ಕಾಶ್ಮೀರದಲ್ಲಿ ಕಾಣಿಸಿಕೊಂಡ ಅಪ್ಪು, ವಿಡಿಯೋ ನೋಡಿ ಭಾವುಕರಾದ ಫ್ಯಾನ್ಸ್
ಪುನೀತ್ ರಾಜ್ ಕುಮಾರ್ ಹಳೆ ವಿಡಿಯೋ ಒಂದು ವೈರಲ್ ಆಗಿದೆ. ಅದನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಮತ್ತೆ ಬಂದ್ಬಿಡಿ ಅಪ್ಪು ಎನ್ನುತ್ತಿದ್ದಾರೆ ಫ್ಯಾನ್ಸ್

ಇನ್ಸ್ಟಾ ರೀಲ್ಸ್ (Insta Reels) ಸ್ಕ್ರೋಲ್ ಮಾಡ್ತಿರ್ತೀರಿ, ಕಾಶ್ಮೀರದಲ್ಲಿ ಕಾಣಿಸಿಕೊಂಡ ಪುನೀತ್ ರಾಜ್ ಕುಮಾರ್ (Puneeth Rajkumar) ಅನ್ನೋ ಪೋಸ್ಟ್ ಕಣ್ಣಿಗೆ ಬೀಳುತ್ತೆ. ಆಗ ಶಾಕ್, ಖುಷಿ, ಅಚ್ಚರಿ ಎಲ್ಲವೂ ಒಟ್ಟಿಗೆ ಆಗುತ್ತೆ ಅಲ್ವಾ? ಕರುನಾಡ ಅಪ್ಪು ಮತ್ತೆ ಕಣ್ಮುಂದೆ ಬಂದ್ರೆ ಯಾರು ಬೇಡ ಹೇಳ್ತಾರೆ? ಅವ್ರ ನಿಧನ ಸುಳ್ಳಾಗಿರ್ಲಿ ಅಂತ ಈಗ್ಲೂ ಬೇಡಿಕೊಳ್ಳುವ ಜನರು ಸಾಕಷ್ಟಿದ್ದಾರೆ. ಅದಕ್ಕೆ ಈಗ ವೈರಲ್ ಆಗಿರುವ ವಿಡಿಯೋಕ್ಕೆ ಬಂದಿರೋ ಕಮೆಂಟ್ ಗಳೇ ಸಾಕ್ಷ್ಯ.
ಅಕ್ಟೋಬರ್ 29, 2021.. ಕನ್ನಡಿಗರಿಗೆ ಮಾತ್ರವಲ್ಲ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದ್ದ ದಿನ. ಕನ್ನಡಿಗರ ಪ್ರೀತಿಯ ಅಪ್ಪು (Appu) ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿದ ದಿನ. ಪುನೀತ್ ಇಹಲೋಕ ತ್ಯಜಿಸಿ ಮೂರುವರೆ ವರ್ಷಗಳಾಗ್ತಿದ್ರೂ ಅಭಿಮಾನಿಗಳಿಗೆ ಸತ್ಯವನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಪುನೀತ್ ರಾಜ್ ಕುಮಾರ್ ಈಗಿಲ್ಲ ಎಂಬುದನ್ನು ಅಭಿಮಾನಿಗಳು ಒಪ್ಪಿಕೊಳ್ತಿಲ್ಲ. ಅಪ್ಪು ಒಂದಲ್ಲ ಒಂದು ರೂಪದಲ್ಲಿ ನಮ್ಮ ಜೊತೆಗಿದ್ದಾರೆ ಎಂಬ ನಂಬಿಕೆ ಕನ್ನಡಿಗರಲ್ಲಿ ಬಲವಾಗಿದೆ. ಪವರ್ ಸ್ಟಾರ್ (Power Star) ಪುನೀತ್ ರಾಜ್ ಕುಮಾರ್ ವಿಡಿಯೋ ಒಂದು ಈಗ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪುನೀತ್ ವಿಡಿಯೋ ಪೋಸ್ಟ್ ಮಾಡಿ, ಅದಕ್ಕೊಂದು ಶೀರ್ಷಿಕೆ ಹಾಕಿದ್ದಾರೆ. ಆ ಶೀರ್ಷಿಕೆ ಈಗ ಎಲ್ಲರನ್ನು ಮತ್ತೆ ಅಚ್ಚರಿ ಹಾಗೂ ದುಃಖದಲ್ಲಿ ತೇಲುವಂತೆ ಮಾಡಿದೆ.
ವಿಧಿಯ ಆಟಕೆ ಪುನೀತ ರಾಜ ಕೇಳದೆ ಬಲಿಯಾದ; ಅರ್ಜುನ 'ಜೋಗಿ ಪದ' ಹೇಳಿದ್ದೇನು?
kannadada_kotyadhipathi ಇನ್ಸ್ಟಾ ಖಾತೆಯಲ್ಲಿ, ಕಾಶ್ಮೀರದಲ್ಲಿ ಕಾಣಿಸಿಕೊಂಡ ಅಪ್ಪು ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 2024ರಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಆದ್ರೆ ಈಗ್ಲೂ ಈ ವಿಡಿಯೋ ವೈರಲ್ ಆಗ್ತಾನೆ ಇದೆ. ಲಕ್ಷಾಂತರ ಲೈಕ್ಸ್ ಪಡೆದಿರುವ ವಿಡಿಯೋದಲ್ಲಿ ಅಪ್ಪು ಅದೇ ಮುಗ್ದ ನಗೆ ನಗ್ತಾ ಇರೋದನ್ನು ನೀವು ನೋಡ್ಬಹುದು. ಅಪ್ಪು ತಮ್ಮ ಅಭಿಮಾನಿಗಳ ಜೊತೆ ಮಾತನಾಡ್ತಿದ್ದಾರೆ. ಈ ವಿಡಿಯೋ 2014ರಲ್ಲಿ ಕಾಶ್ಮೀರದಲ್ಲಿ ತೆಗೆದಿದ್ದು. ಆದ್ರೆ ಈ ವಿಡಿಯೋ ನೋಡಿದ ಫ್ಯಾನ್ಸ್ ಅದು ಹಳೆ ವಿಡಿಯೋ ಅನ್ನೋದನ್ನು ಒಪ್ಪಿಕೊಳ್ಳೋಕೆ ಸಿದ್ಧ ಇಲ್ಲ.
ರಿಯಲ್ ಆಗಿ ಅಪ್ಪು ಬಂದ್ರು ಅಂದ್ಕೊಡ್ವಿ, ಇದು ಹಳೆ ವಿಡಿಯೋ ಅನ್ನೋದು ಗೊತ್ತಾದ್ಮೇಲೆ ಬೇಜಾರಾಯ್ತು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ನೀವು ಹೇಳಿದಂತೆ ಅಪ್ಪು ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದಾರಾ? ಇದು ಹೊಸ ವಿಡಿಯೋನಾ ಅಂತ ಕೆಲವರು ಕೇಳಿದ್ರೆ ಮತ್ತೆ ಕೆಲವರು ನೀವು ಹೇಳಿದಂತೆ ಅಪ್ಪು ಕಾಶ್ಮೀರದಲ್ಲಿ ಕಾಣಿಸಿಕೊಳ್ಬೇಕಿತ್ತು, ಮತ್ತೆ ನಮ್ಮ ಮುಂದೆ ಬರ್ಬೇಕಿತ್ತು. ಇದೇ ನಮ್ಮ ಪ್ರಾರ್ಥನೆ ಎಂದಿದ್ದಾರೆ.
ಈ ವಿಡಿಯೋ ನೋಡಿ ಒಂದು ಕ್ಷಣ ಎಷ್ಟೊಂದು ಖುಷಿ ಆಯ್ತು. ಕರ್ನಾಟಕ್ಕೆ ಬಂದ್ಬಿಡಿ, ನಿಮ್ಮನ್ನು ಮರೆಯೋಕೆ ಸಾಧ್ಯವೆ ಇಲ್ಲ, ಇದು ನಿಜವಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಎಂಬುದೇ ಅಭಿಮಾನಿಗಳ ಮಾತು. ಅಪ್ಪು ಅವರು ಎಲ್ಲೋ ಶೂಟಿಂಗ್ ಮಾಡ್ತಿದ್ದಾರೆ ಎಂಬುದನ್ನು ನಾವು ನಂಬ್ತೇವೆಯೇ ವಿನಃ ಅಪ್ಪು ನಮ್ಮೊಂದಿಗೆ ಇಲ್ಲ ಎಂಬುದನ್ನಲ್ಲ ಅನ್ನೋದು ಬಹುತೇಕ ಅಭಿಮಾನಿಗಳ ಮಾತು.
ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ನೋಡಿ ಭಾವುಕನಾದೆ: ಪ್ರಜ್ವಲ್ ದೇವರಾಜ್
ಅಪ್ಪು ಪ್ರತಿಯೊಬ್ಬರ ಮನೆ, ಮನದಲ್ಲಿ ತಳವೂರಿದ್ದಾರೆ. ಅಪ್ಪು ಅವರನ್ನು ಫ್ಯಾನ್ಸ್ ದೇವರಂತೆ ಪ್ರೀತಿ ಮಾಡ್ತಾರೆ. ಅಪ್ಪುಗೆ ದೇವರು ಮೋಸ ಮಾಡಿದ್ದಾನೆ, ಪುನೀತ್ ಗೆ ಇನ್ನೊಂದು ಅವಕಾಶ ನೀಡ್ಬೇಕಿತ್ತು ಅನ್ನೋದೇ ಅಭಿಮಾನಿಗಳ ನೋವಿನ ಮಾತು. ನಗ್ತಾ, ನಗಿಸ್ತಾನೆ ನಟನೆ, ತಮ್ಮ ಸರಳ ಸ್ವಭಾವದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದ ಪುನೀತ್, ಸಮಾಜ ಸೇವೆ ಮೂಲಕ ಅದೆಷ್ಟೋ ಬಡ ಕುಟುಂಬಗಳಿಗೆ ಆಸರೆಯಾಗಿದ್ದರು.