ಆರ್ಕೇಸ್ಟ್ರಾದಿಂದ ದುಡಿಯುತ್ತಿದ್ದ 20 ರೂ ಸಿನಿಮಾ ಮತ್ತು ಗುಂಡಿಗೆ ಸಮಾಪ್ತಿ ಆಗುತ್ತಿತ್ತು: ಜಗ್ಗೇಶ್
ಪದವಿ ಪೂರ್ವ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಟೀನೇಜ್ ದಿನಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ಹೊಟ್ಟೆ ತುಂಬಾ ನಕ್ಕಿದ್ದಾರೆ.
ಟೀನೇಜ್ ಹುಡುಗರ ಕಥೆ ಹೇಳುವ ಪದವಿ ಪೂರ್ವ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಯೋಗರಾಜ್ ಭಟ್ ಮತ್ತು ಜಗ್ಗೇಶ್ ಆಗಮಿಸಿದ್ದರು. ವೇದಿಕೆ ಮೇಲೆ ಕುಳಿತುಕೊಂಡು ಟೀನೇಜ್ ದಿನಗಳ ಬಗ್ಗೆ ಜಗ್ಗೇಶ್ ಮಾತನಾಡಿದ ವಿಡಿಯೋ ಸಖತ್ ವೈರಲ್ ಆಗಿದೆ, ಇದರ ಮುಂದುವರೆದ ಭಾಗವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆರ್ಕೇಸ್ಟ್ರಾ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಜಗ್ಗೇಶ್ ಮಾತು:
'ನಾನು ಯುವಕನಾಗಿದ್ದಾಗ ಭಾರತಿ ತರ ಇರುವವರನ್ನು ಮದುವೆ ಆಗಬೇಕು ಅಂತ ಇಮ್ಯಾಜಿನೇಷನ್ ಮಾಡಿದ್ದೆ. ಏಕೆಂದರೆ ಫಿಲ್ಮ್ಗಳನ್ನು ಆ ರೀತಿ ನೋಡುತ್ತಿದ್ದೆ. ಹಾ ಹಾ ಮೈಸೂರು ಮಲ್ಲಿಗೆ..ಎಷ್ಟು ಚೆನ್ನಾಗಿದೆ ಈವಮ್ಮ ಈ ತರ ಇರುವವರನ್ನು ಮದುವೆ ಆಗಬೇಕು ಅನ್ನೋದೆ. ಓದೋಣ ಬರೆಯೋಣ ಅಂತೆಲ್ಲಾ ಏನೂ ಇಲ್ಲ ಒಬ್ಬ ಬೈಲು ಮತ್ತೊಬ್ಬ ಕಾಲೇಜ್ಗೆ ಹೋಗ್ತೀನಿ ಅಂತ ಹೇಳಿ ಎಣ್ಣೆ ಅಂಗಡಿಗೆ ಹೋಗಿ ಬರುವುದು ನಾನು ಸಿಗರೇಟ್ ಹೊಡೆಯಲ್ಲ ಅಂದ್ರೆ ಏನೋ ನೀನು ಅಂತ ಟ್ರೈನಿಂಗ್ ಮಾಡೋಕೆ ಇನ್ನೊಬ್ಬ. ನನ್ನ ತಂದೆಗೆ ನನ್ನ ಕೊಲೆ ಮಾಡುವ ಶಕ್ತಿ ಇದಿದ್ರೆ 200 ಸಲ ಕೊಲೆ ಮಾಡುತ್ತಿದ್ದರು. ಅ ವಯಸ್ಸು ಹಾಗಿದೆ. ನನ್ನ ಕ್ಲೋಸ್ ಫ್ರೆಂಡ್ ಚೆನ್ನಾಗಿ ಓದಿ NASAಗೆ ಹೋದ ಅದೇ ನಾನು ಸಿನಿಮಾ ಫ್ಲಾಪ್ ಆಗಿದ್ದರೆ ಎಂಥಾ ಫುಟ್ಪಾತ್ ಲೆವೆಲ್ ಸಿಕ್ಕಿರೋದು? ಆಟೋ ಪಾಟೋ ಓಡಿಸಿಕೊಂಡು ಹೊಟ್ಟೆ ಬಿಟ್ಕೊಂಡು ...ಯಾಕೆ ಈ ಉದಾಹರಣೆ ಹೇಳುತ್ತಿರುವೆ ಅಂದ್ರೆ ಏನೇ ಹೇಳಿದ್ದರೂ ಸತ್ಯವಾಗಿ ಹೇಳಬೇಕು ಹಾಸ್ಯವಾಗಿ ಹೇಳಬೇಕು.' ಎಂದು ಜಗ್ಗೇಶ್ ಮಾತನಾಡಿದ್ದಾರೆ.
'ನಾನು ಬಹಳ ಕಡೆ ನೋಡಿದ್ದೀನಿ ಒಂದೇ ಬುಕ್ನ ಸೊಂಟಕ್ಕೆ ಸಿಲುಕಿಸಿಕೊಂಡು ಕಾಲೇಜ್ಗೆ ಹೋಗುತ್ತಾರೆ. ಸಿನಿಮಾದಲ್ಲಿ ಹೇಳಿದಂತೆ ನಿಧಾನಕ್ಕೆ ಮಾರ್ಗದರ್ಶನ ಕೊಟ್ಟು ಸ್ವಲ್ಪ ಜಂಕ್ಷನ್ನಲ್ಲಿ ನಿಂತು ಅವರಿಗೆ ಹೇಳಬೇಕು. ಮಾರ್ಗದರ್ಶನ ನೀಡುವ ಗುರುಗಳನ್ನು ಯಾರು ಪಡೆಯುತ್ತಾರೆ ಅವರಂತ ಅದೃಷ್ಟವಂತ ಮತ್ತೊಬ್ಬರಿಲ್ಲ ಯಾರಿಗೆ ಗುರು ಸಿಕ್ಕಿಲ್ಲ ಅವರು ಪಶ್ಚಾತಾಪ ಪಡುತ್ತಿದ್ದಾರೆ. ವಿದ್ಯೆ, ವಿನಯ, ಗುಣ ಮತ್ತು ಹಣ ಬೇಕು..ಎಲ್ಲವೂ ಇದ್ದಾಗ ಜೀವನ ಅದ್ಭುತವಾಗಿರುತ್ತದೆ' ಎಂದು ಹೇಳಿದ್ದಾರೆ.
ಜಗ್ಗೇಶ್ ಬರಹ:
'ಸ್ನೇಹಿತರೆ.. ನಿನ್ನೆ ಯೋಗರಾಜ್ ಭಟ್ಟರ ಶಿಷ್ಯ ಹಾಗು ನನ್ನ ಆತ್ಮೀಯ ಪದವಿ ಪೂರ್ವ ಚಿತ್ರ ನಿರ್ದೇಶಕ ಹರಿಪ್ರಸಾದ್ರವರ Pressmeet ಇತ್ತು ಆ ಚಿತ್ರ ಸಂಪೂರ್ಣ 17-18 ವಯಸ್ಸಿನ ಎಳೆಮನಸುಗಳ ಕಥೆಗೆ ಶುಭಹಾರೈಸಲು ಹೋಗಿದ್ದೆ, ಆಗ ಈ ಚಿತ್ರದ ಕಥೆಯಂತೆ ನನ್ನ ಬಾಲ್ಯದ ಬದುಕಿನ ಅನೇಕ ಪ್ರಸಂಗ ಹೇಳುತ್ತಿದ್ದೆ. ಅದನ್ನು ಕೇಳಿ ಚಿತ್ರತಂಡ ಹಾಗು ಮಾಧ್ಯಮಮಿತ್ರರು ಗಹಗಹಿಸಿ ನಕ್ಕು ಆನಂದಿಸುತ್ತಿದ್ದರು. ಕಾರಣ ನನ್ನ ಬದುಕಿನ Content. ಮನೆಗೆ ಬಂದವನು ನನ್ನ ಬದುಕಿನಲ್ಲಿ ನಡೆದ ಘಟನಾವಳಿ 42ವರ್ಷದ ನನ್ನ ಬದುಕಿನ ಪಯಣ ಅಪ್ಪ ಅಮ್ಮ ಬಂಧು ಮಿತ್ರರ ನೆನೆದು ಭಾವುಕನಾಗಿಬಿಟ್ಟೆ ಕಾರಣ ಬಹುತೇಕರು ನನ್ನ ಬಿಟ್ಟು ಹೋಗಿದ್ದಾರೆ. ನಾನು ಮಾಗಿದ 60ವರ್ಷಕ್ಕೆ ಕಾಲಿಟ್ಟು ತಾತನಾಗಿರುವೆ.
ಜಾತಿ ವ್ಯವಸ್ಥೆಯ ದರಿದ್ರ ಕಾಲವದು; ಅಂತರ್ಜಾತಿ ವಿವಾಹನಾ ಎಂದು ಪ್ರಶ್ನಿಸಿದ ಅಭಿಮಾನಿಗೆ ಜಗ್ಗೇಶ್ ಉತ್ತರ
ನನ್ನ ಇಂದಿನ ಮನಸ್ಥಿತಿ ಒಂದೆ ಯುವ ಜೀವಗಳು ಅವರವರ ಇಷ್ಟ ಕ್ಷೇತ್ರದಲ್ಲಿ ದೇವರು ನನಗೆ ಕೊಟ್ಟ ಅದೃಷ್ಟ ಎಲ್ಲರಿಗೂ ಸಿಕ್ಕಿ ಬೆಳೆದು ಸಾಧಕರಾಗಲಿ ಎಂಬ ಹಾರೈಕೆ ಮಾಡುವ ಬಯಕೆ. ಹೃದಯದಿಂದ ನನ್ನ ಬೇಡಿಕೆ ದೇವರಲ್ಲಿ ಸರ್ವೆಜನಃಸುಖಿನೋಭವಂತು ಎಂದು. ಕಾಕತಾಳಿಯ ಎಂಬಂತೆ ನನ್ನ ಬಾಲ್ಯದ ಗೆಳೆಯ ಚಂದ್ರು ಆರಾಧ್ಯ ಇಂದು ನಮ್ಮ ತೀಟೆಯ ಗುಣದ ಆಗರವಾಗಿದ್ದ ಕಾಲದ ಫೋಟೋ ಕಳಿಸಿದ ಈತ ಈಗ ಅಮೇರಿಕದಲ್ಲಿ ವಾಸ. ನನಗಿಂತ 1ವರ್ಷ ಕಿರಿಯ. ಆ ದಿನಗಳು ನಾನು ಆರ್ಕೇಸ್ಟ್ರಾದಲ್ಲಿ ಹಾಡುತ್ತಿದ್ದೆ ಹಾಗು ಮಿಮಿಕ್ರಿ ಮಾಡುತ್ತಿದ್ದೆ. ಒಂದು ಕಾರ್ಯಕ್ರಮಕ್ಕೆ 20ರೂ ಕೊಡುತ್ತಿದ್ದರು. ಆ ಹಣ ಸಂಪೂರ್ಣ ಸಿನಿಮ & ಗುಂಡಿಗೆ ಸಮಾಪ್ತಿ ಆಗುತ್ತಿತ್ತು. ಯಾವ ಕಾರಣಕ್ಕೂ ಸಿಗದ ಅಂದಿನ ನನ್ನ ಫೋಟೋ ಇಂದು ನೋಡಿ ಅತೀವ ಸಂತೋಷ ನೀಡಿತ್ತು. ಮತ್ತೊಂದು ಫೋಟೋ ನಾನು ಹಾಗೂ ಮಧ್ಯದಲ್ಲಿ ಆರಾಧ್ಯ ಮೂರನೆಯವನೆ ದಿವಂಗತ ರವಿ. ಮುಂದೆ ನನಗೆ ಕೆ.ವಿ. ರಾಜು ನಿರ್ದೇಶನದಲ್ಲಿ ನಿಜ ಚಿತ್ರ ನಿರ್ಮಾಣ ಮಾಡಿದ್ದ. ಕೇವಲ 50ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಆತ್ಮೀಯ.
ಈ ಫೋಟೊ ನಿನ್ನೆ ಮಾಧ್ಯಮದಲ್ಲಿ ಆಡಿದ ಮಾತಿಗೆ ತಳುಕು ಹಾಕಿ ಗಮನಿಸಿ ನಾ ಹೇಳಿದ 1980ರ ಈಶ @ ಈಶ್ವರ್ @ಜಗ್ಗೇಶ ಹೇಗಿದ್ದ ಹೇಗಾದ ಅರಿವಾಗುತ್ತಾನೆ. ಶ್ರಮಕ್ಕೆ ಪ್ರತಿಭೆಗೆ ಶ್ರದ್ಧೆಗೆ ಖಂಡಿತ ಪ್ರತಿಯೊಬ್ಬ ಮನುಜನಿಗೂ ಅವನದೆ ದಿನವುಂಟು ಬದುಕಲ್ಲಿ. ಆಶಾಭಾವನೆ ಇರಲಿ ಗೆದ್ದೆ ಗೆಲ್ಲುತ್ತೇವೆ ಒಂದುದಿನ ಎಂದು. ಶುಭಹಾರೈಕೆ ಪದವಿಪೂರ್ವ ಚಿತ್ರಕ್ಕೆ.