ಇದು ನನ್ನ ಮತ್ತೊಂದು ಅಧ್ಯಾಯ: ಆದಿತ್ಯ
ಆದಿತ್ಯ ನಟನೆಯ, ಬಾಲು ನಿರ್ದೇಶನದ ‘ಮುಂದುವರಿದ ಅಧ್ಯಾಯ’ ಸಿನಿಮಾ ಇದೇ ಮಾ.18ರಂದು ಬಿಡುಗಡೆಯಾಗುತ್ತಿದೆ. ತುಂಬಾ ದಿನಗಳ ನಂತರ ತೆರೆ ಮೇಲೆ ರಾರಾಜಿಸಲು ಹೊರಟಿರುವ ಆದಿತ್ಯ ಅವರನ್ನು ಈ ಚಿತ್ರದಲ್ಲಿ ಪೊಲೀಸ್ ಗೆಟಪ್ನಲ್ಲಿ ನೋಡಬಹುದು.
ಸಿನಿಮಾ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ‘ತುಂಬಾ ದಿನಗಳ ನಂತರ ನನ್ನ ಅಭಿನಯದ ಸಿನಿಮಾ ತೆರೆ ಮೇಲೆ ಬರುತ್ತಿದೆ. ನನ್ನ ಕೆರಿಯರ್ನಲ್ಲಿ ಇದೊಂದು ವಿಭಿನ್ನ ರೀತಿಯ ಸಿನಿಮಾ ಆಗಲಿದೆ. ಕಮರ್ಷಿಯಲ್ ಸಿನಿಮಾ ಎನ್ನುವ ಜತೆಗೆ ಹೊಸತನದಿಂದ ಕೂಡಿದ ವಿಭಿನ್ನ ಪ್ರಯೋಗಾತ್ಮಕ ಸಿನಿಮಾ. ಆ್ಯಕ್ಷನ್, ಥ್ರಿಲ್ಲರ್ನಿಂದ ಕೂಡಿದ ಈ ಚಿತ್ರದಲ್ಲಿ ರೌಡಿಸಂ, ಸಮಾಜ ಹಾಗೂ ಜನ ಈ ಮೂರನ್ನು ಪ್ರಧಾನ ಅಂಶಗಳನ್ನಾಗಿ ತೋರಿಸಲಾಗಿದೆ.
ಐ ಆ್ಯಮ್ Back: ಅದಿತ್ಯ ಅಧ್ಯಾಯ ಮುಂದುವರೆದಿದೆ!
ಕೆಟ್ಟದ್ದನ್ನು ನಿಯಂತ್ರಿಸಲು ಯಾರಿಂದ ಸಾಧ್ಯ, ಯಾರು ಬದಲಾಗಬೇಕು ಎನ್ನುವ ವಿಚಾರ ಚಿತ್ರದಲ್ಲಿದೆ. ಹಾಗೆ ನೋಡಿದರೆ ನನ್ನ ಜೀವನದ ಮತ್ತೊಂದು ಅಧ್ಯಾಯ ಇದು ಎನ್ನಬಹುದು. ಶಿವರಾತ್ರಿಯ ದಿನ ಒಬ್ಬರು ಕಾಣೆ ಆಗುತ್ತಾರೆ, ಅದೇ ಸಮಯಕ್ಕೆ ಮತ್ತೊಬ್ಬರ ಕೊಲೆಯಾಗುತ್ತದೆ. ಈ ಎರಡೂ ಘಟನೆಗಳು ಹೇಗಾಗುತ್ತವೆ ಎಂಬುದೇ ಚಿತ್ರದ ಕತೆ’ ಎಂದರು ಆದಿತ್ಯ.
ದರ್ಶನ್-ಸುದೀಪ್ ವಾರ್ ಬಗ್ಗೆ ನಟ ಆದಿತ್ಯ ಕೊಟ್ಟ ಪ್ರತಿಕ್ರಿಯೆ ಇದು!
ನಿರ್ದೇಶಕ ಬಾಲು ಚಿತ್ರದಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿಗಳನ್ನು ಪರಿಚಯ ಮಾಡಿಸಿದರು. ಶಾಸಕನ ಪಾತ್ರದಲ್ಲಿ ವಿನಯ್ ಕೃಷ್ಣಸ್ವಾಮಿ, ಪೊಲೀಸ್ ಪಾತ್ರ ಮಾಡಿರುವ ವಿನೋದ್, ಪತ್ರಕರ್ತೆಯಾಗಿ ಆಶಿಕಾ ಸೋಮಶೇಖರ್, ಡಾಕ್ಟರ್ ಆಗಿ ಚಂದನಾಗೌಡ, ರೆಸ್ಟೋರೆಂಟ್ ಮಾಲೀಕನ ಪಾತ್ರದಲ್ಲಿ ಸಂದೀಪ್ ಕುಮಾರ್, ಅಜಯ್ ರಾಜ್, ಜೈ ಜಗದೀಶ್ ಹಾಗೂ ಮುಖ್ಯಮಂತ್ರಿ ಚಂದ್ರು ನಟಿಸಿದ್ದಾರೆ. ‘ಕತೆ ಹೇಳುವಾಗಲೇ ನಟ ಆದಿತ್ಯ ಅವರು ಕತೆ ಹೊಸದಾಗಿದೆ ಎಂದರು. ಇಡೀ ಸಿನಿಮಾ ಉತ್ಸಾಹದಿಂದ ಮಾಡುವುದಕ್ಕೆ ಈ ಮೆಚ್ಚುಗೆಯ ಕಾರಣವಾಯಿತು. ಮಾ.18ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ. ಒಳ್ಳೆಯ ಚಿತ್ರಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಇರುತ್ತದೆಂದು ನಂಬಿಕೆ ಇದೆ’ ಎಂದರು ಬಾಲು. ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಜಾನಿ- ನಿತಿನ್ ಅವರ ಸಂಗೀತ ನಿರ್ದೇಶನವಿದೆ.