ಕನ್ನಡದ ಒಂದಿಷ್ಟುಮೇರು ಕೃತಿಗಳು ಬೆಳ್ಳಿಪರದೆ ಮೇಲೆ ದೃಶ್ಯ ರೂಪದಲ್ಲಿ ಬರುವ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರುವ ಕೃತಿ ‘ಹೆಜ್ಜೆ’ ಕಾದಂಬರಿ. 

ಬಹು ವರ್ಷಗಳಿಂದಲೂ ಈ ಕಾದಂಬರಿ ಸಿನಿಮಾ ಆಗಲಿದೆ ಎನ್ನುವ ಸುದ್ದಿ ಇದೆ. ಎಚ್‌ ಡಿ ಕುಮಾರಸ್ವಾಮಿ ನಿರ್ಮಾಣ ಹಾಗೂ ಎಸ್‌ ನಾರಾಯಣ್‌ ನಿರ್ದೇಶನದಲ್ಲಿ ಈ ಕೃತಿ ಸಿನಿಮಾ ಆಗಲಿದೆ ಎಂಬುದು 15 ವರ್ಷ ಹಳೆಯ ಯೋಜನೆ.

Add Asianetnews Kannada as a Preferred SourcegooglePreferred

ಈಗ ಈ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ‘ಹೆಜ್ಜೆ’ ಕಾದಂಬರಿಯನ್ನು ಸಿನಿಮಾ ಮಾಡುವ ನಿಟ್ಟಿನಲ್ಲಿ ಎಸ್‌ ನಾರಾಯಣ್‌ ಹಾಗೂ ಎಚ್‌ ಡಿ ಕುಮಾರಸ್ವಾಮಿ ಜೋಡಿ ಮತ್ತೆ ಜತೆಯಾಗಿದ್ದಾರೆ. ನಾರಾಯಣ್‌ ಅವರೇ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

‘ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಸಿನಿಮಾ ಮಾಡಬೇಕು ಎಂಬುದು ನನ್ನ ಮತ್ತು ಕುಮಾರಸ್ವಾಮಿ ಅವರ ಬಹು ವರ್ಷಗಳ ಕನಸು. ಅದಕ್ಕೆ ಈಗ ಮತ್ತೆ ಜೀವ ಬಂದಿದೆ. ಸಾಕಷ್ಟುತಯಾರಿ ಮಾಡಿಕೊಂಡೇ ಈ ಸಿನಿಮಾ ಮಾಡುತ್ತೇವೆ. ಬಹುತಾರಾಗಣ ಈ ಚಿತ್ರದಲ್ಲಿ ಇರಲಿದೆ. ಸ್ಟಾರ್‌ ನಟ, ನಟಿಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಈಗಷ್ಟೆಮಾತುಕತೆ ಮಾಡುತ್ತಿದ್ದೇವೆ. ಮುಂದೆ ಎಲ್ಲವೂ ಹೇಳಲಿದ್ದೇವೆ. ಟೈಟಲ್‌ ಬೇರೆ ಇಟ್ಟರೂ ಇಡಬಹುದು. ಸದ್ಯಕ್ಕೆ ಹೆಜ್ಜೆ ಎನ್ನುವ ಹೆಸರಿನಲ್ಲಿ ಈ ಚಿತ್ರಕ್ಕೆ ಚಾಲನೆ ಕೊಟ್ಟಿದ್ದೇವೆ’ ಎನ್ನುತ್ತಾರೆ ಎಸ್‌ ನಾರಾಯಣ್‌.

'5ಡಿ' ಚಿತ್ರದ ಶೂಟಿಂಗ್ ಮುಕ್ತಾಯ!

ಸ್ವಾತಂತ್ರ್ಯಪೂರ್ವ ಭಾರತದ ಕತೆಯಿರುವ ಈ ಚಿತ್ರವನ್ನು ಎಚ್‌ ಡಿ ಕುಮಾರಸ್ವಾಮಿ ಅದ್ದೂರಿಯಾಗಿ ನಿರ್ಮಿಸಲು 2006ರಲ್ಲೇ ನಿರ್ಧಾರ ಮಾಡಿದ್ದರು. ಆ ಪ್ರಯುಕ್ತ ಒಂದು ಪತ್ಕಿಕಾಗೋಷ್ಠಿ ಕರೆದು ಎಲ್ಲರಿಗೂ ಹೆಜ್ಜೆ ಕಾದಂಬರಿಯ ಒಂದು ಪ್ರತಿಯನ್ನು ಕೊಟ್ಟಿದ್ದರು. ಕಮಲಹಾಸನ್‌ ಈ ಚಿತ್ರದಲ್ಲಿ ನಟಿಸುವುದಾಗಿಯೂ ವದಂತಿ ಹಬ್ಬಿತ್ತು. ಹದಿನೈದು ವರುಷಗಳ ಕಾಲ ನಡೆಯದೇ ಇದ್ದ ಹೆಜ್ಜೆ ಈಗ ಮತ್ತೆ ಮುಂದಡಿ ಇಟ್ಟಿದೆ