ಛಾಯಾಗ್ರಾಹಕ ಡಾ. ನಾಗರಾಜ್ ಶರ್ಮಾ ಅವರು ಅಂಬರೀಷ್ ಅವರ ಮನೆಗೆ ಫೋಟೋಶೂಟ್ಗೆ ಹೋದಾಗಿನ ಒಂದು ಘಟನೆಯನ್ನು ವಿವರಿಸಿದ್ದಾರೆ. ಅಂಬರೀಷ್ ಅವರ ಫೋಟೋಗಳನ್ನು ತೆಗೆದ ನಂತರ, ಆಶ್ಚರ್ಯಕರವಾಗಿ ಅಲ್ಲಿ ನಟಿ ಭಾರತಿ ಅವರನ್ನು ಕಂಡು ಅವರ ಫೋಟೋಗಳನ್ನೂ ತೆಗೆದರು. ವಿಷ್ಣುವರ್ಧನ್ ಅವರನ್ನು ಮದುವೆಯಾದ ನಂತರ ನಟನೆಯಿಂದ ದೂರವಿದ್ದ ಭಾರತಿ, ಮೇಕಪ್ ಇಲ್ಲದೆಯೇ ಮನೆಯಲ್ಲಿದ್ದವರ ಸಹಾಯದಿಂದ ಡ್ರೆಸ್ ಮಾಡಿಕೊಂಡು ಫೋಟೋಗಳಿಗೆ ಪೋಸ್ ಕೊಟ್ಟರು. ಈ ಅಪರೂಪದ ಘಟನೆಯನ್ನು ಶರ್ಮಾ ಅವರು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಸೀನಿಯರ್ ಫೋಟೋಗ್ರಾಫರ್ ಡಾ ನಾಗರಾಜ್ ಶರ್ಮಾ (Dr Nagaraj Sharma) ಅವರು ಹಳೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಅವರು ಸ್ಟಿಲ್ ಫೋಟೋಗ್ರಾಫರ್ ಆಗಿದ್ದು, ಸಿನಿಮಾಗಳಿಗೆ ಮಾತ್ರವಲ್ಲದೆ ಖಾಸಗಿಯಾಗಿ ಸಹ ಫೋಟೋ ತೆಗೆಯುತ್ತಿದ್ದರು. ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಡಾ. ನಾಗರಾಜ್ ಶರ್ಮಾ ಅವರು ಈ ಸಂಗತಿ ಹೇಳಿದ್ದಾರೆ. ಹೀಗೇ ಒಮ್ಮೆ ನಟ ಅಂಬರೀಷ್ (Rebel Star Ambareesh) ಅವರ ಮನೆಗೆ ಮೊದಲೇ ಅಪಾಯಿಂಟ್ಮೆಂಟ್ ತೆಗೆದುಕೊಂಡು ಫೊಟೋ ತೆಗೆಯಲು ಹೋಗಿದ್ದರಂತೆ. ಆಗ ಅಂಬರೀಷ್ ಅವರು ಯಾವುದೋ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದು ಮಲಗಿದ್ದರು.
ಸರಿ, ನಟ ಅಂಬರೀಷ್ ಅವರ ಮನೆ ಎಂದಮೇಲೆ ಕೇಳಬೇಕೇ? ಅದು ಮಹಾ ವಿದ್ವಾನ್ ಪಿಟೀಲು ಚೌಡಯ್ಯನವರ ಮನೆ, ಹುಚ್ಚೇಗೌಡರ ಮನೆ, ಪಿಟೀಲು ಚೌಡಯ್ಯ ಅಂಬರೀಷ್ ಅವರ ಮನೆ. ಅಲ್ಲಿ ಅತಿಥಿ ಸತ್ಕಾರ ಉತ್ಕೃಷ್ಟ ಮಟ್ಟದಲ್ಲೇ ಇರುತ್ತೆ. ತಿಂಡಿ ತಿಂದು ಕಾಫಿ ಕುಡಿದ ಮೇಲೆ ನಟ ಅಂಬರೀಷ್ ಅವರು ಬಂದು ಮನೆಯ ಬೇರೆ ಬೇರೆ ನಿಂತು ಫೋಟೋಗೆ ಪೋಸ್ ಕೊಟ್ಟರು. ಅವರು ಸಾಕಷ್ಟು ಫೋಟೋ ತೆಗೆಸಿಕೊಂಡು, ಬೇರೆ ಬೇರೆ ಕಾಸ್ಟ್ಯೂಮ್ ಹಾಕಿಕೊಂಡು ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾಯ್ತು.
ಕನ್ನಡದ 'ಕುಚಿಕು' ಹಾಡು ಬಿಡುಗಡೆ ಆಯ್ತು, ಫೆಬ್ರವರಿ 14ಕ್ಕೆ ಬರಲಿದೆ ಸಿನಿಮಾ!
ಅಷ್ಟರಲ್ಲಿ ನಟ ಅಂಬರೀಷ್ ಮನೆಯಲ್ಲಿ ಬೇರೆ ಕೋಣೆಯಲ್ಲಿ ಮಲಗಿದ್ದ ನಟಿ ಭಾರತಿ (Bharathi) ಅವರು ಎದ್ದು ಮುಖ ತೊಳೆಯಲಿ ಬಂದರು. ಫೊಟೋಗ್ರಾಫರ್ ಡಾ ನಾಗರಾಜ್ ಶರ್ಮಾ ಅವರಿಗೆ ಅಚ್ಚರಿ ಹಾಗೂ ಸಂತೋಷ ಒಟ್ಟಿಗೇ ಆಯ್ತು. ಕಾರಣ, ನಟಿ ಭಾರತಿ ಎಂದರೆ ಆಗ ಸೂಪರ್ ಸ್ಟಾರ್. ಅಷ್ಟೇ ಅಲ್ಲ, ಆಗಷ್ಟೇ ಭಾರತಿ ಹಾಗೂ ನಟ ವಿಷ್ಣುವರ್ಧನ್ ಮದುವೆ ಮುಗಿದು ಕೆಲವೇ ದಿನಗಳಾಗಿತ್ತು. ಆಗ ಅವರು ಅಪ್ಪಟ ಗೃಹಿಣಿಯಾಗಿ ಸಿನಿಮಾ ನಟನೆ ಬಿಟ್ಟಿದ್ದರು. ಹೀಗಾಗಿ ಅವರ ಫೊಟೋ ಸಿಕ್ಕರೆ ತುಂಬಾ ಅನುಕೂಲ ಆಗುತ್ತಿತ್ತು.
ಈ ಕಾರಣಕ್ಕೆ ನಾಗರಾಜ್ ಶರ್ಮಾ ಅವರು ಭಾರತಿಯವರ ಬಳಿ ನಿಮ್ಮ ಫೋಟೋ ತೆಗೆದುಕೊಳ್ಳಬಹುದೇ ಎಂದಾಗ ಅವರು 'ಓಕೆ, ಆದ್ರೆ ನಾನು ಇಲ್ಲಿ ಮೇಕಪ್-ಡ್ರೆಸ್ ಏನೂ ತಂದಿಲ್ಲ' ಎಂದರು. ಆಗ ಫೊಟೋಗ್ರಾಫರ್ 'ಇಲ್ಲಿ ಹೇಗೂ ಸಾಕಷ್ಟು ಹೆಣ್ಣುಮಕ್ಕಳು, ಹೆಂಗಸರು ಇದ್ದಾರೆ. ಅವರದೇ ಡ್ರೆಸ್ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳಬಹುದು' ಎಂದಾಗ ಒಪ್ಪಿ ಭಾರತಿಯವರು ಫೋಟೋ ತೆಗೆಸಿಕೊಂಡರಂತೆ. ಅಂಬರೀಷ್ ಮನೆಯ ಬೃಂದಾವನದ ಸಮೀಪ, ತುಳಿಸಿಕಟ್ಟೆ, ಅಡುಗೆ ಮನೆ ಹೀಗೆ ಹಲವು ಕಡೆಗಳಲ್ಲಿ ನಿಂತು ಭಾರತಿಯವರು ಫೋಟೋ ತೆಗೆಸಿಕೊಂಡರು.
ಉಪೇಂದ್ರ ತಲೆಗೆ 'ಉಲ್ಟಾ ಐಡಿಯಾ' ಬಂದಿದೆ, ಆ ಸಿನಿಮಾ 'ದಡ್ಡರಿಗಾಗಿ ಮಾತ್ರ' ಇರಬಹುದೇ?
ಈ ಸಂಗತಿಯನ್ನು ಡಾ ನಾಗರಾಜ್ ಶರ್ಮಾ ಅವರು ತಮ್ಮ ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ಹೇಳಿದ್ದಾರೆ. ಅಂಬರೀಷ್ ಫೋಟೋ ತೆಗೆಯಲು ಹೋಗಿ ಜೊತೆಯಲ್ಲಿ ನಟಿ ಭಾರತಿಯವರ ಫೋಟೋ ಕೂಡ ತೆಗೆದ ಅಚ್ಚರಿಯ ಸಂಗತಿಯನ್ನು ಅಲ್ಲಿ ಅವರು ಹಂಚಿಕೊಂಡಿದ್ದಾರೆ.

