ಹಿರಿಯ ಚಿತ್ರ ನಿರ್ದೇಶಕ ಸಿ ವಿ ಶಿವಶಂಕರ್‌ ಪುತ್ರ, ಆಮ್ಲೆಟ್‌ ಸಿನಿಮಾ ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ಅವರ ಎರಡು ಹೊಸ ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ.

ಆಹತಾ ಹಾಗೂ ಶ್ರೀರಂಗ ಎಂಬ ಚಿತ್ರಗಳ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್ ಮುಗಿಯುತ್ತಾ ಬಂದಿದ್ದು ಅಕ್ಟೋಬರ್‌ನಲ್ಲಿ ರಿಲೀಸ್‌ಗೆ ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ನೀಡಿದ ವೆಂಕಟ್‌ ಭಾರದ್ವಾಜ್‌, ‘ಆಹತಾ ಕ್ರೈಮ್‌ ಆ್ಯಂಡ್‌ ಆ್ಯಕ್ಷನ್‌ ಸಿನಿಮಾ. ಕಬೀರ್‌ ಸೋಮಯಾಜಿ ಈ ಸಿನಿಮಾದ ಹೀರೋ. ಕೆನಡಾದ ಟೊರೆಂಟೋ ಫಿಲಂ ಸ್ಕೂಲ್‌, ಮುಂಬೈಯ ಅನುಪಮ್‌ ಖೇರ್‌ ಇನ್ಸಿಟಿಟ್ಯೂಟ್‌ನಲ್ಲಿ ನಟನೆಯ ಪಾಠ ಕಲಿತವರು. ಜಿಲ್ಕಾ ಸಿನಿಮಾದ ನಾಯಕಿ ಪ್ರಿಯಾ ಹೆಗ್ಡೆ ಕಬೀರ್‌ಗೆ ನಾಯಕಿಯಾಗಿದ್ದಾರೆ. ದಿನೇಶ್‌ ಮಂಗ್ಳೂರು, ರಮೇಶನ್‌ ಪಂಡಿತ್‌, ಉಗ್ರಂ ಮಂಜು ಮತ್ತಿತರರು ಮುಖ್ಯಪಾತ್ರಗಳಲ್ಲಿದ್ದಾರೆ. ಬಾಂಬೆ ಪ್ರಕಾಶ್‌ ಸಿನಿಮಾದ ನಿರ್ಮಾಪಕರು. ಯುವಕರ ಮನಸ್ಸು ಪರಿಸ್ಥಿತಿಗನುಸಾರವಾಗಿ ಹೇಗೆ ಸ್ಟ್ರಾಂಗ್‌ ಆಗ್ತಾ ಹೋಗುತ್ತೆ ಅನ್ನುವುದರ ಜೊತೆಗೆ ತಾಳ್ಮೆಗೆ ಯಾವಾಗ ಬೆಲೆ ಸಿಗುತ್ತೆ ಅನ್ನುವ ಮೆಸೇಜ್‌ ಈ ಸಿನಿಮಾದಲ್ಲಿದೆ’ ಎನ್ನುತ್ತಾರೆ.

Add Asianetnews Kannada as a Preferred SourcegooglePreferred

ಚಿತ್ರ ವಿಮರ್ಶೆ: ಕಲಿವೀರ

‘ಇನ್ನೊಂದು ಸಿನಿಮಾ ಶ್ರೀರಂಗ ಕಾಮಿಡಿ ಜಾನರ್‌ನದು. ದಿಲೀಪ್‌ ಇದರ ನಿರ್ಮಾಪಕರು. ಶಿನಾವ್‌ ನಾಯಕ, ಮೂವರು ನಾಯಕಿಯರು. ರೂಪಾ, ವಂದನಾ ಶೆಟ್ಟಿಹಾಗೂ ರಚನಾ ರಾಯ್‌ ಸಹ ಕಾಮಿಡಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಒಂದು ಪರಿಸರ ಒಬ್ಬ ಹುಡುಗನ ಮನಸ್ಥಿತಿಯನ್ನು ರೂಪಿಸುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಕಾಮಿಡಿಯಾಗಿ ಹೇಳಲಾಗಿದೆ’ ಎನ್ನುತ್ತಾರೆ ನಿರ್ದೇಶಕರು.

ವೆಂಕಟ್‌ ಭಾರದ್ವಾಜ್‌ ಅವರ ಆಮ್ಲೆಟ್‌ ಚಿತ್ರ ಇತ್ತೀಚೆಗೆ ಕಲರ್ಸ್‌ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಅದಕ್ಕೂ ಮೊದಲು ಪೇಂಟರ್‌ ಸಿನಿಮಾ ರಿಲೀಸ್‌ ಆಗಿತ್ತು. ತಮಿಳಿನಲ್ಲೂ ಚಿತ್ರ ನಿರ್ದೇಶನ ಮಾಡಿದ್ದಾರೆ. ‘ಕೆಂಪಿರುವೆ’ ಚಿತ್ರದ ಇವರ ಸ್ಕ್ರೀನ್‌ ಪ್ಲೇಗೆ ರಾಜ್ಯಪ್ರಶಸ್ತಿ ಬಂದಿತ್ತು.