ಸೋಶಿಯಲ್ ಮೀಡಿಯಾದಲ್ಲಿ ಹಠಾತ್ ಟ್ರೆಂಡ್ ಆದ ರಮ್ಯಾ ನಿಧನ ಸುದ್ದಿ, ನಿಜಾಂಶ ಏನು?
ನಟಿ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಠಾತ್ ಟ್ರೆಂಡ್ ಸೃಷ್ಟಿಯಾಗಿತ್ತು. ಕೆಲವೊಂದು ಅಧಿಕೃತ ಟ್ವಿಟರ್ ಪೇಜ್ಗಳಲ್ಲಿಯೂ ರಮ್ಯಾ ನಿಧನರಾಗಿದ್ದಾರೆ ಎನ್ನುವ ಸುದ್ದಿಯನ್ನು ಪೋಸ್ಟ್ ಮಾಡಿದ್ದವು.

ಬೆಂಗಳೂರು (ಸೆ.6): ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬುಧವಾರ ಬೆಳಗ್ಗೆ ಹಠಾತ್ ಟ್ರೆಂಡ್ ಆಗಿತ್ತು. ಎಸ್ಎಸ್ ಮ್ಯೂಸಿಕ್, ದಿನಕರನ್ ಹಾಗೂ ಕೆಲವೊಂದು ಅಧಿಕೃತ ಟ್ವಿಟರ್ ಪೇಜ್ಗಳು ಕೂಡ ನಟಿ ರಮ್ಯಾ ಅವರ ಚಿತ್ರಗಳನ್ನು ಪೋಸ್ಟ್ ಮಾಡಿ ಕಾರ್ಡಿಯಾಕ್ ಅರೆಸ್ಟ್ನಿಂದ ನಿಧನರಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದವು. ಆದರೆ, ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಕುರಿತಾಗಿ ಮಾಹಿತಿ ಪಡೆದಿದ್ದು ರಮ್ಯಾ ಸಾವಿನ ಸುದ್ದಿ ಫೇಕ್. ಇನ್ನು ರಮ್ಯಾ ಜೊತೆ ಸ್ವಿಜರ್ಲೆಂಡ್ನ ಜಿನೇವಾದಲ್ಲಿರುವ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಕೂಡ ಟ್ವೀಟ್ ಮಾಡಿ ರಮ್ಯಾ ಅವರಿಗೆ ಏನೂ ಆಗಿಲ್ಲ ಎಂದು ಖಚಿತಪಡಿಸಿದ್ದಾರೆ. 'ಈಗ ತಾನೆ ನಾನು ರಮ್ಯಾ ಅವರ ಜೊತೆ ಮಾತನಾಡಿದೆ. ಆಕೆ ಚೆನ್ನಾಗಿಯೇ ಇದ್ದಾರೆ. ಈಗ ಜೆಕ್ ಗಣರಾಜ್ಯದ ಪ್ರೇಗ್ಗೆ ತೆರಳುತ್ತಿದ್ದು, ಆ ಬಳಿಕ ಬೆಂಗಳೂರಿಗೆ ವಾಪಾಸಾಗುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
ಅದಕ್ಕೂ ಮುನ್ನ ರಮ್ಯಾ ಜೊತೆಯಲ್ಲಿ ಜಿನೇವಾದಲ್ಲಿ ಇರುವ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ. ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಮಹಿಳೆ ರಮ್ಯಾರನ್ನು ಜನೇವಾದಲ್ಲಿ ಭೇಟಿ ಮಾಡಿದೆ. ಬೆಂಗಳೂರಿನ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು ಎಂದು ಅವರು ಬರೆದುಕೊಂಡಿದ್ದಾರೆ. ಅದರೊಂದಿಗೆ ರಮ್ಯಾ ಜೊತೆಗಿನ ಸೆಲ್ಫಿಯನ್ನೂ ಕೂಡ ಹಂಚಿಕೊಂಡಿದ್ದಾರೆ.
ಪತ್ರಕರ್ತೆ ಧನ್ಯಾ ರಾಜೇಂದ್ರನ್ ಕೂಡ ಸ್ವತಃ ರಮ್ಯಾರಿಗೆ ದೂರವಾಣಿ ಕರೆ ಮಾಡಿ ಸುದ್ದಿ ಫೇಕ್ ಎನ್ನುವುದನ್ನು ಖಚಿತಪಡಿಸಿದ್ದಾರೆ. 'ಈಗ ತಾನೆ ರಮ್ಯಾ ಜೊತೆ ಮಾತನಾಡಿದೆ. ಆಕೆ ಜಿನೇವಾದಲ್ಲಿದ್ದಾರೆ. ದೇವರ ಕರೆ ಬರುವವರೆಗೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದಾರೆ. ಇಂಥ ಸುದ್ದಿಗಳನ್ನು ಹರಿಬಿಟ್ಟ ವ್ಯಕ್ತಿಗಳಿಗೆ ನಾಚಿಕೆಯಾಗಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ಟಾಲಿವುಡ್ಗೆ ಹಾರಿತು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ': ರಮ್ಯಾ ಔಟ್, ರಶ್ಮಿ ಗೌತಮ್ ಇನ್!
ರಮ್ಯಾ ಸಾವಿನ ಬಗ್ಗೆ ಕೆಲವೊಂದು ಟ್ವಿಟರ್ ಹ್ಯಾಂಡಲ್ಗಳು ಮಾತ್ರವಲ್ಲದೆ, ತಮಿಳಿನ ಜನಪ್ರಿಯ ಟಿವಿ ಚಾನೆಲ್ಗಳು ಕೂಡ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಆದರೆ, ಈ ಎಲ್ಲಾ ವದಂತಿಗಳಿಗೆ ರಮ್ಯಾ ಸ್ನೇಹಿತೆಯರು ಸ್ಪಷ್ಟನೆ ನೀಡಿದ್ದಾರೆ. ರಮ್ಯಾಗೆ ಏನೂ ಆಗಿಲ್ಲ. ಅವರ ಆರೋಗ್ಯದಲ್ಲಿಯೂ ಯಾವುದೇ ಏರುಪೇರು ಆಗಿಲ್ಲ ಎಂದು ಹೇಳಿದ್ದಾರೆ.
ಸಂಬಂಧದಲ್ಲಿ ಹೆಚ್ಚು ನಿರೀಕ್ಷೆ ಬೇಡ ಎಂದ ರಮ್ಯಾ: ಏನಾಯ್ತು ಮೇಡಂ? ನೆಟ್ಟಿಗರ ಪ್ರಶ್ನೆ
ಇದರ ಬೆನ್ನಲ್ಲಿಯೇ ಈ ಸುದ್ದಿಗಳನ್ನು ಪ್ರಸಾರ ಮಾಡಿದ ನ್ಯೂಸ್ ಚಾನೆಲ್ಗಳ ವಿರುದ್ಧ ರಮ್ಯಾ ಅಭಿಮಾನಿಗಳು ಕಿಡಿಕಾರಿದ್ದು, ಇಂಥ ಸುದ್ದಿಗಳನ್ನು ಪ್ರಸಾರ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. 'ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಮೊದಲು ದಯವಿಟ್ಟು ಎರಡು ಬಾರಿ ಪರಿಶೀಲಿಸಿ, ವಿಶೇಷವಾಗಿ ಯಾವುದಾದರೂ ಸಾವಿನ ಬಗ್ಗೆ. ಅನಗತ್ಯ ಗಾಬರಿ ಅಥವಾ ಗೊಂದಲವನ್ನು ಉಂಟುಮಾಡುವ ಸುಳ್ಳು ಮಾಹಿತಿಯನ್ನು ಹರಡುವುದನ್ನು ತಪ್ಪಿಸಿ' ಎಂದು ಭಾರ್ಗವಿ ಎನ್ನುವವರು ಟ್ವೀಟ್ ಮಾಡಿದ್ದಾರೆ.