'ಸಪ್ತ ಸಾಗರದಾಚೆ ಎಲ್ಲೊ' ಚಿತ್ರದ ಮೂಲಕ ದೇಶಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದ ನಿರ್ದೇಶಕ ಹೇಮಂತ್ ರಾವ್ ಸದ್ಯ ಶಿವರಾಜ್‌ಕುಮಾರ್ ಅಭಿನಯದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೊ' ಚಿತ್ರದ ಮೂಲಕ ದೇಶಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದ ನಿರ್ದೇಶಕ ಹೇಮಂತ್ ರಾವ್ ಸದ್ಯ ಶಿವರಾಜ್‌ಕುಮಾರ್ ಅಭಿನಯದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಸಿನಿಮಾಗಿಂತ ಮೊದಲು ಘೋಷಣೆಯಾಗಿದ್ದ 'ಭೈರವನ ಕೊನೆ ಪಾಠ' ಚಿತ್ರ ಏಕಾಏಕಿ ಏಕೆ ಸ್ಥಗಿತವಾಯಿತು ಎಂಬ ಪ್ರಶ್ನೆಗೆ ಇದೀಗ ಅವರೇ ಸ್ಪಷ್ಟನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆಲುಗಿನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹೇಮಂತ್ ರಾವ್, 'ಭೈರವನ ಕೊನೆ ಪಾಠ' 12ನೇ ಶತಮಾನದ ಹಿನ್ನೆಲೆಯಲ್ಲಿನ ಭವ್ಯ ಕಥೆಯಾಗಿತ್ತು ಎಂದು ವಿವರಿಸಿದರು. "ಇದು ಕೇವಲ ಐತಿಹಾಸಿಕ ಸಿನಿಮಾ ಅಲ್ಲ. ಆ ಕಾಲದ ಜನರ ಬದುಕು, ಅವರ ಸಂಕಷ್ಟಗಳು, ಸಾಮಾಜಿಕ ವಾಸ್ತವಗಳನ್ನು ಹೇಳುವ ಕಥೆ. ಶೇಕ್ಸ್‌ಪಿಯರ್ ಶೈಲಿಯ ಭಾವನಾತ್ಮಕ ನಿರೂಪಣೆಯೂ ಇದರಲ್ಲಿ ಇತ್ತು" ಎಂದು ಹೇಳಿದರು.

ಚಿತ್ರದ ಪ್ರೀ-ಪ್ರೊಡಕ್ಷನ್, ಫೋಟೋಶೂಟ್ ಮತ್ತು ರಿಹರ್ಸಲ್ ಸೇರಿದಂತೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡು, ಚಿತ್ರೀಕರಣ ಆರಂಭಿಸುವ ಹಂತಕ್ಕೆ ತಲುಪಿದ್ದಾಗಲೇ ಶಿವರಾಜ್‌ಕುಮಾರ್ ಅವರ ಆರೋಗ್ಯದ ಬಗ್ಗೆ ತಿಳಿಯಿತು ಎಂದು ಅವರು ನೆನಪಿಸಿಕೊಂಡರು. "ಶಿವಣ್ಣ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಬಳಿಕ, ಇಷ್ಟೊಂದು ದೈಹಿಕ ಶ್ರಮ ಬೇಡುವ ಸಿನಿಮಾ ಮಾಡಿಸುವುದು ಸರಿಯಲ್ಲ ಎನ್ನಿಸಿತು. ಅವರನ್ನು ನಾನು ತುಂಬಾ ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಅವರ ಆರೋಗ್ಯಕ್ಕಿಂತ ಸಿನಿಮಾ ದೊಡ್ಡದಲ್ಲ. ಆ ಪರಿಸ್ಥಿತಿಯಲ್ಲಿ ನಾನೇ ಈ ಯೋಜನೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡೆ" ಎಂದು ಹೇಮಂತ್ ರಾವ್ ಹೇಳಿದರು.

ಮನಸ್ಸಿಗೆ ಒಪ್ಪಲಿಲ್ಲ

ಅವರ ಪ್ರಕಾರ, 'ಭೈರವನ ಕೊನೆ ಪಾಠ' ಚಿತ್ರದಲ್ಲಿ ಕುದುರೆ ಸವಾರಿ, ಸಾಹಸ ದೃಶ್ಯಗಳು, ದೀರ್ಘ ಹೊರಾಂಗಣ ಚಿತ್ರೀಕರಣ ಸೇರಿದಂತೆ ಸಾಕಷ್ಟು ಕಠಿಣ ಸನ್ನಿವೇಶಗಳಿದ್ದವು. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಶಿವಣ್ಣ ಅವರಿಂದ ಇವೆಲ್ಲವನ್ನು ಮಾಡಿಸುವುದು ಮನಸ್ಸಿಗೆ ಒಪ್ಪಲಿಲ್ಲ ಎಂದು ಅವರು ತಿಳಿಸಿದರು. ಆದರೆ ಶಿವರಾಜ್‌ಕುಮಾರ್ ಅವರೊಂದಿಗೆ ಸಿನಿಮಾ ಮಾಡುವ ಕನಸನ್ನು ಮಾತ್ರ ಕೈಬಿಡಲಿಲ್ಲ. ಅದೇ ಕಾರಣಕ್ಕೆ ಹೊಸ ಕಥೆಯನ್ನು ರೂಪಿಸಿ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರವನ್ನು ಆರಂಭಿಸಲಾಯಿತು. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಇನ್ನು ಇದೇ ವೇಳೆ, 'ಭೈರವನ ಕೊನೆ ಪಾಠ' ಕಥೆಯನ್ನು ಶಿವರಾಜ್‌ಕುಮಾರ್ ಕೂಡ ಬಹಳ ಮೆಚ್ಚಿಕೊಂಡಿದ್ದು, "ಈ ಸಿನಿಮಾ ಯಾವತ್ತಾದರೂ ಮಾಡಲೇಬೇಕು" ಎಂದು ಹೇಳಿರುವುದಾಗಿ ಹೇಮಂತ್ ರಾವ್ ಬಹಿರಂಗಪಡಿಸಿದ್ದಾರೆ. ಹೀಗಾಗಿ, '666 ಆಪರೇಷನ್ ಡ್ರೀಮ್ ಥಿಯೇಟರ್' ಬಳಿಕ ಆ ಮಹತ್ವಾಕಾಂಕ್ಷೆಯ ಚಿತ್ರವೂ ಖಂಡಿತ ಸಾಕಾರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.