Asianet Suvarna News Asianet Suvarna News

Garuda Gamana Vrishabha Vahana: ಚಿತ್ರಕ್ಕೆ ಶುಭ ಹಾರೈಸಿದ ವಿಕಟಕವಿ ಯೋಗರಾಜ್ ಭಟ್

ರಿಷಬ್‌ ಶೆಟ್ಟಿ ಹಾಗೂ ರಾಜ್‌ ಬಿ. ಶೆಟ್ಟಿ ಕಾಂಬಿನೇಷನ್‌ನ ಗರುಡಗಮನ ವೃಷಭವಾಹನ ಚಿತ್ರವನ್ನು ನಿರ್ದೇಶಕ ಯೋಗರಾಜ್ ಭಟ್ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

director yogaraj bhat appreciation for raj b shetty garuda gamana vrishabha vahana movie gvd
Author
Bangalore, First Published Nov 28, 2021, 6:04 PM IST

'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಾಜ್‌ ಬಿ. ಶೆಟ್ಟಿ (Raj B Shetty) ಮೊದಲ ಬಾರಿಗೆ  'ಗರುಡಗಮನ ವೃಷಭವಾಹನ' (Garuda Gamana Vrishabha Vahana) ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ರಿಷಬ್‌ ಶೆಟ್ಟಿ (Rishab Shetty) ಜೊತೆ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈಗಾಗಲೇ ಬಹಳಷ್ಟು ಜನ ಗಣ್ಯರು ಸಿನಿಮಾ ನೋಡಿ ಮೆಚ್ಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೀಗ ವಿಕಟಕವಿ, ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಅವರು ಕೂಡ ಚಿತ್ರವನ್ನು ನೋಡಿದ್ದಾರೆ.

ಈ ಬಗ್ಗೆ ಯೋಗರಾಜ್ ಭಟ್ ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ 'ನಮಸ್ತೆ, ಗರುಡ ಗಮನ ವೃಷಭ ವಾಹನ ನೋಡಿದೆ. ಆನಂದಿಸಿದೆ. ಒಳ್ಳೆ ಪ್ರಯೋಗಗಳು ಒಳ್ಳೆಯ ಫಲಿತಾಂಶ ಕೊಡುವ ಕಾಲ ಕನ್ನಡಕ್ಕೆ ಬಂದಂತಿದೆ. ನಿರ್ದೇಶಕ ಮಿತ್ರ ರಾಜ್ ಶೆಟ್ಟಿಗೆ ಅಭಿನಂದನೆ, ಶುಭವಾಗಲಿ, ಜೈ ಚಿತ್ರತಂಡ ಎಂದು ಹಾರೈಸಿದ್ದಾರೆ. ಈ ಪೋಸ್ಟ್‌ಗೆ 'ಗುರುಗಳೇ ಶರಣು ನಮಸ್ಕಾರ'  ಎಂದು ರಾಜ್‌.ಬಿ.ಶೆಟ್ಟಿ ಕಾಮೆಂಟ್ ಮಾಡುವ ಮೂಲಕ ಧನ್ಯವಾದವನ್ನು ಸಲ್ಲಿಸಿದ್ದಾರೆ. ಇನ್ನು ಇತ್ತೀಚೆಗೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ (Rakshit Shetty) ಚಿತ್ರ ತಂಡವನ್ನು ಮತ್ತು ನಿರ್ಮಾಪಕರನ್ನು ಹೃದಯಸ್ಪರ್ಶಿಯಾಗಿ ಶ್ಲಾಘಿಸಿ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದರು.

Yogaraj Bhat 'ಗರಡಿ' ಮನೆಗೆ ಎಂಟ್ರಿ ಕೊಟ್ಟ ಯಶಸ್ ಸೂರ್ಯ

'ಚಿತ್ರ ನಿರ್ಮಾಪಕರಾದ ರವಿ ರೈ ಕಳಸ ಹಾಗೂ ವಚನ್‌ ಶೆಟ್ಟಿ, ಕಾಫಿ ಗ್ಯಾಂಗ್‌ ಸ್ಟುಡಿಯೋದ ವಿಕಾಸ್‌ ಮತ್ತು ಶ್ರೀಕಾಂತ್‌, ಚಿತ್ರದ ನಾಯಕ ರಾಜ್‌ ಬಿ ಶೆಟ್ಟಿ ಮತ್ತು ತಂಡಕ್ಕೆ, ಈ ಚಿತ್ರವನ್ನು ತಯಾರಿಸಿದ ಲೈಟರ್‌ ಬುದ್ಧ ಫಿಲ್ಮ್ಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ಸುಂದರ ಕಲೆಯನ್ನು ಪರಂವಃ ಸ್ಟುಡಿಯೋಸ್‌ ಮೂಲಕ ಪರಿಚಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು' ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ (Tweet) ಮಾಡಿದ್ದರು. ಜೊತೆಗೆ ಅತ್ಯುತ್ತಮ ಚಿತ್ರದ ಭಾಗವಾಗಿರುವುದಕ್ಕೆ ರಿಷಬ್ ಶೆಟ್ಟಿ ಅವರಿಗೆ, ತಮ್ಮ ಜೊತೆ ಸಿನಿ ಪಯಾಣ ಬೆಳೆಸಿದ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಅವರಿಗೆ, ಚಿತ್ರವನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ, ವೀಕ್ಷಕರಿಗೆ ರಕ್ಷಿತ್‌ ಶೆಟ್ಟಿ ಧನ್ಯವಾದಗಳನ್ನು ತಿಳಿಸಿದ್ದರು.

'ಗರುಡಗಮನ ವೃಷಭವಾಹನ' ಚಿತ್ರಕ್ಕೆ ಮಂಗಳೂರಿನ ಭೂಗತ ಜಗತ್ತಿನ ಸುತ್ತ ಕಥಾಹಂದರವಿದೆ. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ವಿಪರೀತ ಸ್ವಭಾವ. ಇಂಥ ಸ್ವಭಾವದ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವ ಕಥೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ಹಾಗೂ ಪರಂವಃ ಸ್ಟುಡಿಯೋ ಮೂಲಕ ರಕ್ಷಿತ್‌ ಶೆಟ್ಟಿ ಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ರಾಜ್‌ ಬಿ. ಶೆಟ್ಟಿ, ರಿಷಬ್‌ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ ರೈ ಪಾಣಾಜೆ ಮುಂತಾದವರ ತಾರಾಗಣ ಚಿತ್ರಕ್ಕಿದೆ.

Garuda Gamana Vrishabha Vahana: ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ ರಕ್ಷಿತ್‌ ಶೆಟ್ಟಿ

ಇನ್ನು, ಯೋಗರಾಜ್ ಭಟ್ ನಿರ್ದೇಶನದ 'ಗಾಳಿ​ಪಟ 2' (Galipata 2)  ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ 'ಗರಡಿ' (Garadi) ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಯಶಸ್ ಸೂರ್ಯ (Yashas Surya) ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ (Poster) ಬಿಡುಗಡೆಯಾಗಿದೆ.  'ಗರಡಿ' ಚಿತ್ರಕ್ಕೆ ಬಿ ರೆಡಿ ಎನ್ನುವ ಟ್ಯಾಗ್‌ಲೈನ್ ಇದೆ.
 

Follow Us:
Download App:
  • android
  • ios