ರೈತರಿಂದ ನೇರವಾಗಿ ತರಕಾರಿ ಖರೀದಿಸಿ; ಅಭಿಮಾನಿಗಳಲ್ಲಿ ದರ್ಶನ್ ಮನವಿ!
ನಾವು ನಮ್ಮ ರೈತರ ಪರವಾಗಿ ನಿಲ್ಲೋಣ. ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸುವಂತೆ ನಟ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಅನೇಕ ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳಿಗೆ ಬೆಲೆ ಸಿಗದಂತ ಪರಿಸ್ಥಿತಿ ಎದುರಾಗಿದೆ. ಅವರ ಶ್ರಮಕ್ಕೆ ಸಿಗಬೇಕಾದ ಪ್ರತಿಫಲ ಸಿಗದಂತಾಗಿದೆ . ಕೋವಿಡ್-19 ಅಟ್ಟಹಾಸದಿಂದ ರೈತರ ಪಾಡು ಕೇಳದಂತಾಗಿದೆ.
ರೈತರು ಬೆಳೆದ ತರಕಾರಿಗಳು, ಹಣ್ಣುಗಳನ್ನು ಸಾಗಿಸಲು ಸಾಧ್ಯವಾಗದೆ ಇದ್ದಲ್ಲಿಯೇ ಮಾರಲು ಮುಂದಾದರೆ ಬೆಲೆ ಸಿಗದೆ ಜಮೀನಿನಲ್ಲೇ ಕೊಳೆಯುವ ಪರಿಸ್ಥಿತಿ ಎದುರಾಗಿದೆ. ಬರುವಷ್ಟು ಹಣಕ್ಕೆ ರೈತರು ಮಾರಾಟ ಮಾಡಿದರೆ ಇತ್ತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಗಗನ ಮುಟ್ಟಿದೆ. ಇಂತಹ ಪರಿಸ್ಥಿತಿ ರೈತರಿಗೆ ಎದುರಾಗಬಾರದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನ್ನದಾತನ ಬೆನ್ನೆಲುಬಾಗಿ ನಿಂತಿದ್ದಾರೆ.
'ಜವಾಬ್ದಾರಿ ಬಿಟ್ಟು ಬಿಡಿ' ಬುಲೆಟ್ ಕುಟುಂಬಕ್ಕೆ ದರ್ಶನ್ ಅಭಯ
'ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೆ ರೈತರು ತಾವು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೆ ಮಾರಾಟ ಮಾಡಲು ಮುಂದಾಗಿದ್ದು ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ.ಅವರಿಗೆ ದಕ್ಕಬೇಕಾದ ಹಣವು ಅವರ ಪಾಲಾಗಲಿ ಎಂಬುದು ನನ್ನ ಆಶಯ.ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಕಷ್ಟ ಎಂದವರಿಗೆ ಸದಾ ಸಹಾಯ ಮಾಡುತ್ತಾರೆ ದರ್ಶನ್ ಅಲ್ಲದೇ ಅವರ ಅಭಿಮಾನಿಗಳು ಕೂಡ ಅವರ ದಾರಿಯಲ್ಲೇ ಹೆಜ್ಜೆಯಿಟ್ಟಿದ್ದಾರೆ . ಕೆಲ ದಿನಗಳ ಹಿಂದೆ ನಾಗಣ್ಣ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ವಾಸವಿರುವ ಮಂಗಳ ಮುಖಿಯರ ಮನೆ ಬಾಗಿಲಿಗೆ ಹೋಗಿ ದಿನಸಿ ಸಾಮಾನುಗಳನ್ನು ನೀಡಿದ್ದಾರೆ ಹಾಗೂ ಮೈಸೂರಿನಲ್ಲಿ ಕಲ್ಯಾಣ ಮಂಟಪ ಖರೀದಿಸಿ ನಿರ್ಗತಿಕರಿಗೆ ದಿನವೂ ಆಹಾರ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.