ಕರಾವಳಿಯಲ್ಲಿ ಕಂಬಳಕ್ಕಿರುವ ಗೌರವ ಯಾವ ಸ್ಟಾರ್‌ ನಟರಿಗೂ ಇಲ್ಲ. ಕಂಬಳದ ಕೋಣಗಳಿಗೆ ದೊಡ್ಡ ಅಭಿಮಾನ ಬಳಗ ಇದೆ. ದಕ್ಷಿಣ ಕನ್ನಡದ ಯಾವುದೋ ಮೂಲೆಯಲ್ಲಿ ನಡೆಯುವ ಕಂಬಳವನ್ನು ದುಬೈಯಲ್ಲಿರುವ ತುಳುನಾಡಿಗರು ನಿದ್ದೆ ಬಿಟ್ಟು ನೋಡುತ್ತಾರೆ.

‘ಕರಾವಳಿಯಲ್ಲಿ ಕಂಬಳಕ್ಕಿರುವ ಗೌರವ ಯಾವ ಸ್ಟಾರ್‌ ನಟರಿಗೂ ಇಲ್ಲ. ಕಂಬಳದ ಕೋಣಗಳಿಗೆ ದೊಡ್ಡ ಅಭಿಮಾನ ಬಳಗ ಇದೆ. ದಕ್ಷಿಣ ಕನ್ನಡದ ಯಾವುದೋ ಮೂಲೆಯಲ್ಲಿ ನಡೆಯುವ ಕಂಬಳವನ್ನು ದುಬೈಯಲ್ಲಿರುವ ತುಳುನಾಡಿಗರು ನಿದ್ದೆ ಬಿಟ್ಟು ನೋಡುತ್ತಾರೆ. ತುಳು ಸಂಸ್ಕೃತಿಯ ಭಾಗವಾದ ಈ ಕಲೆಯನ್ನು ನಮ್ಮ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುತ್ತೇವೆ’ ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ. ಅವರ ನಿರ್ದೇಶನದ ‘ವೀರ ಕಂಬಳ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ತುಳು, ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್‌ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಲಂಡನ್‌, ಅಮೇರಿಕಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿಶ್ವದೆಲ್ಲೆಡೆ ಬಿಡುಗಡೆ ಮಾಡುವುದಾಗಿ ರಾಜೇಂದ್ರ ಸಿಂಗ್‌ ಬಾಬು ತಿಳಿಸಿದ್ದಾರೆ.

ನನಗೆ ತುಳು ಚಿತ್ರದಲ್ಲಿ ಅಭಿನಯಿಸುವ ಆಸೆ ಮುಂಚಿನಿಂದಲೂ ಇತ್ತು. ಏಕೆಂದರೆ ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ದಕ್ಷಿಣ ಕನ್ನಡದವರು. ನಾನು ಚಿತ್ರದಲ್ಲಿ ಅಭಿನಯಿಸುವ ವಿಷಯ ನನಗೆ ಗೊತ್ತಿರಲಿಲ್ಲ. ನಿರ್ಮಾಪಕರು ಈ ರೀತಿ ಪಾತ್ರವಿದೆ. ನೀವು ಮಾಡಬೇಕೆಂದರು. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೊದಲ‌ ದಿನ‌ ಚಿತ್ರೀಕರಣಕ್ಕೆ ಸಿದ್ಧವಾಗಿ ಬಂದಾಗ ಅಲ್ಲಿದ್ದವರೆಲ್ಲ ನನ್ನ ನೋಡಿ ಆಶ್ಚರ್ಯಪಟ್ಟರು. ಚಿತ್ರ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ನಿಮಗೂ ತಿಳಿಯಬಹುದು ಎಂದರು ನಟ ಆದಿತ್ಯ. 

ವೀಲ್‌ಚೇರ್ ರೋಮಿಯೋಗಾಗಿ ಜಾಕ್ ಮಾಮಾನಾದ ರಂಗಾಯಣ ರಘು!

ಎಷ್ಟೋ ಜನಕ್ಕೆ ನಾನು ತುಳುನಾಡಿನವಳೆಂದು ತಿಳಿದಿಲ್ಲ. ನನ್ನ ಮಾತೃ ಭಾಷೆ ಕೂಡ ತುಳು. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ವಂದನೆಗಳು. ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದರು ನಟಿ ರಾಧಿಕಾ ಚೇತನ್. ನಮ್ಮ ಊರಿನಲ್ಲಿ ನಡೆಯುವ ಕಂಬಳಕ್ಕೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಆಹ್ವಾನಿಸಲು ಕಂಬಳದ ಅಧ್ಯಕ್ಷರು ಹೇಳಿದರು. ಬಾಬು ಸರ್ ನಮ್ಮ ಊರಿಗೆ ಬಂದರು. ಅಲ್ಲಿ ಈ ಚಿತ್ರದ ಮಾತುಕತೆಯಾಗಿ, ಚಿತ್ರ ಆರಂಭವಾಯಿತು. ನಾನು ರಾಜೇಂದ್ರ ಸಿಂಗ್ ಬಾಬು ಅವರ ದೊಡ್ಡ ಅಭಿಮಾನಿ. ಅವರು ನಮ್ಮ ಚಿತ್ರ ನಿರ್ದೇಶನ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು ನಿರ್ಮಾಪಕ ಅರುಣ್ ರೈ ತೋಡಾರ್.

‘ಈ ಸಿನಿಮಾಕ್ಕಾಗಿ ನಿರ್ದೇಶಕ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಹಾಗೂ ನಾನು ಎರಡು ವರ್ಷ ಸಂಶೋಧನೆ ಮಾಡಿದ್ದೇವೆ. ನೈಜ ಘಟನೆಗಳನ್ನೇ ಆಧಾರವಾಗಿಟ್ಟು, ತುಳುನಾಡ ಇತಿಹಾಸದ ಹಿನ್ನೆಲೆಯಲ್ಲಿ ಚಿತ್ರ ಮಾಡಿದ್ದೇವೆ. ಬೇರೆ ಸಮಸ್ಯೆ ಆಗಬಾರದು ಎಂದು ಹೆಸರಲ್ಲಿ ಬದಲಾವಣೆ ಮಾಡಿದ್ದೇವೆ. ತುಳುನಾಡ ಉಸೇನ್‌ ಬೋಲ್ಟ್‌ ಎಂದೇ ಜನಪ್ರಿಯವಾಗಿರುವ ಶ್ರೀನಿವಾಸ ಗೌಡ ಹಾಗೂ ಸ್ವರಾಜ್‌ ನಮ್ಮ ಚಿತ್ರದ ನಾಯಕರು’ ಎಂದರು. ಸಂಭಾಷಣೆ ಬರೆದ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ‘ತುಳು ಸಿನಿಮಾ ಹಾಸ್ಯಕ್ಕೆ ಜೋತು ಬಿದ್ದಿದೆ ಎಂಬ ಆಪಾದನೆಯಿಂದ ಹೊರಬರಲು ಕಾಯ್ತಾ ಇದ್ದೆ. ಆ ಹೊತ್ತಿಗೆ ಈ ಸಿನಿಮಾ ಬಂತು’ ಎಂದು ಸಿನಿಮಾ ಜರ್ನಿ ಬಗ್ಗೆ ಹೇಳಿದರು.

Bandhana 2: ಡಿ.10ರಂದು ಮುಹೂರ್ತದಲ್ಲಿ ಸುಹಾಸಿನಿ, ಆದಿತ್ಯ ಭಾಗಿ!

ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್‌ ರೈ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಧಿಕಾ ಚೇತನ್‌ ಪೊಲೀಸ್‌ ಕಮಿಷನರ್‌ ಪಾತ್ರದಲ್ಲಿ ನಟಿಸಿದ್ದಾರೆ. ಆದಿತ್ಯ ಮುತ್ತಪ್ಪ ರೈ ಹೋಲುವ ಪಾತ್ರದಲ್ಲಿದ್ದಾರೆ. ನಿರ್ಮಾಪಕ ಅರುಣ್‌ ರೈ ತೋಡಾರ್‌, ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ, ನಟರಾದ ಶ್ರೀನಿವಾಸ ಗೌಡ, ಸ್ವರಾಜ್‌ ಶೆಟ್ಟಿ, ಆದಿತ್ಯ, ರಾಧಿಕಾ ಚೇತನ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು. ಎ.ಆರ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಅರ್.ಗಿರಿ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಆರ್. ಬಾಬು ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ ಕಿಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರಾಜೇಶ್ ಕುಡ್ಲ ಅವರ ನಿರ್ಮಾಣ ನಿರ್ವಹಣೆ "ವೀರ ಕಂಬಳ" ಚಿತ್ರಕ್ಕಿದೆ.