ಅಕ್ಟೋಬರ್ನಿಂದ ರಾಜವೀರ ಮದಕರಿನಾಯಕ ಶೂಟಿಂಗ್ ಶುರು
ದರ್ಶನ್ ಅಭಿನಯದ ಬಹು ನಿರೀಕ್ಷೆಯ ‘ರಾಜವೀರ ಮದಕರಿನಾಯಕ’ ಚಿತ್ರಕ್ಕೆ ಕೊನೆಗೂ ಚಿತ್ರೀಕರಣಕ್ಕೆ ಮುಹೂರ್ತ ಪಕ್ಕಾ ಮಾಡಿಕೊಂಡಿದ್ದಾರೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು. ಅಕ್ಟೋಬರ್ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.
ಈಗಾಗಲೇ ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡಿದ್ದು, ಒಂದು ಶೆಡ್ಯೂಲ್ ಮುಗಿದೆ ಎಂಬುದು ನಿರ್ಮಾಪಕರು ಕೊಡುವ ವಿವರಣೆ. ಆದರೆ, ಕೊರೋನಾ, ಲಾಕ್ಡೌನ್ ಕಾರಣಕ್ಕೆ ಸ್ಥಗಿತವಾಗಿದ್ದ ಶೂಟಿಂಗ್ ಕೆಲಸಕ್ಕೆ ಮತ್ತೆ ಚಾಲನೆ ನೀಡುವ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿ, ಸಾಹಿತಿ ಬಿ ಎಲ್ ವೇಣು ಅವರು ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ನಾಯಕಿ ಸೇರಿದಂತೆ ಸಾಕಷ್ಟುಪಾತ್ರಧಾರಿಗಳ ಆಯ್ಕೆ ಆಗಬೇಕಿದೆ. ಈ ನಡುವೆ ಚಿತ್ರಕ್ಕೆ ಮುಹೂರ್ತ ಮಾಡಿಕೊಂಡು ಶೂಟಿಂಗ್ ಆರಂಭಿಸಿದ ಚಿತ್ರತಂಡಕ್ಕೆ ಕೊರೋನಾ ಅಡ್ಡ ಬಂದ ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳುಗಳಿಂದ ಶೂಟಿಂಗ್ ಮಾಡದೆ ನಿಲ್ಲಿಸಲಾಗಿದೆ. ಆದರೆ, ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ಹೊರಡಲಿದೆ ದರ್ಶನ್ ಸಿನಿಮಾ ಎಂಬುದು ಹೊಸ ಸುದ್ದಿ.
ಈ ವರ್ಷ ಅತಿ ಹೆಚ್ಚು ಜಾಹೀರಾತಿನಲ್ಲಿ ಕಾಣಿಸಿಕೊಂಡ ಕನ್ನಡದ ನಟ ಯಾರು?
‘ಸದ್ಯದ ಪರಿಸ್ಥಿತಿಯಲ್ಲಿ ಹೊರ ರಾಜ್ಯಗಳಲ್ಲಿ ಹೋಗಿ ಚಿತ್ರೀಕರಣ ಮಾಡಲಾಗದು. ಹೀಗಾಗಿ ಮತ್ತೆ ರಾಜಸ್ಥಾನಕ್ಕೆ ಹೋಗಿ ಶೂಟಿಂಗ್ ಮಾಡುವ ಯೋಚನೆ ಇಲ್ಲ. ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ ಮುಂತಾದ ಕಡೆ ಚಿತ್ರೀಕರಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಅಕ್ಟೋಬರ್ನಿಂದ ಶೂಟಿಂಗ್ ಮಾಡಬೇಕು ಎಂಬುದು ನಮ್ಮ ಯೋಜನೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್.