Asianet Suvarna News Asianet Suvarna News

ರೂಪಾಂತರ ಆ್ಯಂಥಾಲಜಿಯಲ್ಲಿ ಗೂಂಡಾ ಆದ್ರು ರಾಜ್ ಬಿ ಶೆಟ್ಟಿ!

ನಟ ರಾಜ್ ಬಿ ಶೆಟ್ಟಿ ‘ರೂಪಾಂತರ’ ಎಂಬ ಆ್ಯಂಥಾಲಜಿಯಲ್ಲಿ ಬೆಂಗಳೂರಿನ ಗೂಂಡಾ ಪಾತ್ರದಲ್ಲಿ ಮಿಂಚಲು ರೆಡಿ ಆಗ್ತಿದ್ದಾರೆ. ನಿರ್ದೇಶನ ಕೇರಳದ ಮಿಥಿಲೇಶ್ ಎಡವಲತ್ ಅವರದು. ಐದು ಕಥಾಸರಣಿಯ ಈ ಚಿತ್ರ ಮೆಟಮಾರ್ಫಸಿಸ್ ಅಂದರೆ ರೂಪಾಂತರಕ್ಕೆ ಸಂಬಂಧಿಸಿದ್ದು.

Actor Raj B shetty to play Villain role in Roopantara film vcs
Author
Bangalore, First Published Jun 26, 2021, 9:52 AM IST

ಐದೂ ಸಿನಿಮಾಗಳೂ ಇದೇ ಥೀಮ್‌ನಲ್ಲಿ ಇರಲಿದ್ದು, ಕಥೆಗಳು ಭಿನ್ನವಾಗಿರುತ್ತವೆ. ನಿರ್ದೇಶಕ ಮಿಥಿಲೇಶ್ ಅವರ ಕಥೆಯನ್ನು ಕನ್ನಡಕ್ಕೆ ಭಾವಾಂತರಿಸಿ, ಚಿತ್ರಕಥೆ, ಸಂಭಾಷಣೆ ಬರೆದವರು ರಾಜ್ ಬಿ ಶೆಟ್ಟಿ. ಒಂದು ಮೊಟ್ಟೆಯ ಕಥೆಯ ನಿರ್ಮಾಪಕ ಸುಹಾನ್ ಪ್ರಸಾದ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಬೆಂಗಳೂರಿನ ಸುತ್ತಮುತ್ತ, ವಿಜಯಪುರದಲ್ಲಿ ಶೂಟಿಂಗ್ ನಡೆದಿದೆ.

ಡಿಫರೆಂಟ್ ಲುಕ್

‘ಈ ಚಿತ್ರದಲ್ಲಿ ನಾನು ಸ್ಲಂ ಹಿನ್ನೆಲೆಯಿಂದ ಬಂದ ಗೂಂಡಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಾತು ಮಾತಿಗೂ ತೋಳೇರಿಸಿಕೊಂಡು ಬರುವ ರೌಡಿ ಪಾತ್ರವದು. ಹೀಗಿದ್ದ ವ್ಯಕ್ತಿ ಸನ್ನಿವೇಶಗಳ ಸುಳಿಗೆ ಸಿಕ್ಕಿ ಹೇಗೆ ರೂಪಾಂತರ ಆಗುತ್ತಾನೆ ಅನ್ನುವುದು ಒನ್‌ಲೈನ್’ ಅನ್ನುತ್ತಾರೆ ರಾಜ್ ಶೆಟ್ಟಿ. ‘ರೂಪಾಂತರ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ತಾಂತ್ರಿಕ ಕೆಲಸಗಳೂ ಬಹುತೇಕ ಪೂರ್ಣಗೊಂಡಿವೆ. ತಮ್ಮ ನಟನೆ, ನಿರ್ದೇಶನದ ಗರುಡ ಗಮನ ವೃಷಭ ವಾಹನ ಸಿನಿಮಾದ ಬಳಿಕ ಈ ಚಿತ್ರವನ್ನು ಥಿಯೇಟರ್‌ನಲ್ಲೇ ರಿಲೀಸ್ ಮಾಡುವ ಪ್ಲಾನ್ ರಾಜ್ ಶೆಟ್ಟಿ ಹಾಗೂ ಟೀಮ್‌ನದ್ದು.

ವಿಭಿನ್ನ ಕಥಾಹಂದರದ ಈ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ವಿಶಿಷ್ಟ. ಒಂದು ಮೊಟ್ಟೆಯ ಕಥೆ ಟೀಮ್ ಜೊತೆಗೆ ಮತ್ತೊಂದು ಪ್ರಾಜೆಕ್‌ಟ್ ಮಾಡಿದ್ದು ಖುಷಿ ಕೊಟ್ಟಿದೆ. - ರಾಜ್ ಬಿ ಶೆಟ್ಟಿ

ಹೊಸಬರದ್ದೇ ಪಾರುಪತ್ಯ

ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ಬಿಟ್ಟರೆ ಉಳಿದವರೆಲ್ಲ ನಟನೆಗೆ ಹೊಸಬರು. ಶ್ವೇತಾ ಮುಖ್ಯಪಾತ್ರದಲ್ಲಿದ್ದಾರೆ. ‘ಕಥಾಸಂಗಮ’ ಆ್ಯಂಥಾಲಜಿಯ ಜನಪ್ರಿಯ ಕಿರುಚಿತ್ರ ‘ಲಚ್ಚವ್ವ’ದ ನಿರ್ದೇಶಕ ಜೈಶಂಕರ್, ಭರತ್ ಜಿಬಿ, ಮುರಳೀಧರ ಸಿಕೆ, 73ರ ಹರೆಯದ ರಂಗ ನಿರ್ದೇಶಕ ಸೋಮಣ್ಣ ಬೋಲೆಗಾಂವ್, ಲೇಖಾ, ಹನುಮಕ್ಕ, ಅಂಜನ್ ಭಾರದ್ವಾಜ್ ಮತ್ತಿತರರು ನಟಿಸಿದ್ದಾರೆ.

ನಟಿಸುವ ಆಸೆ ಸದ್ಯಕ್ಕಿಲ್ಲ, ಹ್ಯಾಪಿನೆಸ್ ಅಷ್ಟೇ ಮುಖ್ಯ: ರಾಜ್ ಬಿ ಶೆಟ್ಟಿ 

ಎಂಬಿಎ ತರುಣನ ಹೊಸ ಕನಸು

ಕೇರಳದ ತರುಣ ಮಿಥಿಲೇಶ್ ಎಡವಲತ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಅವರು ಹಿಂದೆ ಬೆಂಗಳೂರಿನಲ್ಲಿ ಎಂಬಿಎ ಓದಿ ಒರಾಕಲ್‌ನಲ್ಲಿ ಉದ್ಯೋಗಿ ಆಗಿದ್ದವರು. ಸಿನಿಮಾದ ಸೆಳೆತದಿಂದ ಆ ಕೆಲಸ ಬಿಟ್ಟು ಕನ್ನಡ, ಮನೆಯಾಳಂನ ಒಂದೆರಡು ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆದರು. ವಿಭಿನ್ನ ಕಥೆಯನ್ನು ರೆಡಿ ಮಾಡಿ, ಅದನ್ನು ನಿರ್ಮಾಪಕರಿಗೆ ಹೇಗೆ ಹೇಳೋದು ಅಂತಿದ್ದಾಗ ಸಂಪರ್ಕಕ್ಕೆ ಬಂದವರು ‘ಒಂದು ಮೊಟ್ಟೆಯ ಕಥೆ’ ನಿರ್ಮಾಪಕ ಸುಹಾನ್ ಪ್ರಸಾದ್. ಇವರ ಕಥೆಯನ್ನು ಮೆಚ್ಚಿದ ಸುಹಾನ್ ಹೊಸ ಪ್ರಾಜೆಕ್‌ಟ್ ಆರಂಭಿಸಿಯೇ ಬಿಟ್ಟರು. ಕನ್ನಡಕ್ಕೆ ಬಹಳ ಹೊಸತಾಗಿರುವ ಇಂಥಾ ಕಥೆಯನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಮಿಥಿಲೇಶ್ ಅವರದು.

ಬೆಂಗಳೂರಿನಲ್ಲಿ ಎಂಬಿಎ ಓದುತ್ತಿದ್ದಾಗ ನಾನಿದ್ದದ್ದು ಕೆ ಆರ್ ಪುರಂನಲ್ಲಿ. ಅಲ್ಲಿ ಕಂಡ ಘಟನೆಗಳು, ವ್ಯಕ್ತಿಗಳು ನನ್ನನ್ನು ಬಹಳ ಪ್ರಭಾವಿಸಿದರು. ಆ ಸಂದರ್ಭವನ್ನು ಚಿತ್ರದಲ್ಲಿ ತಂದಿದ್ದೇನೆ. ರಾಜ್ ಬಿ ಶೆಟ್ಟಿ ಅವರು ಗೂಂಡಾಗಳನ್ನು ಅಷ್ಟು ಸೂಕ್ಷ್ಮವಾಗಿ ಎಲ್ಲಿ ಗಮನಿಸಿದ್ದೋ ಗೊತ್ತಿಲ್ಲ, ಅವರ ಖದರ್ ಕಂಡು ನಾನೂ ದಂಗಾದೆ. ಬಹಳ ಖುಷಿ ಕೊಟ್ಟ ಪ್ರಾಜೆಕ್‌ಟ್ ಇದು. - ಮಿಥಿಲೇಶ್, ನಿರ್ದೇಶಕ

Follow Us:
Download App:
  • android
  • ios