‘ಸುಳಿ’ಚಿತ್ರದೊಂದಿಗೆ ಸಿನಿ ಪಯಣ ಆರಂಭಿಸಿದ ಕರಾವಳಿ ಚೆಲುವೆ ಅದ್ವಿತಿ ಶೆಟ್ಟಿ, ಚಂದನವನದಲ್ಲೀಗ ಬೇಡಿಕೆಯ ನಟಿ ಆಗಿದ್ದಾರೆ. ‘ಫ್ಯಾನ್‌’ ಚಿತ್ರದ ನಂತರವೀಗ ಅವರು ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು ‘ಎಸ್‌’. 

‘ಒಂದು ಶಿಕಾರಿಯ ಕತೆ ’ಚಿತ್ರದ ನಾಯಕ ನಟ ಪ್ರಜ್ವಲ್‌ ಅಭಿಮನ್ಯು ಇದರ ನಾಯಕ ನಟ. ಇವರಿಬ್ಬರ ಕಾಂಬಿನೇಷನ್‌ ಸಿನಿಮಾಕ್ಕೆ ದೇವದತ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಹಿಂದೆ ಇವರು ‘ಸೈಕೋ’ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತಂದಿದ್ದರು. ಈ ಚಿತ್ರಕ್ಕೆ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದಿಕ್ಷೀತ್‌ ಹಾಡಿದ್ದ ‘ನೀನ ಪೂಜೆಗೆ ಬಂದೆ ಮಾದೇಶ್ವರ ..’ಹಾಡು ಭಾರೀ ಜನಪ್ರಿಯತೆ ಪಡೆದಿತ್ತು. ‘ಸೈಕೋ’ ಚಿತ್ರ ಅಂದ್ರೆ ಈಗಲೂ ನೆನಪಾಗೋದು ಅದೇ ಹಾಡು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

IAS ಅಧಿಕಾರಿ ಆಗಬೇಕಿದ್ದವರಿಗೆ ಕೈ ಹಿಡಿದಿದ್ದು Mr & Mrs ರಾಮಚಾರಿ!

ಆ ಚಿತ್ರದ ನಂತರ ನಿರ್ದೇಶಕ ದೇವದತ್‌ ‘ಎಸ್‌ ’ ಹೆಸರಿನ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಗರಾಜ್‌ ಕೆ.ವಿ ಎಂಬುವರು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಿರ್ಮಾಣದಲ್ಲಿ ಇದು ಅವರ ಚೊಚ್ಚಲ ಚಿತ್ರ. ಕಲಾವಿದರು ಹಾಗೂ ನಿರ್ಮಾಪಕರು ಸೇರಿದಂತೆ ಹೊಸಬರ ಜತೆಗೀಗ ಸಿನಿಮಾ ಮಾಡುತ್ತಿರುವ ನಿರ್ದೇಶಕ ದೇವದತ್‌, ಈ ಚಿತ್ರದೊಂದಿಗೆ ಹೊಸದೊಂದು ಕತೆ ಹೇಳಲು ಹೊರಟಿದ್ದಾರಂತೆ.‘ಇದೊಂದು ಪಕ್ಕಾ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಸಿನಿಮಾ. ಪ್ರೀತಿಯಲ್ಲೆ ಹೊಸತರೆನಾದ ಕತೆ ಇಲ್ಲಿದೆ. ಪ್ರೀತಿ ಜತೆಗೆ ಆ್ಯಕ್ಷನ್‌, ಸೆಂಟಿಮೆಂಟ್‌ ಕೂಡ ಚಿತ್ರದಲ್ಲಿದೆ. ಅದಕ್ಕೆ ತಕ್ಕಂತೆಯೇ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ’ಎನ್ನುತ್ತಾರೆ ದೇವದತ್‌.

ಈಗಾಗಲೇ ಮೂರ್ನಾಲ್ಕು ಚಿತ್ರಗಳಲ್ಲಿ ನಾಯಕಿ ಆಗಿ ಅಭಿನಯಿಸಿರುವ ನಟಿ ಅದ್ವಿತಿ ಶೆಟ್ಟಿಗೆ ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರವೇ ಸಿಕ್ಕಿದೆಯಂತೆ.ಈ ಚಿತ್ರ ಒಪ್ಪಿಕೊಳ್ಳಲು ಮೂಲಕ ಕಾರಣವೇ ಅದಾಗಿದೆ ಎನ್ನುತ್ತಾರೆ. ಹಾಗೆಯೇ ಒಂದು ಶಿಕಾರಿಯ ಕತೆ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಪ್ರಜ್ವಲ್‌ ಅಭಿಮನ್ಯು ಕೂಡ ಒಂದೊಳ್ಳೆಯ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ. ಪ್ರಭು ಕುಮಾರ್‌ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಪ್ರದೀಪ್‌ ವರ್ಮ ಸಂಗೀತ ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಕೊರೋನಾ ಪರಿಸ್ಥಿತಿ ನೋಡಿಕೊಂಡು ಏಪ್ರಿಲ್‌ 10ರಂದು ಚಿತ್ರಕ್ಕೆ ಮುಹೂರ್ತ ಮುಗಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಬೆಂಗಳೂರು, ಮಡಿಕೇರಿ ಹಾಗೂ ಚಿಕ್ಕಬಳ್ಳಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲ್ಯಾನ್‌ ಹಾಕಿಕೊಂಡಿದೆ.