ಹಾಲು ಕರೆಯೋಕೆ ಗೊತ್ತಿದ್ದರೆ ಮಾತ್ರ ದನ ಸಾಕಬೇಕು; ದರ್ಶನ್ ಹೇಳಿದ ಕತೆ!
ಸಿನಿಮಾ ಹೀರೋ ಆದೆ. ಮುಂದೇನು ಮಾಡಬೇಕು ಅಂತ ಗೊತ್ತಿರಲಿಲ್ಲ. ಆಮೇಲೆ ದನ ಸಾಕೋಣ ಅನ್ನಿಸಿತು. ದನ ತಗೊಂಡು ಬಂದೆ. ನನ್ನಲ್ಲಿ ಒಂದು ದನ ಇತ್ತು. ಹನ್ನೆರಡೂವರೆ ಲೀಟರ್ ಹಾಲು ಕೊಡುತ್ತಿತ್ತು. ಹಾಲು ಕರೆಯುವುದಕ್ಕೆ ಒಬ್ಬ ಕೆಲಸಗಾರ ಬರುತ್ತಿದ್ದ. ಒಮ್ಮೆ ಅವನು ಹಾಲು ಕರೆಯಲು ಬರಲಿಲ್ಲ. ನಾನು ಅವನ ಮೇಲೆ ಡಿಪೆಂಡ್ ಆಗಿದ್ದೆ. ಹಾಗಾಗಿ ಅವತ್ತು ಕಷ್ಟಆಯಿತು. ಮರುದಿನವೂ ಬರಲಿಲ್ಲ. ಆಗ ನಾನೇ ಹಾಲು ಕರೆಯಲು ನಿರ್ಧರಿಸಿದೆ. ಮೊದಲ ದಿನ ಎಂಟು ಲೀಟರ್ ಹಾಲು ಕರೆದೆ. ಹನ್ನೆರಡೂವರೆ ಲೀಟರ್ ಹಾಲು ಕರೆಯಲು ಆಗಲಿಲ್ಲ. ಹಾಗಂತ ಬಿಡಲಿಲ್ಲ. ಮತ್ತೆ ಹಾಲು ಕರೆದೆ. ಹನ್ನೆರಡೂವರೆ ಲೀಟರ್ ಹಾಲು ಕರೆಯುವವರೆಗೂ ಬಿಡಲಿಲ್ಲ.
- ದರ್ಶನ್ ಈ ಕತೆ ಹೇಳಿದ್ದು ರಾಬರ್ಟ್ ಸಿನಿಮಾದ ಗೆಲುವಿನ ಸಂಭ್ರಮಾಚರಣೆಯಲ್ಲಿ. ದರ್ಶನ್ ಅವತ್ತು ಖುಷಿಯಾಗಿದ್ದರು. ನಗುತ್ತಿದ್ದರು. ಎಲ್ಲರ ಜೊತೆ ಬೆರೆತರು. ಚೂರು ಕೋಪ ತೋರಿಸಿದರು. ಜೊತೆಯಲ್ಲಿದ್ದವರನ್ನು ಮೆಚ್ಚಿದರು. ಸಿನಿಮಾವನ್ನು ಹೆಚ್ಚು ಕಲಿತ ಬಗೆ ತಿಳಿಸಿದರು. ವಿತರಣಾ ವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತ ಪಡಿಸಿದರು. ಹೃದಯ ತೆರೆದು ನಾಲ್ಕು ಮಾತನಾಡಿದರು. ನಕ್ಕು ಹಗುರಾದರು.
ದರ್ಶನ್ ಸಿಟ್ಟು ವಿತರಕರ ಮೇಲೆ
ದರ್ಶನ್ ದನದ ಕತೆ ಹೇಳಲು ಕಾರಣವಿದೆ. ಅವರು ಕೆಲವು ವಿತರಕರ ಮೇಲೆ ಸಿಕ್ಕಾಪಟ್ಟೆಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಕೆಲವು ವಿತರಕರ ಮೋಸ. ಆ ವಂಚನೆಯ ವಿರುದ್ಧ ಯುದ್ಧ ಸಾರುವಂತೆ ದರ್ಶನ್ ಮಾತನಾಡಿದರು. ತಮ್ಮ ಮುಂದಿನ ಸಿನಿಮಾ ನಿರ್ಮಾಪಕರು ಡಿಸ್ಟ್ರಿಬ್ಯೂಷನ್ ಕಲಿತು ಬರಬೇಕು ಎಂದರು. ಅದಕ್ಕೆ ತಮ್ಮದೇ ಹಾಲು ಕರೆಯುವ ಕತೆಯನ್ನು ಸ್ಫೂರ್ತಿಯಾಗಿ ಹೇಳಿದರು.
ಈ ಕಾರ್ಟೂನ್ ಸಿನಿಮಾನೇ 'ಸಾರಥಿ', ಕಾಪಿ ಮಾಡಿದ್ವಿ, ಯಾರು ಕೇಳಿದ್ರು: ದರ್ಶನ್
‘ನಾವು ಕಷ್ಟಪಟ್ಟು ಸಿನಿಮಾ ಮಾಡುತ್ತೇವೆ. ಲೈಟ್ಬಾಯ್ಗಳಿಗೆ ಚೂರು ದುಡ್ಡು ಜಾಸ್ತಿ ಕೊಡಲು ಹಿಂದೆಮುಂದೆ ನೋಡುತ್ತೇವೆ. ಆದರೆ ಡಿಸ್ಟ್ರಿಬ್ಯೂಟರ್ಗಳು ಬಂಡವಾಳ ಹಾಕದೆ, ಏಸಿ ರೂಮಲ್ಲಿ ಕುಳಿತು ಕೋಟಿಗಟ್ಟಲೆ ದುಡ್ಡು ಮಾಡುತ್ತಾರೆ. ‘ಒಡೆಯ’ ಸಿನಿಮಾದ ವಿತರಕರು ನಿರ್ಮಾಪಕ ಸಂದೇಶ್ ನಾಗರಾಜ್ಗೆ ಈಗಲೂ ನಾಲ್ಕು ಕೋಟಿ ಕೊಡುವುದು ಬಾಕಿ ಇದೆ. ‘ಯಜಮಾನ’ ನಿರ್ಮಾಪಕರಿಗೆ 8 ಕೋಟಿ ರೂಪಾಯಿ ಬರಬೇಕು. ಅದರ ಮೇಲೆ ಶೈಲಜಾನಾಗ್ ಅವರ ಮೇಲೆ ಕೇಸ್ ಹಾಕಿದ್ದಾರೆ. ಹೆಣ್ಮಗಳು ಅಂತ ಕೇಸ್ ಹಾಕಿದ್ದಾ. ಇನ್ನು ಮುಂದೆ ನಾನೂ ನೋಡುತ್ತೇನೆ. ಒಂದು ಟೀಮ್ ಕಟ್ಟುತ್ತೇನೆ. ನಮ್ಮ ಸಿನಿಮಾದ ಡಿಸ್ಟ್ರಿಬ್ಯೂಷನ್ ನಮ್ಮ ನಿರ್ಮಾಪಕರೇ ಮಾಡಬೇಕು. ರಾಬರ್ಟ್ ಸಿನಿಮಾದ ಡಿಸ್ಟ್ರಿಬ್ಯೂಷನ್ ಉಮಾಪತಿಯವರೇ ಮಾಡಿದ್ದರಿಂದ ನಮಗೆ ಲಾಭವಾಗಿದೆ.’
"
ಕತೆ ಕುರಿತು ದರ್ಶನ್ ಥಿಯರಿ
ರಾಬರ್ಟ್ ಸಿನಿಮಾದ ಕತೆಯ ಕುರಿತು ಚರ್ಚೆ ನಡೆಯುತ್ತಿರುವುದರ ಮೇಲೆ ದರ್ಶನ್ಗೆ ಅಸಮಾಧಾನ ಇತ್ತು. ಕೋಪವೇ ಇರಲಿ, ಪ್ರೀತಿಯೇ ಇರಲಿ ಎಲ್ಲವನ್ನೂ ಓಪನ್ ಆಗಿ ಹೇಳುವುದು ಅವರ ಅಭ್ಯಾಸ.
ಯಜಮಾನ, ಕುರುಕ್ಷೇತ್ರ ಪೈರೇಸಿ ಆಯ್ತು; 'ನಮ್ಮನ್ನ ಕಿತ್ಕೊಂಡ್ರು ಅಂತ ಒಬ್ರು ಹೇಳಿದ್ರು'
‘ರಾಬರ್ಟ್ ಸಿನಿಮಾದ ಕತೆ ಭಾಷಾ ಥರ ಇದೆ, ಬೇರೆ ಬೇರೆ ಸಿನಿಮಾದಿಂದ ಕತೆ ತಗೊಂಡಿದ್ದಾರೆ ಅಂತ ಹೇಳುವುದೇ ನನ್ನ ಕಿವಿಗೂ ಬಿದ್ದಿದೆ. ಹೌದು ಏನೀಗ. ಕತೆ ಹಳೆಯದಾದರೂ ಟ್ರೀಟ್ಮೆಂಟ್ ಬೇರೆ ಥರ ಇದೆ. ನಾವು ಸಾರಥಿ ಸಿನಿಮಾ ಮಾಡಿದಾಗ ಲಯನ್ ಕಿಂಗ್ ಕತೆ ಎತ್ತಿಕೊಂಡು ಸಿನಿಮಾ ಮಾಡಿದೆವು. ನಮ್ಮ ಸಿನಿಮಾದಲ್ಲಿ ತುಂಬಾ ವಾವ್ ಫ್ಯಾಕ್ಟರ್ಗಳಿವೆ. ವಲ್ಗರ್ ಬೇಡ, ಇನ್ನೊಬ್ಬರಿಗೆ ಹರ್ಟ್ ಆಗುವ ಮಾತುಗಳು ಬೇಡ ಅಂತ ಮೊದಲೇ ಹೇಳಿದ್ದೆ. ಈ ಸಿನಿಮಾ ಮಾಡಿದ ಮೇಲೆ ಮಂಗಳಮುಖಿಯರು ಬಂದು ನಮಗೆ ಮರ್ಯಾದೆ ಕೊಟ್ಟಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದನ್ನು ನೆನೆಯುವಾಗಲೆಲ್ಲಾ ಖುಷಿಯಾಗುತ್ತದೆ.’
ರಾಬರ್ಟ್ ಸಿನಿಮಾದಿಂದ ದರ್ಶನ್ ಅಪ್ಡೇಟೆಡ್ ವರ್ಷನ್ ಕಾಣಿಸುತ್ತಿದೆ.
ಗೆಲುವಿಗೆ ಖುಷಿಯಾದ ತಂಡ
ರಾಬರ್ಟ್ ಗೆಲುವಿಗೆ ಇಡೀ ತಂಡ ಖುಷಿಯಾಗಿದೆ. ದೇವರಾಜ್, ಅವಿನಾಶ್ ಖುಷಿಗೆ ಪಾರವೇ ಇರಲಿಲ್ಲ. 100 ಕೋಟಿ ಗಳಿಕೆ ಆದಾಗ ದೊಡ್ಡದಾಗಿ ಸಂಭ್ರಮಾಚರಣೆ ನಡೆಯಬೇಕು ಎಂಬ ಆಸೆ ಅವರಿಗೆ. ಛಾಯಾಗ್ರಾಹಕ ಸುಧಾಕರ್ ತಮ್ಮ ಕೆಲಸಕ್ಕೆ ಸಿಕ್ಕ ಮೆಚ್ಚುಗೆಯನ್ನು ವಿನಮ್ರವಾಗಿ ಸ್ವೀಕರಿಸಿದ್ದಾರೆ ಮತ್ತು ಸಂತೋಷವಾಗಿದ್ದಾರೆ. ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ‘ಹತ್ತು ಸಿನಿಮಾಗೆ ಮಾಡುವ ಕೆಲಸವನ್ನುಈ ಒಂದು ಸಿನಿಮಾಗೆ ಮಾಡಿದ್ದೇನೆ’ ಎಂದರು. ನಾಯಕ ನಟಿ ಆಶಾ ಭಟ್ ಅವಕಾಶ ಕೊಟ್ಟಿದ್ದ ಕೃತಜ್ಞತೆಯಿಂದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಶಿವರಾಜ್ ಕೆ ಆರ್ ಪೇಟೆ ಮುಖದಲ್ಲೂ ಧನ್ಯತೆ ಭಾವ. ಚಿಕ್ಕಣ್ಣ, ಹಿನ್ನೆಲೆ ಸಂಗೀತ ನೀಡಿರುವ ಹರಿಕೃಷ್ಣ, ನಟ ರವಿಶಂಕರ್, ಬಾಲ ನಟ ಜೇಸನ್ ಜಾಸ್ತಿ ಮಾತನಾಡದಿದ್ದರೂ ಸಂಭ್ರಮ ಕಾಣಿಸುತ್ತಿತ್ತು.
ನಿರ್ದೇಶಕ ತರುಣ್ ಸುಧೀರ್ ಮಾತ್ರ ಜವಾಬ್ದಾರಿ ನಿಭಾಯಿಸಿದ ನಿರಾಳತೆಯಿಂದ ಇದ್ದರು. ಸಂತೋಷ್ ಮತ್ತು ಭೂಷಣ್ ಜೋಡಿಗೆ ಮೊದಲ ಬಾರಿ ಡ್ಯಾನ್ಸ್ ಕೊರಿಯೋಗ್ರಾಫರ್ ಅವಕಾಶ ನೀಡಿದ್ದಕ್ಕೆ ದರ್ಶನ್ಗೆ ವಂದಿಸಿದರು.
ಮಂತ್ರಾಲಯ ರಾಯರ ದರ್ಶನ ಪಡೆದು ಗೋಶಾಲೆಗೆ ಭೇಟಿ ಕೊಟ್ಟ ನಟ ದರ್ಶನ್; ಫೋಟೋಗಳಿವು!
ಆಲದಮರ ದರ್ಶನ್
ತಾನೂ ಬೆಳೆದು, ಇನ್ನೊಬ್ಬರಿಗೆ ಆಶ್ರಯ ಕೊಡುವ ಆಲದಮರ ನಮ್ ಬಾಸು ಎಂದು ಹೇಳಿದ್ದು ವಿನೋದ್ ಪ್ರಭಾಕರ್. ನನ್ನ ಪಾತ್ರ ಯಾರಾದರೂ ಸ್ಟಾರ್ ಮಾಡಬಹುದಿತ್ತು, ಆದರೆ ನಂಗೆ ಕೊಟ್ಟು ನೂರು ಹೆಜ್ಜೆ ಮುಂದೆ ತಳ್ಳಿದ್ದೀರಿ, ಋುಣಿಯಾಗಿದ್ದೇನೆ ಎಂದರು.
ಬಂಡೆ ಒಡೆಯೋನು ನಾನು: ಉಮಾಪತಿ
ರಾಬರ್ಟ್ ಸಿನಿಮಾ ಆಗುವ ಮೊದಲು ದರ್ಶನ್ ಅವರು ನನಗೆ ಹೀರೋ ಮಾತ್ರ ಆಗಿದ್ದರು. ಈಗ ನಾನು ಅವರಿಗೆ ತಮ್ಮನಾಗಿದ್ದೇನೆ ಎಂದು ದರ್ಶನ್ ಜತೆಗಿನ ಬಾಂಧವ್ಯ ಹಂಚಿಕೊಂಡರು ನಿರ್ಮಾಪಕ ಉಮಾಪತಿ. ಡಿಸ್ಟ್ರಿಬ್ಯೂಟರ್ಗಳು ತಮಗೆ ಕೊಟ್ಟಕಾಟದ ಬಗ್ಗೆ ಸಿಟ್ಟಾಗಿ ‘ನಾನೇ ಡಿಸ್ಟ್ರಿಬ್ಯೂಷನ್ ಮಾಡುವುದಕ್ಕೆ ನಿಂತಾಗ ತುಂಬಾ ಮಂದಿ ನನಗೆ ಕಲ್ಲು ಹೊಡೆದಿದ್ದಾರೆ. ಆದರೆ ಅವರು ನೆನಪಿಡಬೇಕು, ನಾನು ಬಂಡೆ ಒಡೆಯೋನು’ ಎಂದರು.