ಗುರು ದೇಶಪಾಂಡೆ ನನ್ನ ಫ್ರೆಂಡ್‌ ಅಲ್ಲ. ಅಂಥವ್ರನ್ನು ಫ್ರೆಂಡ್‌ ಅಂದರೆ ನನ್ನನ್ನು ಮನೆಯೊಳಗೆ ಸೇರಿಸ್ತಾರ.. ನಾನು ಇಲ್ಲೀತನಕ ಹೇಗೆ ಬೆಳೆದೆ, ಅವರು ಹೇಗೆ ಬೆಳೆದರು ಅನ್ನೋದು ಇಂಡಸ್ಟ್ರಿಯಲ್ಲಿರುವವರಿಗೆ ಗೊತ್ತಿದೆ.

‘ನನ್ನ ತಂದೆ ಎಸಿಪಿ. ಎಷ್ಟು ಸ್ಟ್ರಿಕ್ಟ್‌ ಆಗಿ ಬೆಳೆಸಿದ್ದಾರೆ ಅಂದರೆ ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಸೋಕೆ ನನಗೆ ಧೈರ್ಯ ಇಲ್ಲ. ಇನ್ನು ಕತೆ ಕದೀತೀನಾ ಸರ್‌. ನನ್ನ ಮೇಲೆ ಮಾಡಿರುವ ಆರೋಪಕ್ಕೆ ಬಹಳ ನೋವಾಗಿದೆ, ಎರಡು ದಿನದಿಂದ ನಿದ್ದೆ ಮಾಡಿಲ್ಲ.’

- ಹೀಗೆ ನೋವು ತೋಡಿಕೊಂಡದ್ದು ಡಾರ್ಲಿಂಗ್‌ ಕೃಷ್ಣ. ‘ಮಾರಿಗೋಲ್ಡ್‌’ ನಿರ್ದೇಶಕ ರಾಘವೇಂದ್ರ ನಾಯಕ್‌ ಮಾಡಿದ್ದ ಕೃತಿಚೌರ್ಯದ ಆರೋಪಕ್ಕೆ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ ಕೃಷ್ಣ, ‘2011ರಲ್ಲಿ ಲಕ್ನೋದಲ್ಲಿ ನಡೆದ ಸೆನ್ಸೇಷನಲ್ ಕೇಸ್‌ ಒಂದನ್ನು ವರ್ಷಗಳ ಕೆಳಗೆ ರಾಘವೇಂದ್ರ ನಾಯಕ್‌ ವಿವರಿಸಿದ್ದರು. ಈಗಲೂ ಗೂಗಲ್‌ ಸರ್ಚ್‌ ಮಾಡಿದರೆ ಅವರು ಹೇಳುತ್ತಿರುವ ಕಥೆ ಸಿಗುತ್ತದೆ.

ಗೂಗಲ್‌ನಲ್ಲಿ ಸಿಗೋ ಈ ಕತೆಗೆ ಅವರು ಮುಂಗಡ ತಗೊಂಡಿದ್ದಾರ. ಗೂಗಲ್‌ನಿಂದ ಕದ್ದ ಕಥೆಯನ್ನೇ ತನ್ನದು ಅಂತ ಹೇಳಿ ಇಷ್ಟು ಆರೋಪ ಮಾಡ್ತಿದ್ದಾರಲ್ಲ, ಅವರ ಸ್ಕ್ರಿಪ್ಟ್‌ ತಂದು ತೋರಿಸಲಿ, ಅದರಲ್ಲಿರುವ ಯಾವ ಸೀನ್‌, ಡೈಲಾಗ್‌ ನಮ್ಮ ಸಿನಿಮಾದಂತಿದೆ ಅಂತ ಸಾಬೀತು ಮಾಡಲಿ’ ಎಂದಿದ್ದಾರೆ.

ಕಂಪ್ಲೇಂಟ್‌ ಕೊಟ್ಟಿದ್ದೇನೆ

‘ಗುರು ದೇಶಪಾಂಡೆ ನನ್ನ ಫ್ರೆಂಡ್‌ ಅಲ್ಲ. ಅಂಥವ್ರನ್ನು ಫ್ರೆಂಡ್‌ ಅಂದರೆ ನನ್ನನ್ನು ಮನೆಯೊಳಗೆ ಸೇರಿಸ್ತಾರ.. ನಾನು ಇಲ್ಲೀತನಕ ಹೇಗೆ ಬೆಳೆದೆ, ಅವರು ಹೇಗೆ ಬೆಳೆದರು ಅನ್ನೋದು ಇಂಡಸ್ಟ್ರಿಯಲ್ಲಿರುವವರಿಗೆ ಗೊತ್ತಿದೆ. ಫಿಲಂ ಚೇಂಬರ್‌ಗೆ ನಾನೂ ಕಂಪ್ಲೇಂಟ್‌ ಕೊಟ್ಟಿದ್ದೇನೆ. ಕಾನೂನು ಹೋರಾಟ ನಡೆಸಿಯೇ ತೀರುತ್ತೇನೆ. ಕಾಂಪ್ರಮೈಸ್‌ ಮಾಡಿದ್ರೆ ಹೋದ ನನ್ನ ಮರ್ಯಾದೆ ವಾಪಾಸ್‌ ಬರುತ್ತಾ..’ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.