ಒಂದು ಸಿನಿಮಾದಿಂದ ಸಿಗುವುದೇ ಅಂತಿಮ ಅನುಭವ ಅಲ್ಲ. ನನ್ನ ತಂದೆ ಪ್ರಭಾಕರ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ನಿರ್ಮಾಣ ಹಾಗೂ ನಿರ್ದೇಶನ ಕೂಡ ಮಾಡಿದವರು ಎಂದರು ವಿನೋದ್ ಪ್ರಭಾಕರ್.
‘ನಮ್ಮ ಈ ಬಲರಾಮನ ದಿನಗಳು ಸಿನಿಮಾ ಈ ಹಿಂದೆ ಬಂದ ನನ್ನ ನಟನೆಯ ಮಾದೇವ ಚಿತ್ರಕ್ಕಿಂತಲೂ ಎರಡು ಪಟ್ಟು ದೊಡ್ಡದಾಗಿ ಗೆಲ್ಲುವ ಭರವಸೆ ಇದೆ’ ಎಂದು ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ‘ಬಲರಾಮನ ದಿನಗಳು’ ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿನೋದ್, ‘ಒಂದು ಸಿನಿಮಾದಿಂದ ಸಿಗುವುದೇ ಅಂತಿಮ ಅನುಭವ ಅಲ್ಲ. ನನ್ನ ತಂದೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ನಿರ್ಮಾಣ ಹಾಗೂ ನಿರ್ದೇಶನ ಕೂಡ ಮಾಡಿದವರು. ಆದರೂ ಅವರಿಗೆ ಸಿನಿಮಾ ಏನಂತ ಅರ್ಥವಾಗಿಲ್ಲ ಅಂತ ಹೇಳಿಕೊಳ್ಳುತ್ತಿದ್ದರು. ಒಂದು ಸಿನಿಮಾಗೇ ಎಲ್ಲವನ್ನೂ ಕಲಿಯಲಾಗದು. ಹೀಗಾಗಿ ನಾವೆಲ್ಲ ಸಿನಿಮಾ ವಿದ್ಯಾರ್ಥಿಗಳು’ ಎಂದರು.
ನಟ ರಮೇಶ್ ಇಂದಿರಾ ಅವರು ನಿರ್ದೇಶಕ ಕೆ ಎಂ ಚೈತನ್ಯ ಅವರನ್ನು 'ಸ್ವೀಟ್' ಎಂದು ಕರೆಯುತ್ತಾರೆ. ತಾವು ಚಿತ್ರದಲ್ಲಿ ಮೋನಪ್ಪ ರೈ ಎನ್ನುವ ಪಾತ್ರ ಮಾಡಿದ್ದು, 'ತುಳು ಮಾತನಾಡಿದ್ದೇನೆ' ಎಂದರು. 'ಬಿಗ್ ಬಾಸ್' ಮೂಲಕ ಖ್ಯಾತಿ ಪಡೆದ ನಟ ವಿನಯ್ ಗೌಡ ಅವರದ್ದು ಚಿತ್ರದಲ್ಲಿ 'ಕತ್ತಿ' ಹೆಸರಿನ ರೌಡಿಯ ಪಾತ್ರ. ಮತ್ತೋರ್ವ 'ಬಿಗ್ ಬಾಸ್' ಸ್ಪರ್ಧಿ ರಜತ್ ಕೂಡ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಚಿಕ್ಕ ಪಾತ್ರವಾದರೂ ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದಾರೆ ನಟ ಡ್ರ್ಯಾಗನ್ ಮಂಜು.
80ರ ದಶಕದ ಕತೆ
ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರವನ್ನು ಪದ್ಮಾವತಿ ನಿರ್ಮಿಸಿದ್ದಾರೆ. ಪ್ರಿಯಾ ಆನಂದ್ ಚಿತ್ರದ ನಾಯಕಿ. ಆಶಿಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಪ್ರತಾಪ್ ನಾರಾಯಣ, ಅಶ್ವಿನ್ ಹಾಸನ್, ವಿನಯ್ ಗೌಡ, ರಜತ್ ನಟಿಸಿದ್ದಾರೆ. ‘80ರ ದಶಕದ ಕತೆಯನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಎಲ್ಲಾ ವರ್ಗದ ಜನರಿಗೆ ಈ ಸಿನಿಮಾ ಇಷ್ಟವಾಗುತ್ತದೆ’ ಎಂದರು ಕೆ.ಎಂ.ಚೈತನ್ಯ.


