ಮತ್ತೆ ಬರಗೂರು ಚಿತ್ರದಲ್ಲಿ ಹರಿಪ್ರಿಯಾ ನಾಯಕಿ; ಸಿನಿಮಾ ಆಗಲಿದೆ ಕಸ್ತೂರ್ ಬಾ ವರ್ಸಸ್ ಗಾಂಧಿ ಕಾದಂಬರಿ!
ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹಾಗೂ ಹರಿಪ್ರಿಯಾ, ದುನಿಯಾ ಕಿಶೋರ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರದ ಹೆಸರು ‘ತಾಯಿ ಕಸ್ತೂರ್ ಗಾಂಧಿ’ ಎಂಬುದು.
ಈ ಹಿಂದೆ ಇದೇ ಕಾಂಬಿನೇಷನ್ನಲ್ಲಿ ‘ಅಮೃತಮತಿ’ ಸಿನಿಮಾ ಬಂದಿದ್ದು, ಈಗ ಸ್ವಾತಂತ್ರ್ಯ ಪೂರ್ವದ ಕತೆಯನ್ನು ಹೇಳುತ್ತಿದ್ದಾರೆ. ಇದು ಕಸ್ತೂರ್ ಬಾ ಗಾಂಧಿ ಅವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ರೂಪಿಸಲಾಗುತ್ತಿದ್ದು, ಬರಗೂರು ಅವರೇ ಬರೆದಿರುವ ‘ಕಸ್ತೂರ್ ಬಾ ವರ್ಸಸ್ ಗಾಂಧಿ’ ಹೆಸರಿನ ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಜನಮಿತ್ರ ಮೂವೀಸ್ ಬ್ಯಾನರ್ನಲ್ಲಿ ಗೀತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹರಿಪ್ರಿಯಾ ಕಸ್ತೂರ್ ಬಾ ಪಾತ್ರ ಮಾಡಿದರೆ, ದುನಿಯಾ ಕಿಶೋರ್ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಡಾ ಬಿಆರ್ ಅಂಬೇಡ್ಕರ್ ಪಾತ್ರ ಕೂಡ ಕತೆಯಲ್ಲಿ ಮುಖ್ಯ ಭಾಗವಾಗಿ ಬರಲಿದ್ದು, ಈ ಪಾತ್ರವನ್ನು ಕನ್ನಡದ ಹಿರಿಯ ನಟರೊಬ್ಬರು ನಟಿಸುವ ಸಾಧ್ಯತೆಗಳಿವೆ.
ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಚಳುವಳಿಯಲ್ಲೂ ಕಸ್ತೂರ್ ಬಾ ವಹಿಸಿದ ಪಾತ್ರ ಬಹಳ ಮಹತ್ವದ್ದು. ಹೀಗಾಗಿ ಚಿತ್ರದಲ್ಲಿ ಕಸ್ತೂರ್ ಬಾ ಅವರ ಜತೆಗೆ ಗಾಂಧೀಜಿ ಅವರ ಜೀವನ ಕೂಡ ಕಟ್ಟಿಕೊಡಲಿದೆ. ಗಾಂಧೀಜಿ ಆದರ್ಶ ಹಾಗೂ ಕಸ್ತೂರ್ ಬಾ ಜೀವನ ಎರಡು ಮುಖಾಮುಖಿ ಆಗುವ ಅಪರೂಪದ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು ಎನ್ನುತ್ತಾರೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ. ನಾಗರಾಜ ಅದವಾನಿ ಕ್ಯಾಮೆರಾ, ಶಮಿತಾ ಮಲ್ನಾಡ್ ಸಂಗೀತ, ಮೈತ್ರಿ ಬರಗೂರ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ಬರಗೂರು 'ಅಮೃತಮತಿ'ಗೆ ಅಂತಾರಾಷ್ಟ್ರೀಯ ಪ್ರಶಸ್ತಿ!
ಕೊರೋನಾ ಸಂಕಷ್ಟಗಳು ಕಡಿಮೆಯಾದ ಕೂಡ ಚಿತ್ರೀಕರಣ ಆರಭವಾಗವಿದೆ. ಗುಜರಾತ್ನ ಸಬರಮತಿ ಆಶ್ರಮ, ಮಹಾರಾಷ್ಟ್ರದ ವಾರ್ಧಾ ಆಶ್ರಮ, ಪೂನಾದ ಆಗಾಖಾನ್ ಬಂಗಲೆ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಇಡೀ ಸಿನಿಮಾ ಸಾಕಷ್ಟು ನೈಜತೆಯಿಂದ ಕೂಡಿರುತ್ತದೆ ಎಂಬುದು ನಿರ್ದೇಶಕರು ಕೊಡುವ ಮಾಹಿತಿ.