ಡಾ.ರಾಜ್ಕುಮಾರ್ ಅವರಿಗೆ ಮುತ್ತು ಕೊಡುತ್ತಿರುವ ಈ ಪುಟ್ಟ ಬಾಲೆ ಯಾರು ಗೊತ್ತೆ?
ಈ ಚಿತ್ರದಲ್ಲಿ ಡಾ.ರಾಜ್ಕುಮಾರ್ ಅವರ ಕೆನ್ನೆಗೆ ಹೂಮುತ್ತನ್ನು ಕೊಡುತ್ತಿರುವ ಬಾಲನಟಿ ಯಾರೆಂದು ನೀವು ಸುಲಭವಾಗಿ ಊಹಿಸಬಹುದು. ಈಗ ಆಕೆ ಬಾಲನಟಿಯಲ್ಲ, ಹೀರೋಯಿನ್.
ಸಿಹಿಮುತ್ತು ಸಿಹಿಮುತ್ತು ಇನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು, ಕಂದಾ ಕೊಡುವೆಯಾ?' ಎಂದು ಡಾ.ರಾಜ್ಕುಮಾರ್ ಅವರು ಹೇಳುವಂತೆ ಕಾಣುತ್ತಿರುವ ಈ ಚಿತ್ರವನ್ನು ಹಂಚಿಕೊಂಡಿರುವವರು ನಟಿ ಶಾಮಿಲಿ. ಹಾಗೆ ಹೇಳಿದರೆ ನಿಮಗೆ ಗೊತ್ತಾಗದಿದ್ದರೆ, ಬೇಬಿ ಶಾಮಿಲಿ ಎಂದು ನೆನಪಿಸಿಕೊಳ್ಳಿ.
ತಮ್ಮ ಸಂಗ್ರಹದಲ್ಲಿದ್ದ ಈ ಫೋಟೋವನ್ನು ಅವರು ಇನ್ಸ್ಟಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. 'ಇಂಡಿಯನ್ ಸಿನೆಮಾದ ಗ್ರೇಟೆಸ್ಟ್ ಆಕ್ಟರ್ಗಳಲ್ಲಿ ಒಬ್ಬರಾದ ಡಾ.ರಾಜ್ಕುಮಾರ್ ಅವರ ಜೊತೆಗೆ' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇದಕ್ಕೆ ಬಂದ ಕಮೆಂಟ್ಗಳಲ್ಲಿ ಕೆಲವರು ಅಣ್ಣಾವ್ರನ್ನೂ, ಕೆಲವರು ಶಾಮಿಲಿಯ ನಟನೆಯನ್ನೂ ನೆನಪಿಸಿಕೊಂಡಿದ್ದಾರೆ.
ಸಿನಿರಸಿಕರಲ್ಲಿ ಬೇಬಿ ಶಾಮಿಲಿಯನ್ನು ನೆನಪಿಸಿಕೊಳ್ಳದವರೇ ಇರಲಿಕ್ಕಿಲ್ಲ. ಕನ್ನಡ, ಮಲಯಾಳಂ, ತಮಿಳು, ತೆಲುಗು ಫಿಲಂಗಳಲ್ಲಿ ಒಂದು ಕಾಲದಲ್ಲಿ ಈಕೆ ಬಲು ಬೇಡಿಕೆಯ ಬಾಲನಟಿ. ಬಾಲು ಮತ್ತು ಅಲೈಸ್ ಎಂಬ ದಂಪತಿಗೆ 1987ರಲ್ಲಿ ಜನಿಸಿದ ಈಕೆ ಮೂರು ವರ್ಷದ ಹೊತ್ತಿಗೆ ಬಾಲನಟಿಯಾಗಿ ತಯಾರಾಗಿದ್ದಳು. ಅದಕ್ಕೆ ಕಾರಣ ಆಕೆಯ ತಂದೆಗೆ ಇದ್ದ ನಟನೆಯ ಹುಚ್ಚು. ಅವರೂ ನಟನಾಗಲೆಂದೇ ಮದ್ರಾಸಿಗೆ ಬಂದವರು. ಆದರೆ ಸಕ್ಸಸ್ ಆಗಲಿಲ್ಲ. ಅವರು ತಮ್ಮ ನಟನೆಯ ಗೀಳನ್ನು ಮಕ್ಕಳ ಮೂಲಕ ತೀರಿಸಿಕೊಂಡರು. ಶಾಮಿಲಿಯ ಅಕ್ಕ ಶಾಲಿನಿ ಕೂಡ ಬಾಲನಟಿ.
'ದ್ವಿತ್ವ' ಪೋಸ್ಟರ್ ವಿವಾದ; ನಕಲು ಮಾಡಿ ಜನಪ್ರಿಯತೆ ಪಡೆದರೇ? ...
1990ರಲ್ಲಿ ಈಕೆ ಮಣಿರತ್ನಂ ನಿರ್ದೇಶನದ 'ಅಂಜಲಿ' ತಮಿಳು ಫಿಲಂನಲ್ಲಿ ಕೊಂಚ ಮಾನಸಿಕ ಬೆಳವಣಿಗೆ ಕಡಿಮೆ ಇರುವ ಮಗುವಾಗಿ ನಟಿಸಿದಳು. ಆ ಕಾಲದಲ್ಲಿ ಈಕೆಗೆ ಸರಿಯಾದ ಓಪನಿಂಗೇ ಸಿಕ್ಕಿತ್ತು. ಅದರಲ್ಲಿ ಮಾಡಿದ ಅಭಿನಯಕ್ಕಾಗಿ ಈಕೆಗೆ ರಾಷ್ಟ್ರ ಮಟ್ಟದ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಪುರಸ್ಕಾರ ಕೂಡ ದೊರೆತಿತ್ತು. ಮುಂದೆ ಈಕೆ ಮಲಯಾಳಂನ ಮಾಲೂಟ್ಟಿ ಫಿಲಂನಲ್ಲಿ ನಟಿಸಿದಳು. ಇದರಲ್ಲಿ ಆಕೆ ಬೋರ್ವೆಲ್ನಲ್ಲಿ ಸಿಕ್ಕಿಹಾಕಿಕೊಳ್ಳುವ ಪುಟ್ಟ ಮಗು. ಅದಕ್ಕೆ ಕೇರಳ ರಾಜ್ಯದ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಬಂತು. ನಂತರ ಕನ್ನಡದ ಮತ್ತೆ ಹಾಡಿತು ಕೋಗಿಲೆ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ನಟಿಸಿದಳು. ಅದಕ್ಕೆ ಕರ್ನಾಟಕ ರಾಜ್ಯದ ಅತ್ಯುತ್ತಮ ಬಾಲನಟಿ ಪ್ರಶಸ್ತಿಯೂ ದೊರೆಯಿತು. ಹೀಗೆ ಮೂರು ರಾಜ್ಯಗಳ ಹಾಗೂ ನ್ಯಾಷನಲ್ ಲೆವೆಲ್ ಬೆಸ್ಟ್ ಬಾಲನಟಿ ಪ್ರಶ್ತಿ ಪಡೆದವಳು ಈಕೆಯೊಬ್ಬಳೇ.
ಕನ್ನಡದಲ್ಲಿ ದಾಕ್ಷಾಯಿಣಿ, ಕಾದಂಬರಿ, ಕರುಳಿನ ಕುಡಿ, ಭೈರವಿ, ಚಿನ್ನಾ ನೀ ನಗುತಿರು, ಭೂವನೇಶ್ವರಿ, ಹೂವು ಹಣ್ಣು, ಜಗದೇಶ್ವರಿ, ಮತ್ತೆ ಹಾಡಿತು ಕೋಗಿಲೆ ಮೊದಲಾದ ಫಿಲಂಗಳಲ್ಲಿ ನಟಿಸಿದಳು. ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಸಿತಾರಾ, ಶ್ರುತಿ, ಗೀತಾ, ಸುನಿಲ್, ವಿನಯಾ ಪ್ರಸಾದ್, ಲಕ್ಷ್ಮಿ ಮುಂತಾದ ಹೆಚ್ಚಿನೆಲ್ಲ ಸ್ಟಾರ್ ನಟ ನಟಿಯರೊಂದಿಗೂ ನಟಿಸಿದಳು.
ಸಾಕು ನಾಯಿ ಲಕ್ಕಿಯನ್ನು ಕಳೆದುಕೊಂಡ ನಟಿ ಹರಿಪ್ರಿಯಾ ಭಾವುಕ ಮಾತು! ...
ಆದರೆ ಮುಂದೆ ಪೂರ್ಣ ಪ್ರಮಾಣದ ನಟಿಯಾಗಿ ಕಂಗೊಳಿಸುವ ಆಕೆಯ ಆಸೆ ಯಾಕೋ ನನಸಾಗಲೇ ಇಲ್ಲ. ಈಕೆಯ ಅಕ್ಕ ಶಾಲಿನಿ ಕೆಲವು ಫಿಲಂಗಳಲ್ಲಿ ನಟಿಸಿದಳು; ನಂತರ ನಟ ಅಜಿತ್ ಜೊತೆಗೆ ಮದುವೆಯಾದಳು. 2009ರಲ್ಲಿ ಸಿದ್ದಾರ್ಥ ಹೀರೋ ಆಗಿ, ಶಾಮಿಲಿ ಹೀರೋಯಿನ್ ಆಗಿ 'ಒಯೆ' ಫಿಲಂನಲ್ಲಿ ನಟಿಸಿದರು. ಅದೇನೂ ಹಿಟ್ ಆಗಲಿಲ್ಲ. ಮುಂದೆ ೨೦೦೯ರಲ್ಲಿ ಈಕೆ ಸಿಂಗಾಪುರಕ್ಕೆ, ಉನ್ನತ ಶಿಕ್ಷಣಕ್ಕಾಗಿ ಹೋದಳು. 2010ರಿಂದ 2015ರವರೆಗೆ ಅಲ್ಲಿದ್ದಳು. 2016ರಲ್ಲಿ ವಾಪಸ್ ಬಂದು 'ವಲ್ಲೀಂ ತೇಟ್ಟಿ ಪುಲ್ಲೀಂ ತೇಟ್ಟಿ' ಫಿಲಂನೊಂದಿಗೆ ಮತ್ತೆ ಅದೃಷ್ಟ ಪರೀಕ್ಷಿಸಿದಳು. ಅದೂ ಕೂಡ ಥಿಯೇಟರ್ಗಳಲ್ಲಿ ಕಚ್ಚಿಕೊಳ್ಳಲಿಲ್ಲ. 2017, 2018ರಲ್ಲಿ ವೀರ ಶಿವಾಜಿ ಮತ್ತು ಅಮ್ಮಮ್ಮಗರಿಲ್ಲು ಫಿಲಂಗಳಲ್ಲಿ ನಟಿಸಿದಳು. ಈ ಫಿಲಂಗಳು ಸುಮಾರಾಗಿ ಓಡಿದವಾದರೂ ಅದರಿಂದ ಈಕೆಯ ಕೆರಿಯರ್ಗೆ ಏನೂ ಪರಿಣಾಮ ಆಗಲಿಲ್ಲ.
ಶಾಮಿಲಿಯನ್ನು ಜನ ಬಾಲನಟಿಯಾಗಿ ನೋಡಬಯಸಿದಷ್ಟು, ಹೀರೋಯಿನ್ ಆಗಿ ಕಾಣಲು ಬಯಸಲೇ ಇಲ್ಲವೆಂದು ಕಾಣುತ್ತದೆ. ಹೀಗಾಗಿ ಈಕೆಯ ಅಭಿನಯ ಅದೆಷ್ಟೇ ಪರಿಣಾಮಕಾರಿಯಾಗಿದ್ದರೂ ಈಕೆಯ ಕೆರಿಯರ್ ಮೇಲೇಳಲಿಲ್ಲ. ಬಹುಶಃ ಮಣಿರತ್ನಂ ಅವರು ಈಕೆಯನ್ನು ಅಂಜಲಿಯಲ್ಲಿ ನಿರ್ದೇಶಿಸಿದಂತೆ, ಈಗ ಯಾರಾದರು ಪ್ರತಿಭಾವಂತ ನಿರ್ದೇಶಕ ಈಕೆಯ ಪ್ರತಿಭೆಯನ್ನು ಹೊರತೆಗೆಯಲು ಮುಂದಾದರೆ ಆಕೆ ಸಕ್ಸಸ್ ಆಗಬಹುದೇನೋ.
ಅಂದಹಾಗೆ ಈ ಇನ್ಸ್ಟಗ್ರಾಮ್ ಫೋಟೋವನ್ನು ಯಾವಾಗ ತೆಗೆದದ್ದು, ಯಾರು ತೆಗೆದದ್ದು ಎಂಬ ವಿವರಗಳನ್ನು ಶಾಮಿಲಿ ಹಾಕಿಲ್ಲ. ಬಹುಶಃ ಈಕೆಯ ನಾಲ್ಕು ಅಥವಾ ಐದರ ಪ್ರಾಯದಲ್ಲಿ, ಯಾವುದೋ ಕನ್ನಡ ಫಿಲಂ ಶೂಟಿಂಗ್ ಸಂದರ್ಭದಲ್ಲಿ ತೆಗೆಸಿಕೊಂಡಿರಬಹುದು.
ರಾಹುಲ್ ಗಾಂಧಿ ವಿಚಾರದಲ್ಲಿ ನಾನಿಂಥ ತಪ್ಪು ಮಾಡಬಾರದಿತ್ತು ಎಂದ ರಮ್ಯಾ! ...