Asianet Suvarna News Asianet Suvarna News

ಸೆಲೆಬ್ರಿಟಿ ಬದುಕು ಜೀವನಪರ್ಯಂತ ಜೈಲುವಾಸ, ಸಂತೋಷ ಕಮರಿದೆ ಎಂದ ಜಗ್ಗೇಶ್

ಎಲ್ಲರೂ ಸೆಲೆಬ್ರಿಟಿ ಆಗಲು ಬಯಸುತ್ತಾರೆ. ಆದರೆ ಬಯಸದೆ ಬಂದ ಭಾಗ್ಯವಾದರೂ ಸೆಲೆಬ್ರಿಟಿ ಜೀವನ ಜೀವನಪರ್ಯಂತ ಜೈಲುವಾಸವಾಗಿದ್ದು, ತಾವು ಸಂತೋಷವಾಗಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

Jaggesh opens up about his constant fear of judging by others skr
Author
First Published May 2, 2024, 4:54 PM IST

ಸೆಲೆಬ್ರಿಟಿ ಜೀವನದ ಬಗ್ಗೆ ನಟ ಜಗ್ಗೇಶ್ ಉದ್ದನೆಯ ಲಹರಿ ಹರಿ ಬಿಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ರಸ್ತೆ ಬದಿ ತಾಳಿಬೊಂಡ ಖರೀದಿಸುತ್ತಿರುವ ಫೋಟೋ ಹಂಚಿಕೊಂಡಿರುವ ನಟ, ಸೆಲೆಬ್ರಿಟಿ ಜೀವನ ಸುಲಭವಲ್ಲ ಎಂದು ಹೇಳಿದ್ದಾರೆ. 

ಎಲ್ಲರೂ ಸೆಲೆಬ್ರಿಟಿ ಆಗಲು ಬಯಸುತ್ತಾರೆ. ಕೆಲವರು ನಟ ನಟಿ, ಕೆಲವರು ರಂಗಕಲಾವಿದರಾಗಿ, ಕೆಲವರು ಟಿವಿ, ಕೆಲವರು ತಮ್ಮ ಮೊಬೈಲ್ ಮೂಲಕ, ಮತ್ತೆ ಕೆಲವರು ಯೂಟ್ಯೂಬ್ ಮೂಲಕ ಒಟ್ಟಾರೆ ಹೇಗಾದರೂ ಸರಿ ಸೆಲಿಬ್ರಿಟ್ ಆಗಲೇಬೇಕು ಎಂದುಕೊಳ್ಳುತ್ತಾರೆ. ಆಗದಿದ್ದಾಗ ಡಿಪ್ರೆಶನ್‌ಗೆ ಹೋಗುವವರೂ ಇದ್ದಾರೆ. ಆದರೆ ಸೆಲೆಬ್ರಿಟಿ ಜೀವನ ಅಂದುಕೊಂಡಷ್ಟು ಚೆಂದವಲ್ಲ, ಅದೂ ಈಗಿನ ಕ್ಯಾಮೆರಾಗಳ ಸಮಯದಲ್ಲಿ ಎಂದು ನಟ ವಿವರಿಸಿದ್ದಾರೆ. 


 

ನಾನು ಸೆಲಿಬ್ರಿಟಿ ಕನಸು ಕಂಡವನಲ್ಲ
ನಾನೆಂದಿಗೂ ಸೆಲೆಬ್ರಿಟಿ ಆಗಬೇಕೆಂದುಕೊಂಡಿರಲಿಲ್ಲ. ಆದರೆ, ಕಟ್ಟಿಕೊಂಡ ಮಡದಿಯೊಂದಿಗೆ ಸಾಧಿಸಿ ಸಾಯಬೇಕು ಎಂದಷ್ಟೇ ಸಾಮಾನ್ಯ ಮನುಷ್ಯನಂತೆ ಕನಸು ಕಂಡಿದ್ದೆ. ಆದರೆ, ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು ಎಂದು ಜಗ್ಗೇಶ್ ಹೇಳಿದ್ದಾರೆ. ಆದರೆ, ಈ ಸುಖವೈಭೋಗ ಹೆಸರಿನಿಂದ ತಮ್ಮ ವೈಯಕ್ತಿಕ ಸಂತೋಷ ಕಮರಿ ಹೋಯಿತು ಎಂದು ನಟ ಹೇಳಿದ್ದಾರೆ.

ನಟನಿಗೆ ಸಮಸ್ಯೆ ಆಗುತ್ತಿರುವುದೇನು?
ಈಗ ಎಲ್ಲರ ಬಳಿ ಸೆಲ್‌ಫೋನ್‌ಗಳು, ಎಲ್ಲೆಡೆ ಸಿಸಿ ಕ್ಯಾಮೆರಾಗಳು ಬಂದ ಮೇಲೆ ಯಾರ ಬದುಕೂ ವೈಯಕ್ತಿಕವಾಗಿ ಉಳಿದಿಲ್ಲ. ಅಂಥದರಲ್ಲಿ ಮೊದಲೇ ಕ್ಯಾಮೆರಾಗಳಿಂದ ಆವೃತವಾಗಿರೋ ಸೆಲೆಬ್ರಿಟಿಗಳ ಬದುಕು ಹೇಗಿರಬಹುದು? ಇದನ್ನೇ ನಟ, ಸೆಲೆಬ್ರಿಟಿಯಾದ ಮೇಲೆ 'ಪ್ರತಿದಿನ ಯಾರು ಏನು ಹೇಳುತ್ತಾರೋ, ಯಾರು ತಪ್ಪು ಕಂಡು ಹಂಗಿಸುತ್ತಾರೋ, ಯಾರು ನಮ್ಮ ಬಾಯಿಂದ ಬಂದ ಅರಿಯದ ಮಾತು ಬಳಸಿ ಲೈಕ್ಸ್ ಪಡೆದು ಗಹಗಹಿಸಿ ನಗುತ್ತಾರೋ, ನನ್ನ ಖಾಸಗಿ ಸಂತೋಷವನ್ನು ಕಾಣದಂತೆ ಮೊಬೈಲ್ ನಲ್ಲಿ ಚಿತ್ರಿಸಿ ಲೈಕ್ಸ್ ಗಾಗಿ ಸಂಭ್ರಮಿಸೋ ಪುಣ್ಯಾತ್ಮರು ಬರುತ್ತಾರೋ, ಯಾರು ನನ್ನ ಕೇಡು ಬಯಸುತ್ತಾರೋ' ಎಂದು ಹೆದರಿಕೊಂಡಿರುವುದೇ ಆಗಿದೆ ಎಂದು ಜಗ್ಗೇಶ್ ಹೇಳಿದ್ದಾರೆ.  ಈ ಕಾರಣಗಳಿಗಾಗಿ 'ಸೆಲಿಬ್ರಿಟಿ ಬದುಕು ಜೀವನ ಪರ್ಯಂತ ಜೈಲುವಾಸ ಅಥವ ಮಹಡಿ ಮನೆಯ ಒಂಟಿ ಭಿಕ್ಷುಕನ ಜೀವನ ಸೆಲಿಬ್ರಿಟಿಯ ಬದುಕು..' ಎಂದು ವಿವರ ನೀಡಿದ್ದಾರೆ.

ಜಾನ್ವಿ ಕಪೂರ್ ಚೆನ್ನೈ ಮನೆಯಲ್ಲೀಗ ನೀವೂ ಉಳಿಯಬಹುದು, ಈ ದಿನಕ್ಕೆ ಬುಕ್ ಮಾಡಿ ನಟಿಯಿಂದಲೇ ಆತಿಥ್ಯ ಪಡೆಯಿರಿ!
 

ಸೆಲೆಬ್ರಿಟಿಯಾದ ಮೇಲೆ ಎಲ್ಲರಂತೆ ಎಲ್ಲ ಕಡೆ ಸಂತೋಷ ನೋಡುವ ಯೋಗ ಇಲ್ಲವಾಗಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. 

ಪಂಜರದಿಂದ ಹೊರ ಬರೋ ಪ್ರಯತ್ನದಲ್ಲಿದ್ದೇನೆ..
'ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯಾಗಿ ಅಥವ ಪಂಜರದಿಂದ ಹಾರಿ ಪರಿಸರ ಸವಿಯೋ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನ ಮಾಡುತ್ತಿದ್ದೇನೆ. ಇದರಲ್ಲಿ ಪೂರ್ಣ ಸಂತೋಷ ಸಿಗುತ್ತಿದೆಯೇ ಎಂದರೆ ಸತ್ಯವಾಗಿಯೂ ಇಲ್ಲ. ಏನೋ ಒಂದೆ ಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೆ' ಎಂದಿದ್ದಾರೆ.

Follow Us:
Download App:
  • android
  • ios