ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿ ‘ಶೃಂಗಾರ ಕಾವ್ಯ’, 'ಚೈತ್ರದ ಪ್ರೇಮಾಂಜಲಿ’ ಮೊದಲಾದ ಸಿನಿಮಾಗಳನ್ನು ನೀಡಿದ್ದ ನಟ ರಘುವೀರ್ ನಿಧನರಾಗಿ 12 ವರ್ಷಗಳು ಕಳೆದಿದ್ದು, ಮಗಳು ಮೋಕ್ಷ ಅಪ್ಪನನ್ನು ನೆನೆದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.
ನಟ ರಘುವೀರ್ ಇಲ್ಲದೇ 12 ವರ್ಷಗಳು
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ಸದ್ದು ಮಾಡುತ್ತಿದ್ದ ಸಮಯದಲ್ಲಿ, ಸುಂದರವಾದ ಪ್ರೇಮಕಥೆಗಳಾದ ‘ಶೃಂಗಾರ ಕಾವ್ಯ’, 'ಚೈತ್ರದ ಪ್ರೇಮಾಂಜಲಿ’ ಮೂಲಕ ಚಂದನವನಕ್ಕೆ ಕಾಲಿಟ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟವರು ನಟ ರಘುವೀರ್. ಇವರು ನಿಧನರಾಗಿ ಮೇ 8ಕ್ಕೆ 12 ವರ್ಷಗಳು ಕಳೆದಿದ್ದು, ಈ ಸಂದರ್ಭದಲ್ಲಿ ರಘುವೀರ್ ಪುತ್ರಿ ಮೋಕ್ಷಾ ಅಪ್ಪನನ್ನು ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ. ಮೋಕ್ಷಾ ಅಪ್ಪನ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ಅಪ್ಪನನ್ನು ನೆನೆದು ಭಾವುಕರಾಗಿ ಹಲವಾರು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಮೋಕ್ಷಾ ರಘುವೀರ್ ಸಾಲುಗಳು ಹೀಗಿವೆ.

ರಘುವೀರ್ ಪುತ್ರಿ ಮೋಕ್ಷಾ ಸೋಶಿಯಲ್ ಮೀಡಿಯಾ ಪೋಸ್ಟ್ ಹೀಗಿದೆ
“ಇಂದಿಗೆ ನೀವು ನಮ್ಮನ್ನು ಅಗಲಿ 12 ವರ್ಷಗಳು ಕಳೆದಿವೆ, ಇಷ್ಟು ವರ್ಷ ಕಳೆದರೂ, ಅದು ನಿನ್ನೆ ನಡೆದಂತೆ ಭಾಸವಾಗುತ್ತಿದೆ. ಎಲ್ಲರೂ ಸಮಯ ಎಲ್ಲಾ ನೋವನ್ನು ವಾಸಿ ಮಾಡುತ್ತದೆ ಎನ್ನುತ್ತಾರೆ, ಆದರೆ ಕೆಲವು ಗಾಯಗಳು, ಮಾಯವಾಗುವುದಿಲ್ಲ. ಅದು ಮತ್ತೆ ಮತ್ತೆ ನೋವನ್ನು ಕೊಡುತ್ತದೆ. ಆದರೆ ಈ ಬಗ್ಗೆ ಯಾರೂ ಮಾತನಾಡುವುದಿಲ್ಲ.
ನಾನು ಬೆಳೆದಿದ್ದೇನೆ, ಜೀವನ ಇಂದು ಚಲಿಸುತ್ತಲೇ ಇದೆ... ಆದರೆ ನನ್ನೊಳಗಿನ ಒಂದು ಭಾಗ ಇನ್ನೂ ಆ ಪುಟ್ಟ ಹುಡುಗಿ ಪ್ರತಿ ಜನರ ಗುಂಪಿನಲ್ಲೂ ನಿನ್ನನ್ನು ಹುಡುಕುತ್ತಿದ್ದಾಳೆ, ನೀನು ಒಮ್ಮೆಯಾದರೂ ಹಿಂತಿರುಗಿ ಬರುತ್ತಿದ್ದೀಯಾ ಎಂದು ಹಾರೈಸುತ್ತಾಳೆ. ನಾನು ನಿಮಗೆ ಹೇಳಲು ಬಯಸಿದ್ದ ಹಲವು ವಿಷಯಗಳಿವೆ, ನೀವು ಇಲ್ಲಿ ಇರಬೇಕಾದ ಹಲವು ಕ್ಷಣಗಳು ಕೂಡ ಇವೆ. ಕೆಲವೊಮ್ಮೆ ನೀವು ಇನ್ನೂ ಹತ್ತಿರದಲ್ಲಿದ್ದರೆ ಜೀವನ ಹೇಗಿರುತ್ತಿತ್ತೋ ಏನೋ ಎಂದು ನಾನು ಆಶ್ಚರ್ಯ ಪಡುತ್ತೇನೆ... ನೀನು ಜೊತೆಗೆ ಇದ್ದಿದ್ದರೆ, ನಾನು ಬಹುಶಃ ಸ್ವಲ್ಪ ಮೃದುವಾಗಿರಬಹುದು, ಬಹುಶಃ ಸ್ವಲ್ಪ ಕಡಿಮೆ ಒಂಟಿತನ ಕಾಡುತ್ತಿತ್ತೋ ಏನೋ.
ನಿನ್ನ ಧ್ವನಿ, ನಿನ್ನ ಉಪಸ್ಥಿತಿ, ನೀನು ಇಲ್ಲಿದ್ದಾಗ ಎಲ್ಲವೂ ಸುರಕ್ಷಿತವಾಗಿದ್ದ ರೀತಿ ನನಗೆ ತುಂಬಾ ನೆನಪಾಗುತ್ತದೆ. ಈಗ ನಾನು ನೆನಪುಗಳನ್ನು ಮಾತ್ರ ಹಿಡಿದಿಟ್ಟುಕೊಂಡು, ಆ ನೆನಪುಗಳೇ ನನಗೆ ಸಾಕು ಎಂದು ನಟಿಸುತ್ತೇನೆ. ನೀನಿಲ್ಲದೆ 12 ವರ್ಷಗಳು... ಆದರೆ ಜೀವಮಾನವಿಡೀ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ಎಲ್ಲೇ ಇದ್ದರೂ ನನ್ನನ್ನು ನೋಡಬಹುದು ಎಂದು ನಾನು ಭಾವಿಸುತ್ತೇನೆ... ನೀನು ಕಲಿಸಿದಂತೆ ಜೀವಿಸಲು ನಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ ಎಂದು ಭಾವುಕರಾಗಿ ಮೋಕ್ಷಾ ಬರೆದುಕೊಂಡಿದ್ದಾರೆ.
‘ದುರಂತ ನಾಯಕ’ ರಘುವೀರ್
ಸ್ಟಾರ್ ನಟರ ನಡುವೆ ಚಿತ್ರರಂಗಕ್ಕೆ ‘ಅಜಯ್ ವಿಜಯ್’ ಸಿನಿಮಾ ಮೂಲಕ ಕಾಲಿಟ್ಟು, ‘ಶೃಂಗಾರ ಕಾವ್ಯ’, 'ಚೈತ್ರದ ಪ್ರೇಮಾಂಜಲಿ’ ಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ಮೌನ ಸಂಗ್ರಾಮ, ಪೂರ್ಣ ಸಂಗ್ರಾಮ, ದುರ್ಗಾ ಪೂಜೆ, ನ್ಯಾಯಕ್ಕಾಗಿ ಸವಾಲ್, ಹೊಂಗಿರಣ, ನವಿಲೂರ ನೈದಿಲೆ ಮೊದಲಾದ ಸಿನಿಮಾಗಳಲ್ಲಿ ನಟಿ ಸೋತಿದ್ದರು ರಘುವೀರ್. ಮೊದಲಿಗೆ ಸಹನಟಿಯಾಗಿದ್ದ ಸಿಂಧು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಘುವೀರ್, ಆ ಸಂಬಂಧ ಮುರಿದು ಬಿದ್ದ ಬಳಿಕ, ಗೌರಿ ಎನ್ನುವವರ ಜೊತೆ ವಿವಾಹವಾದರು. ಮನೆಯವರಿಗಾಗಿ ಸಿನಿಮಾದಿಂದಲೇ ದೂರ ಉಳಿದರು. ರಘು ವೀರ್ ಅವರಿಗೆ ಮೊದಲ ಪತ್ನಿಯಿಂದ ಶ್ರೇಯಾ ಹಾಗೂ ಎರಡನೇ ಪತ್ನಿಯಿಂದ ಮೋಕ್ಷಾ ಎನ್ನುವ ಮಗಳಿದ್ದಾರೆ. 2014ರ ಮೇ 8ರಂದು ರಘುವೀರ್ ಹೃದಯಾಘಾತದಲ್ಲಿ ನಿಧನರಾದರು.


