನೊಂದು ಕಡೆ. ದೂಷಿಸುವುದು ಯಾರನ್ನು??? ಕಾಲವೇ ಉತ್ತರಿಸಬೇಕು

Follow Us:
Download App:
  • android
  • ios