ಶೀಘ್ರವೇ ಬೆಲ್ಬಾಟಂ 2 ಚಿತ್ರದ ಶೂಟಿಂಗ್ ಶುರು!
ಜಮೀರ್ ಅಹಮದ್ ಪುತ್ರ ಜೈದ್ ಖಾನ್ ನಟಿಸಿರುವ ಬನಾರಸ್ ಚಿತ್ರದ ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ, ಶೂಟಿಂಗ್ಗೆ ಹೋಗಬೇಕಾದ ಚಿತ್ರ, ಬೆಲ್ಬಾಟಂ 2 ಚಿತ್ರಗಳ ಕುರಿತ ಅವರ ಮಾತುಗಳು ಇಲ್ಲಿವೆ.
ಆರ್. ಕೇಶವಮೂರ್ತಿ
ಬನಾರಸ್ ಚಿತ್ರ ಎಲ್ಲಿಯವರೆಗೂ ಬಂದಿದೆ?
ಚಿತ್ರೀಕರಣ ಮುಗಿಸಿದ್ದೇವೆ. ಮುಂದಿನ ವಾರ ಸೆನ್ಸಾರ್ ಆಗಲಿದೆ.
ಈ ಚಿತ್ರದ ಮೂಲಕ ಏನೆಲ್ಲ ಹೇಳಕ್ಕೆ ಹೊರಟಿದ್ದೀರಿ?
ಮಿಸ್ಟ್ರಿ ನೆರಳಿನಲ್ಲಿ ಹೇಳಿರುವ ಅದ್ಭುತವಾದ ಪ್ರೇಮ ಕತೆ. ಇದರ ಜತೆಗೆ ಅಧ್ಯಾತ್ಮ, ಭಯ, ಸಾವು, ಒಂದು ವಿಚಿತ್ರವಾದ ಶಕ್ತಿ, ಮಿಸ್ಟ್ರಿ ಎಲ್ಲವೂ ಇಲ್ಲಿದೆ. ಕಾಶಿ ನೋಡಿದಾಗ ಏನೆಲ್ಲ ಭಾವನೆಗಳು ಹುಟ್ಟುತ್ತವೋ ಅದೆಲ್ಲವನ್ನೂ ಒಳಗೊಂಡ ಒಂದು ಪ್ರೇಮ ಕತೆ ಈ ಚಿತ್ರದಲ್ಲಿದೆ.
ಬಿಗ್ ಬಜೆಟ್ ದಿವಾಕರನಿಗೆ ಚೆಂಡೂವ ಮಾಲೆ;ರಿಷಬ್ ಶೆಟ್ಟಿ ಡಿಟೆಕ್ಟಿವ್ ಕೆಲಸ ಶುರು!
ಚಿತ್ರದ ನಾಯಕ ಜೈದ್ ಖಾನ್ ಅಭಿನಯದ ಬಗ್ಗೆ ಹೇಳುವುದಾದರೆ?
ನಾನು ರಂಗಭೂಮಿಯಿಂದ ಬಂದವನು. ನಿರ್ದೇಶಕನಾಗುವ ಮೊದಲಿನಿಂದಲೂ ಅಭಿನಯ ತರಬೇತಿ ನೀಡಿದವನು. ನಟ ಯಶ್, ನಟಿ ರಾಧಿಕಾ ಪಂಡಿತ್, ನಟ ಪ್ರಜ್ವಲ್ ದೇವರಾಜ್ ಹೀಗೆ ಹಲವರಿಗೆ ನಟನೆಯ ತರಬೇತಿ ನೀಡಿದ್ದೇನೆ. ಅಭಿನಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ಹೀಗಾಗಿ ನನ್ನ ಚಿತ್ರದ ಕಲಾವಿದರು ವೀಕ್ ಆಗಲು ನಾನು ಬಿಡಲ್ಲ. ಜೈದ್ ಖಾನ್, ನಿರ್ದೇಶಕ ಹೇಳಿದಂತೆ ಕೇಳುವ ನಟ. ಪಾತ್ರಕ್ಕೆ ತಾನು ಏನೆಲ್ಲ ಮಾಡಬೇಕೋ ಅದನ್ನು ಆತನೂ ಮಾಡಿದ್ದಾನೆ, ನಿರ್ದೇಶಕನಾಗಿ ಆತನನ್ನು ನಾನು ಯಾವ ರೀತಿ ತಯಾರಿ ಮಾಡಬೇಕೋ ಅದನ್ನು ಮಾಡಿದ್ದೇನೆ. ತೆರೆ ಮೇಲೆ ತುಂಬಾ ಚೆನ್ನಾಗಿ ಕಾಣುತ್ತಾನೆ. ಬನಾರಸ್ ಮೂಲಕ ಕನ್ನಡಕ್ಕೆ ಒಬ್ಬ ಪ್ರತಿಭಾವಂತ ನಟ ಬರುತ್ತಿದ್ದಾನೆ.
ಬನಾರಸ್ ನಂತರ ಮುಂದೆ ಯಾವ ಸಿನಿಮಾ?
ರಿಷಬ್ ಶೆಟ್ಟಿ ನಟನೆಯ ‘ಬೆಲ್ ಬಾಟಂ 2’ ಚಿತ್ರಕ್ಕೆ ಶೂಟಿಂಗ್ ಮಾಡಬೇಕಿದೆ. ಕತೆ, ಚಿತ್ರಕಥೆ ಎಲ್ಲವೂ ಮುಗಿದೆ. ಲೋಕೇಷನ್ ಕೂಡ ನೋಡಿದ್ದು, ಸೆಟ್ ಹಾಕಬೇಕು. ಸದ್ಯದಲ್ಲೇ ಶೂಟಿಂಗ್ಗೆ ಹೋಗಬಹುದು ಅಂದುಕೊಂಡಿದ್ದೇವೆ. ಆದರೆ, ನಮ್ಮ ನಿರ್ಮಾಪಕರು ಏನು ಯೋಚನೆ ಮಾಡುತ್ತಿದ್ದಾರೆ ಗೊತ್ತಿಲ್ಲ.