Asianet Suvarna News Asianet Suvarna News

ಸಮ್ಮರ್‌ನಲ್ಲಿ ದೊಡ್ಡ ಚಿತ್ರಗಳ ಸಮರ; ಸ್ಟಾರ್‌ಗಳಿಲ್ಲದ ಮೊದಲ ಮೂರು ತಿಂಗಳು!

ಪಕ್ಕದ ಭಾಷೆಯಲ್ಲಿ ಸ್ಟಾರ್‌ಗಳು ಸದ್ದು ಮಾಡುತ್ತಿದ್ದಾರೆ. ಯಾವುದನ್ನೂ ಲೆಕ್ಕಿಸದೆ ಥಿಯೇಟರ್‌ಗಳಿಗೆ ಬಂದ ಅಭಿಮಾನಿಗಳಿಗೆ ಜಾತ್ರೆ ಆಯೋಜಿಸಿದ್ದಾರೆ. ಆದರೆ, ಕನ್ನಡದಲ್ಲಿ ಯಾವ ಸ್ಟಾರ್‌ ನಟನೂ ಚಿತ್ರಮಂದಿರದತ್ತ ಮುಖ ಮಾಡಿಲ್ಲ. ಜನವರಿ ತಿಂಗಳಿಂದಲೇ ಹೀಗೆ ಸ್ಟಾರ್‌ ನಟರ ಶೂನ್ಯ ಗಾಂಧಿನಗರವನ್ನು ಕಾಡಲಾರಂಭಿಸಿದೆ. ಇದಕ್ಕೆ ಪರಿಹಾರ ಯಾವಾಗ?

Darshan Yash Sudeep films to hit screen back to back
Author
Bangalore, First Published Jan 31, 2020, 3:11 PM IST

ಕೇಶವ

ಅಭಿಮಾನಿಗಳೇ ಹಾಗೂ ಪ್ರೇಕ್ಷಕರೇ ಗಮನಿಸಿ, ನಿಮ್ಮ ನೆಚ್ಚಿನ ಸ್ಟಾರ್‌ ಹೀರೋಗಳು ಇನ್ನೂ ಮೂರು ತಿಂಗಳು ವ್ಯಾಪ್ತಿ ಪ್ರದೇಶದ ಹೊರಗೆ ಇರಲಿದ್ದಾರೆ!

-ಹೀಗೊಂದು ಸಂದೇಶ ಹೊಸ ವರ್ಷದ ಮೊದಲ ತಿಂಗಳಲ್ಲೇ ಹೀರೋಗಳು ಕೊಟ್ಟಿದ್ದಾರೆ. ಹೀಗಾಗಿ ಕನ್ನಡ ಹೀರೋಗಳ ಹೊರತಾಗಿ ಬೇರೆ ಭಾಷೆಯ ಹೀರೋಗಳ ಚಿತ್ರಗಳು 2020ರ ಹೊಸ ವರ್ಷವನ್ನು ಅದ್ಭುತವಾಗಿ ಸಂಭ್ರಮಿಸುತ್ತಿವೆ. ತಮಿಳುನವರಿಗೆ ರಜನಿಕಾಂತ್‌ ‘ದರ್ಬಾರ್‌’, ತೆಲುಗಿನವರಿಗೆ ಅಲ್ಲೂ ಅರ್ಜುನ್‌ ‘ಅಲಾ... ವೈಕುಂಠಪುರಂ’ ಹಾಗೂ ಮಹೇಶ್‌ ಬಾಬು ‘ಸರಿಲೇರು ನಿಕ್ಕೇವ್ವರು’, ಹಿಂದಿಗೆ ಅಜಯ್‌ ದೇವಗಾನ್‌ ‘ತಾನಾಜಿ’ ಹಾಗೂ ದೀಪಿಕಾ ಪಡುಕೋಣೆ ‘ಛಪಾಕ್‌’ ಹೀಗೆ ಆಯಾ ಭಾಷಿಗರಿಗೆ ಸ್ಟಾರ್‌ಗಳು ತಮ್ಮ ಚಿತ್ರಗಳ ಮೂಲಕ ದರ್ಶನ ಕೊಡುತ್ತಿದ್ದಾರೆ. ಆದರೆ, ಕನ್ನಡದವರಿಗೆ ಮಾತ್ರ ಹೊಸ ವರ್ಷ ಅಥವಾ ಸಂಕ್ರಾಂತಿ ಸಂಭ್ರಮ ಇಲ್ಲ. ಕಳೆದ ವರ್ಷ ಕೊನೆಯ ತಿಂಗಳಲ್ಲಿ ಬಂದ ‘ಅವನೇ ಶ್ರೀಮನ್ನಾರಾಯಣ’ನ ಅವತಾರಿ ರಕ್ಷಿತ್‌ ಶೆಟ್ಟಿಅವರೇ ಗತಿ!

ಏ.9ಕ್ಕೆ ರಾಬರ್ಟ್‌, ಏ.10ರಂದು ಕೋಟಿಗೊಬ್ಬ : ಅಭಿಮಾನಿಗಳಿಗೆ ದೊಡ್ಡ ಹಬ್ಬ!

ಹಾಗೆ ನೋಡಿದರೆ ಕನ್ನಡ ಸಿನಿಮಾಗಳೂ ಕೂಡ ಸದ್ದು ಮಾಡುತ್ತಿವೆ. ಚಿತ್ರಮಂದಿರದಲ್ಲಿ ಅಲ್ಲ. ಯೂಟ್ಯೂಬ್‌ ಹಾಗೂ ಸೋಷಿಯಲ್‌ ಮೀಡಿಗಳಲ್ಲಿ. ಹೌದು, ಟೀಸರ್‌, ಫಸ್ಟ್‌ಲುಕ್‌ಗೆ ಸೀಮಿತ. ಅಂದರೆ ಪಕ್ಕದ ಭಾಷೆಗಳಲ್ಲಿ ದೊಡ್ಡ ಬಜೆಟ್‌ನ ಸ್ಟಾರ್‌ ಚಿತ್ರಗಳು ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದ್ದರೆ, ಕನ್ನಡದಲ್ಲಿ ಫಸ್ಟ್‌ ಲುಕ್‌, ಮೋಷನ್‌ ಪೋಸ್ಟರ್‌ ಹಾಗೂ ಟೀಸರ್‌- ಟ್ರೇಲರ್‌ಗಳಲ್ಲಿ ಖುಷಿ ಕಾಣುವಂತಾಗಿದೆ. ಹೆಚ್ಚು ಕಮ್ಮಿ 10ಕ್ಕೂ ಹೆಚ್ಚು ಚಿತ್ರಗಳು ಫಸ್ಟ್‌ ಲುಕ್‌, ಟೀಸರ್‌ಗಳನ್ನು ಬಿಡುಗಡೆಗೆ ಸೀಮಿತಗೊಂಡಿವೆ. ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳ ಪಟ್ಟಿಯಲ್ಲಿ ಕನಿಷ್ಟ15ಕ್ಕೂ ಹೆಚ್ಚು ಚಿತ್ರಗಳಿದ್ದವು. ಹೀಗೆ ನಿರೀಕ್ಷೆ ಹುಟ್ಟು ಹಾಕಿದ ಚಿತ್ರಗಳು ಥಿಯೇಟರ್‌ಗೆ ಬರುವ ಧೈರ್ಯ ಮಾಡುತ್ತಿಲ್ಲ. ಹಾಗಾದರೆ ನಮ್ಮ ಹೀರೋಗಳ ಸಿನಿಮಾಗಳಿಗೆ ದರ್ಶನ ಭಾಗ್ಯ ಯಾವಾಗ?

ಮ್ಯೂಸಿಯಂ ಥರಾ ಇದೆ ಸುದೀಪ್‌ ಅವರ ಕಿಚನ್‌!

ಸದ್ಯ ಕನ್ನಡ ಚಿತ್ರರಂಗದ ಪಕ್ಕಾ ಮಾಹಿತಿ ಪ್ರಕಾರ ಹೆಚ್ಚು ಕಮ್ಮಿ ಮಾಚ್‌ರ್‍ ತಿಂಗಳುವರೆಗೂ ಸ್ಟಾರ್‌ಗಳ ಅಥವಾ ನಿರೀಕ್ಷೆಯ ಪಟ್ಟಿಯಲ್ಲಿರುವ ಯಾವ ಚಿತ್ರವೂ ಚಿತ್ರಮಂದಿರಕ್ಕೆ ಬರಲ್ಲ. ಅಚ್ಚರಿ ಆದರೂ ನಿಜ. ಜನವರಿ ತಿಂಗಳಿಂದ ಶುರುವಾಗಿ ಫೆಬ್ರವರಿ, ಮಾಚ್‌ರ್‍ವರೆಗೂ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಾದು. ಅಲ್ಲಿವರೆಗೂ ಹೊಸಬರು ಅಥವಾ ಚಿತ್ರಮಂದಿರ ಸಿಕ್ಕರೆ ಸಾಕು ಎಂದು ಕಾಯುತ್ತಿರುವ ಸಿನಿಮಾಗಳಿಗೆ ಈ ಗ್ಯಾಪ್‌ನಲ್ಲಿ ಥಿಯೇಟರ್‌ ಭಾಗ್ಯ ದೊರೆಯಲಿದೆ. ಕನ್ನಡದಲ್ಲಿರುವ ಏಳೆಂಟು ಸ್ಟಾರ್‌ ನಟರ ಪೈಕಿ ಕೆಲವರ ಚಿತ್ರಗಳು ಇನ್ನೂ ಸೆಟ್‌ಗೆ ಹೋಗಿಲ್ಲ. ಹೋಗಿರುವ ಚಿತ್ರಗಳು ಶೂಟಿಂಗ್‌ ಮುಗಿಸಿಲ್ಲ. ಯಶ್‌ ನಟನೆಯ ‘ಕೆಜಿಎಫ್‌ 2’, ಪುನೀತ್‌ ರಾಜ್‌ಕುಮಾರ್‌ ‘ಯವರತ್ನ’, ಶ್ರೀಮುರಳಿ ‘ಮದಗಜ’, ಉಪೇಂದ್ರ ಅವರ ‘ಕಬ್ಜ’ ಹೀಗೆ ಹಲವು ಚಿತ್ರಗಳು ಇನ್ನೂ ಚಿತ್ರೀಕರಣದ ಮೈದಾನದಲ್ಲಿವೆ. ಹೀಗಾಗಿ ಹೊಸ ವರ್ಷ ಅಥವಾ ಸಂಕ್ರಾಂತಿ ಹಬ್ಬವನ್ನು ರಂಗೇರಿಸಬಹುದಾಗಿದ್ದ ನಿರೀಕ್ಷಿತ ಚಿತ್ರಗಳ ಪೈಕಿ ರಾಬರ್ಟ್‌ , ಕೆಜಿಎಫ್‌, ಯುವರತ್ನ, ಕೋಟಿಗೊಬ್ಬ 3, ಪೊಗರು, ಭಜರಂಗಿ 2, ಬುದ್ಧಿವಂತ 2, 777 ಚಾರ್ಲಿ, ಪಾಪ್‌ ಕಾರ್ನ್‌ ಮಂಕಿ ಟೈಗರ್‌, ಗಾಳಿಪಟ 2 ಹೀಗೆ ಯಾವ ಚಿತ್ರವೂ ಮಾಚ್‌ರ್‍ ತಿಂಗಳ ವರೆಗೂ ಬರಲ್ಲ.

ಯಾಕೆ ಈ ಗ್ಯಾಪು? ಹಿಂದಿ, ತೆಲುಗು ಮತ್ತು ತಮಿಳಿನವರಂತೂ ಎರಡ್ಮೂರು ಚಿತ್ರಗಳನ್ನು ಬಿಡುಗಡೆ ಮಾಡಿಕೊಂಡು ಸಂಕ್ರಾಂತಿ ಹಬ್ಬವನ್ನು ರಂಗೇರಿಸುತ್ತಿದ್ದರೆ, ಕನ್ನಡದ ಸ್ಟಾರ್‌ಗಳು ಮಾತ್ರ ಯಾಕೆ ನಾಪತ್ತೆಯಾಗಿದ್ದಾರೆ ಎಂಬುದಕ್ಕೆ ಮತ್ತೆ ಅದೇ ಹಳೆಯ ಕಾಲದ ಸಮಸ್ಯೆ. ಪ್ರತಿ ವರ್ಷವೂ ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಬೇರೆ ಭಾಷೆಯ ಚಿತ್ರಗಳು ತಯಾರಾಗುತ್ತವೆ. ಪರಭಾಷೆ ಚಿತ್ರಗಳಿಗೆ ರಾಜ್ಯದಲ್ಲಿ ರಾಜ ಮರ್ಯಾದೆ ಕೊಡುತ್ತಾರೆ. ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳಲ್ಲಿ ಇವರೇ ತುಂಬಿಕೊಳ್ಳುತ್ತಾರೆ. ಹೀಗಾಗಿ ಇವರೊಂದಿಗೆ ಜಿದ್ದಿಗೆ ಬಿದ್ದು ಥಿಯೇಟರ್‌ಗಳಿಗಾಗಿ ಒದ್ದಾಡುವುದು ಯಾಕೆ ಎನ್ನುವ ಭಾವನೆ.

ಅಲ್ಲದೆ ಈ ವರ್ಷ ಯಾರಿಗೂ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗದಿರುವುದು ಎಲ್ಲರೂ ದೊಡ್ಡ ಸ್ಕೇಲ್‌ ಸಿನಿಮಾ ಶುರು ಮಾಡಿರುವುದು. ದೊಡ್ಡ ಬಜೆಟ್‌ನ ಚಿತ್ರಗಳು ಶೂಟಿಂಗ್‌ ಅನ್ನೇ ಲಾಂಗ್‌ ಮಾಚ್‌ರ್‍ ರೀತಿ ಮಾಡುತ್ತಿವೆ. ಜನವರಿ ತಿಂಗಳು ಪರಭಾಷೆ ಚಿತ್ರಗಳು ಆವರಿಸಿಕೊಳ್ಳುತ್ತವೆ, ಫೆಬ್ರವರಿ ಹಾಗೂ ಮಾಚ್‌ರ್‍ ತಿಂಗಳು ಪರೀಕ್ಷೆ ಜತೆಗೆ ಕ್ರಿಕೆಟ್‌ ಅಬ್ಬರ. ಈ ಎಲ್ಲವನ್ನೂ ಲೆಕ್ಕಾಚಾರ ಮಾಡಿಕೊಂಡೇ ಜನವರಿ, ಫೆಬ್ರವರಿ ಹಾಗೂ ಮಾಚ್‌ರ್‍ ತಿಂಗಳಲ್ಲಿ ದೊಡ್ಡ ಸಿನಿಮಾಗಳು ಥಿಯೇಟರ್‌ಗಳ ಕಡೆ ಮುಖ ಮಾಡದಿರಲು ನಿರ್ಧರಿಸಿವೆ ಎಂಬುದು ನಿರ್ಮಾಪಕರೊಬ್ಬರ ಮಾತು.

‘ಕಿರಿಕ್ ಪಾರ್ಟಿ’ಯಿಂದ ಪಾಠ ಕಲಿತ ರಕ್ಷಿತ್!

ಹೀಗೆ ಮೂರು ತಿಂಗಳು ಚಿತ್ರಮಂದಿರದಿಂದ ದೂರವೇ ಇರುವ ಈ ಸಿನಿಮಾಗಳು ಸಮ್ಮರ್‌ನಲ್ಲಿ ಸಮರಕ್ಕೆ ನಿಂತಿವೆ. ಹೌದು, ಮಾಚ್‌ರ್‍ ನಂತರ 2020ನೇ ವರ್ಷದ ಬಹುತೇಕ ನಿರೀಕ್ಷಿತ ದೊಡ್ಡ ಚಿತ್ರಗಳು ಎರಡೆರಡು ವಾರಗಳ ಗ್ಯಾಪ್‌ನಲ್ಲಿ ಚಿತ್ರಮಂದಿರ ತುಂಬಿಕೊಳ್ಳುವುದು ಪಕ್ಕಾ ಆಗಿದೆ. ದರ್ಶನ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಧ್ರುವ ಸರ್ಜಾ, ಜಗ್ಗೇಶ್‌, ಉಪೇಂದ್ರ, ಯಶ್‌... ಹೀಗೆ ಸಾಲು ಸಾಲು ಸ್ಟಾರ್‌ಗಳು ಚಿತ್ರಮಂದಿರಕ್ಕೆ ನುಗ್ಗಲಿದ್ದಾರೆ. ಏಪ್ರಿಲ್‌ ತಿಂಗಳಲ್ಲೇ ರಾಬರ್ಟ್‌, ಕೋಟಿಗೊಬ್ಬ-3 ಹಾಗೂ ಯವರತ್ನ ಚಿತ್ರಗಳು ಲಗ್ಗೆ ಹಾಕುವ ಸಾಧ್ಯತೆಗಳು ಇವೆ. ಸ್ಯಾಂಡಲ್‌ವುಡ್‌ನಲ್ಲಿ ಏಪ್ರಿಲ್‌ನಿಂದ ಸ್ಟಾರ್‌ಗಳ ಜಾತ್ರೆ ಶುರುವಾಗಲಿದೆ. ಬಹುತೇಕ ಚಿತ್ರಗಳು ಬೇಸಿಗೆ ರಜಾ ದಿನಗಳನ್ನುಗುರಿಯಾಗಿಟ್ಟುಕೊಂಡಿದ್ದು, ಆ ಮೂಲಕ ಸಮ್ಮರ್‌ನಲ್ಲಿ ಸ್ಟಾರ್‌ಗಳು ಸಮರ ಹೂಡಲಿದ್ದಾರೆ. ಅಭಿಮಾನಿಗಳು ಜಾತ್ರೆ ಮಾಡಲಿದ್ದಾರೆ.

Follow Us:
Download App:
  • android
  • ios