ಸಿನಿಮಾಗೆ ಬರದಿದ್ದರೆ ಶಿವಣ್ಣ ಇಂದು ಹೀಗಿರುತ್ತಿದ್ದರಂತೆ!
‘ಆನಂದ್’ಚಿತ್ರದಿಂದ ಇತ್ತೀಚೆಗೆ ತೆರೆ ಕಂಡ ‘ಆಯುಷ್ಮಾನ್ ಭವ’ ಚಿತ್ರದವರೆಗೂ ಅದೊಂದು ವಂಡರ್ಫುಲ್ಜರ್ನಿ. ಮೊದಲ ದಿನ ಕ್ಯಾಮರಾ ಎದುರಿಸಿದಾಗ ಇಲ್ಲಿವರೆಗೆ ಸಾಗಿ ಬರಬಹುದು ಈ ಸಿನಿ ಜರ್ನಿ ಅಂತ ಭಾವಿಸಿಕೊಂಡಿರಲಿಲ್ಲ - ಶಿವಣ್ಣ
1986 ಫೆಬ್ರವರಿ 19, ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟದಿನ. ಇಲ್ಲಿಗೆ ಸರಿಯಾಗಿ 34 ವರ್ಷ. ‘ಆನಂದ್’ ಚಿತ್ರದಿಂದ ಹಿಡಿದು ಇತ್ತೀಚೆಗೆ ತೆರೆ ಕಂಡ ‘ಆಯುಷ್ಮಾನ್ ಭವ’ ಚಿತ್ರದವರೆಗೆ ಅವರು ಅಭಿನಯಿಸಿದ ಚಿತ್ರಗಳ ಸಂಖ್ಯೆ 120 ಕ್ಕೂ ಹೆಚ್ಚು. ‘ದ್ರೋಣ’ ಹಾಗೂ ‘ಭಜರಂಗಿ 2’ ರಿಲೀಸ್ಗೆ ರೆಡಿ ಇವೆ. ಸದ್ಯಕ್ಕೀಗ 123 ನೇ ಚಿತ್ರವಾಗಿ ‘ಆರ್ಡಿಎಕ್ಸ್’ ಸೆಟ್ಟೇರಿದೆ.
ಅವರು ಚಿತ್ರರಂಗಕ್ಕೆ ಕಾಲಿಟ್ಟವಿಶೇಷ ದಿನವಾದ ಫೆ. 19 ರಂದೇ ಇದು ಮುಹೂರ್ತ ಕಂಡಿತು. ಮುಹೂರ್ತದ ವೇಳೆ ಮಾತಿಗೆ ಸಿಕ್ಕ ಶಿವರಾಜ್ ಕುಮಾರ್ 34 ವರ್ಷಗಳ ಸಿನಿಪಯಣವನ್ನು ತಮ್ಮದೇ ರೀತಿಯಲ್ಲಿ ಅವಲೋಕಿಸಿದರು.
ಶಿವಣ್ಣ ಇಂಡಸ್ಟ್ರಿಗೆ ಬಂದು 34 ವರ್ಷ ಪೂರ್ಣ; ಇಲ್ಲಿದೆ ಸಿನಿ ಝಲಕ್!
ನಾನು ಅಂದ್ರೆ ತಪ್ಪಾಗುತ್ತೆ...
ನಂಬರ್ ಅನ್ನೋದು ಹೋಗ್ತಾ ಇದೆ. ಆದ್ರೆ ಇದಕ್ಕೆ ನಾನೆಷ್ಟುಅರ್ಹ ಅನ್ನೋದು ನನಗಿರುವ ಪ್ರಶ್ನೆ. 34 ವರ್ಷ ಎನ್ನುವಷ್ಟರ ಮಟ್ಟಿಗೆ ನಾನೇನು ಮಾಡಿದ್ದೇನೆ ಅಂತ ನಾನೇ ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಹೆಚ್ಚು ಕಡಿಮೆ ಒಂದು ವಾರದಿಂದ ನನ್ನ ಮೊಬೈಲ್ಗೆ ಬರುತ್ತಿರುವ ಶುಭಾಶಯದ ಸ್ಟೇಟಸ್ ನೋಡಿದ್ರೆ ಖುಷಿ ಎನಿಸುತ್ತೆ. ಇಲ್ಲಿ ತನಕ ನಾನು ಅಭಿನಯಿಸಿದ ಪಾತ್ರಗಳನ್ನು ಒಟ್ಟಾಗಿಸಿ, ಶುಭಾಶಯ ತಿಳಿಸುತ್ತಿದ್ದಾರೆ.
ಅದೊಂದು ವಂಡರಫುಲ್ ಜರ್ನಿ. ಪ್ರತಿ ಪಾತ್ರವೂ ಒಂದೊಂದು ಬಗೆ. ಪ್ರತಿ ಸಿನಿಮಾದ ಕತೆಯೂ ಅಷ್ಟೇ ವಿಶೇಷ. ಆದ್ರೆ ಅದು ನಂದಲ್ಲ. ನಂದು ಅಂತ ಸುಲಭವಾಗಿ ಹೇಳಿಬಿಡಬಹುದು, ಅದ್ರೆ ಅದು ಅಷ್ಟುಸುಲಭವಲ್ಲ. ಅದೇನೆ ಆಗಿದ್ದರೂ ಅದಕ್ಕೆ ಕಾರಣ ಅಪ್ಪ-ಅಮ್ಮನ ಆಶೀರ್ವಾದ, ಚಿತ್ರೋದ್ಯಮದ ಬೆಂಬಲ, ಎಲ್ಲಕ್ಕಿಂತ ಮುಖ್ಯವಾಗಿ ಜನರು ಕೊಟ್ಟಪ್ರೀತಿ.
ನಟ ಅಲ್ದಿದ್ರೆ, ಉದ್ಯಮಿ ಆಗಿರ್ತಿದ್ದೆ...
‘ಆನಂದ್’ಚಿತ್ರದಿಂದ ಇತ್ತೀಚೆಗೆ ತೆರೆ ಕಂಡ ‘ಆಯುಷ್ಮಾನ್ ಭವ’ ಚಿತ್ರದವರೆಗೂ ಅದೊಂದು ವಂಡರ್ಫುಲ್ಜರ್ನಿ. ಮೊದಲ ದಿನ ಕ್ಯಾಮರಾ ಎದುರಿಸಿದಾಗ ಇಲ್ಲಿವರೆಗೆ ಸಾಗಿ ಬರಬಹುದು ಈ ಸಿನಿ ಜರ್ನಿ ಅಂತ ಭಾವಿಸಿಕೊಂಡಿರಲಿಲ್ಲ. ಅಪ್ಪ-ಅಮ್ಮನ ಆಸೆ, ನನಗಿದ್ದ ಆಸಕ್ತಿ, ಮೇಲಾಗಿ ಅಪ್ಪಾಜಿ ಹಾಕಿಕೊಟ್ಟದಾರಿಯನ್ನೇ ಹಿಂಬಾಲಿಸಿ ಸಿನಿಮಾ ರಂಗಕ್ಕೆ ಕಾಲಿಟ್ಟೆ. ಅದು ಇಲ್ಲಿ ತನಕ ನಡೆಸಿಕೊಂಡು ಬಂದಿದೆ.
ಆಕಸ್ಮಾತ್ ಸಿನಿಮಾ ಅಲ್ಲದಿದ್ದರೆ ನಾನು ಏನಾಗಿರುತ್ತಿದ್ದೆ ಅಂತ ಯೋಚಿಸಿದರೆ , ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ನನ್ನಿಷ್ಟದ ಕ್ಷೇತ್ರ ಆಗಿರುತ್ತಿತ್ತು.ಯಾಕಂದ್ರೆ ಎಂಸಿ ಓದಿದ್ದೆ. ಅದು ಉದ್ಯಮಕ್ಕೂ ಕನೆಕ್ಷನ್ ಹೊಂದಿತ್ತು. ಅಲ್ಲಿಯೇ ಇರುತ್ತಿದ್ದೆನೋ ಏನೋ. ಆದ್ರೆ ಜನರ ಪ್ರೀತಿ ಸಿಕ್ಕಿತಲ್ಲವೇ, ಹಾಗಾಗಿ ಇಲ್ಲಿ ತನಕ ಬರುವಂತಾಯಿತು.
ಕೇವಲ 4 ಸೆಕೆಂಡ್ ತಡವಾಗಿದ್ದರೆ, ನಾನು ಸಾಯುತ್ತಿದ್ದೆ: ಕಮಲ್ ಹಾಸನ್
ಅವರು ಕಲಿಸಿದರು, ನಾನು ಕಲಿತೆ..
ಸಿನಿಮಾ ಅನ್ನೋದು ಕಲಿಕೆಯ ಸಮುದ್ರ. ಇಲ್ಲಿ ಎಷ್ಟೇ ಕಲಿತರೂ ಕಮ್ಮಿ. ನನ್ನ ಮಟ್ಟಿಗೆ ನಾನು ಈಗಲೂ ಸಿನಿಮಾದ ಸ್ಟುಡೆಂಟ್.‘ಆನಂದ್’ ಚಿತ್ರದಿಂದ ಇಲ್ಲಿ ತನಕ ಅದೇ ಪ್ರೊಸಸ್ನಲ್ಲಿದ್ದೇನೆ. ಕಾಲಕ್ಕೆ ತಕ್ಕಂತೆ ಸಾಕಷ್ಟುಕಲಿಯುವುದಕ್ಕೂ ಸಾಧ್ಯ ಆಗಿದೆ. ನನ್ನ ಮಟ್ಟಿಗೆ ಐ ಆ್ಯಮ್ ಕೋಚ್್ಡ ಆ್ಯಂಡ್ ಅಪ್ರೋಚ್್ಡ. ಹೊಸಬರು, ಹಳಬರು ಯಾರಾದರೂ ಸರಿ ಅವರೊಂದಿಗೆ ಕೆಲಸ ಮಾಡುವಾಗ ಅವರಿಗೆ ಸ್ಟುಡೆಂಟ್. ಪ್ರತಿಯೊಬ್ಬರಿಂದಲೂ ಒಂದೊಂದು ಕಲಿತುಕೊಂಡು ಬಂದಿದ್ದೇನೆ. ಅದು ಕಾಲದ ಅನಿವಾರ್ಯವೂ ಕೂಡ. ಕಾಲಕ್ಕೆ ತಕ್ಕಂತೆ ನಾವು ಅಪಡೇಟ್ ಆಗದಿದ್ದರೆ ಕಳೆದು ಹೋಗುತ್ತೇವೆ. ಟೆಕ್ನಾಲಜಿ ಸಾಕಷ್ಟುಚೇಂಜಸ್ ತಂದಿದೆ.ಅದಕ್ಕೆ ತೆರೆದುಕೊಂಡರೆ ಮಾತ್ರ ಇಲ್ಲಿರಲು ಸಾಧ್ಯ.
ನಾನೇನು ತಪ್ಪು ಮಾಡಿಲ್ಲ ಅಂತಲ್ಲ...
ನಾನು ತಪ್ಪೇ ಮಾಡಿಲ್ಲ ಅಂತಲ್ಲ. ನೋಡಿ ಕಲಿಯುವಾಗ ಸಾಕಷ್ಟುಮಿಸ್ಟೇಕ್ ಆಗಿದೆ. ಡೈಲಾಗ್ ಸ್ಪೀಡ್ ಆಗಿರುತ್ತೆ ಅಂತ ಒಮ್ಮೆ ಪತ್ರಿಕೆಯವರೇ ಬರೆದಿದ್ದರು. ಅವರು ಬರೆದ್ರು ಅಂತ ಬೇಸರ ಮಾಡಿಕೊಂಡಿರಲಿಲ್ಲ. ಬದಲಿಗೆ ನಾನು ತಪ್ಪು ತಿದ್ದಿಕೊಳ್ಳುವುದಕ್ಕೆ ಅವರ ಸಲಹೆ ಅದು ಅಂತ ಸ್ವೀಕರಿಸಿದೆ. ಡೈಲಾಗ್ನಲ್ಲಿ ಚೇಂಜಸ್ ಮಾಡಿಕೊಂಡಿದ್ದು ನಟನೆಗೆ ಅನುಕೂಲ ಆಯಿತು.
ಅದನ್ನು ಪತ್ರಿಕೆಯವರೇ ಹೇಳಿದರು. ನಟನೆ ಚೆನ್ನಾಗಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದರು. ಒಮ್ಮೆ ಉಪೇಂದ್ರ ಅವರು ಮಾತನಾಡುತ್ತಾ ನಿಮ್ಮ ಕಣ್ಣು ಚೆನ್ನಾಗಿದೆ ಅಂದ್ರು. ಕಣ್ಣುಗಳನ್ನೇ ನಟನೆಗೆ ಇನ್ನಷ್ಟುಪರಿಣಾಮಕಾರಿಯಾಗಿ ಬಳಸಿಕೊಂಡರೆ ಹೇಗೆ ಅಂತ ಆಲೋಚಿಸಿ, ಆ ಪ್ರಯತ್ನ ಮಾಡಿದೆ. ಅದಕ್ಕೂ ಮೆಚ್ಚುಗೆ ಸಿಕ್ಕಿತು.ಪ್ರತಿಯೊಂದನ್ನು ಹೀಗೆ ಕಲಿಯುತ್ತಾ, ತಪ್ಪಾಗಿದ್ದಲಿ ತಿದ್ದಿಕೊಳ್ಳುತ್ತಾ ಬಂದಿದ್ದೇನೆ. ನಾನೇ ಪರ್ಫೆಕ್ಟ್ ಅಂತ ನಾನೆಂದು ಭಾವಿಸಿಕೊಂಡಿಲ್ಲ.
ಕಾಡುವ ಸಿನಿಮಾ ಅದೊಂದೆ...
ಯಾರಿಗೇ ಆದರೂ ಫಸ್ಟ್ ಸಿನಿಮಾ ಬೆಸ್ಟ್ ಸಿನಿಮಾ. ಅದನ್ನು ಮರೆಯೋದಿಕ್ಕೆ ಆಗೋದಿಲ್ಲ. ಅದಾಗ್ಯೂ ನಾನು ಅಭಿನಯಿಸಿದ ಸಿನಿಮಾಗಳೆಲ್ಲವೂ ನನಗಿಷ್ಟವಾಗುವ ಸಿನಿಮಾಗಳೇ. ಒಂದೊಂದು ಕಾರಣಕ್ಕೆ ಒಂದೊಂದು ಬೆಸ್ಟ್ ಎನಿಸುತ್ತವೆ. ಆದರೂ ನನಗೆ ಈಗಲೂ ಕಾಡುವ ಸಿನಿಮಾ ‘ಚಿಗುರಿದ ಕನಸು’. ಅದರಲ್ಲಿ ನಮ್ಮ ಬೇರುಗಳಿವೆ. ಮೌಲ್ಯಗಳಿವೆ. ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ ಅದು. ಒಳ್ಳೆಯ ಸಂದೇಶಯಿದೆ. ಅವತ್ತು, ಇವತ್ತು ಯಾವಾತ್ತಿಗೂ ನನಗದು ಕಾಡಿಸುತ್ತದೆ. ಕಮರ್ಷಿಯಲ್ ಜತೆಗೆಯೇ ಅಂತಹ ಸಿನಿಮಾಗಳು ಬೇಕು. ಸಿನಿಮಾ ಅಂದ್ರೆ ಎಲ್ಲಾ ರೀತಿಯ ಸಿನಿಮಾಗಳು ಬೇಕು.
"
ನಿರ್ದೇಶನಕ್ಕೂ ಬರಬಹುದು...
ನಮ್ಮದೇ ಬ್ಯಾನರ್ ನಲ್ಲಿ ‘ಭೈರತಿ ರಣಗಲ್’ ಸಿನಿಮಾ ಬರುತ್ತೆ.ಅದಕ್ಕೆ ಗೀತಾ ಅವರೇ ನಿರ್ಮಾಪಕರು. ಅದು 125 ಸಿನಿಮಾ. ಅಲ್ಲಿಗೆ ನಿರ್ಮಾಣ ಅಂತಲೂ ಶುರುವಾಗುತ್ತಿದೆ.ಅದರ ಜತೆಗೆ ನಿರ್ದೇಶನಕ್ಕೂ ಬರಬಹುದು.
ಶ್ರೀಕಾಂತ್ ಬಳಿ ಒಂದೊಳ್ಳೆಯ ಕತೆಯಿದೆ. ಈಚೆಗೆ ಸುಮ್ಮನೆ ಮಾತನಾಡುತ್ತಿದ್ದಾಗ ಕತೆಯ ಏಳೆ ಹೇಳಿದರು. ಚೆನ್ನಾಗಿದೆ ಅಂತ ಎನಿಸಿತು. ಅದಕ್ಕೆ ಪುನೀತ್ ಹೀರೋ ಆದ್ರೆ ಚೆನ್ನಾಗಿರುತ್ತೆ ಅಂತಲೂ ಯೋಚನೆ ಬಂತು. ಅದ್ಯಾವುದು ಫೈನಲ್ ಅಲ್ಲ. ಆಗಬಹುದು ಅಂತ ಆಲೋಚನೆ. ನೋಡೋಣ ಎಲ್ಲವೂ ಏನಾಗುತ್ತೋ.