ಬೇರೆಯವರಿಗೆ ಒಳ್ಳೆಯದು ಮಾಡಲು ಹೋಗಿ, ಸಮಸ್ಯೆ ತಂದುಕೊಂಡ ಈ ಜೋಡಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಫೇಮಸ್.
ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡ ಈ ಜೋಡಿ ಒಂದಾಗಿ ಬಾಳುತ್ತಿದೆ, ಅಷ್ಟೇ ಅಲ್ಲದೆ ಜನರಿಗೆ ಉಪಯುಕ್ತ ಮಾಹಿತಿಯನ್ನು ಕೂಡ ನೀಡುತ್ತಿದ್ದಾರೆ. ಹಾಗೆಯೇ ಬೇರೆಯವರಿಗೆ ಒಳ್ಳೆಯದು ಮಾಡೋಕೆ ಹೋಗಿ ಕಂಪೆನಿಯಿಂದ ನೋಟೀಸ್ ಪಡೆದುಕೊಂಡರು, ಕೇಸ್ ಕೂಡ ಫೈಲ್ ಆಯ್ತು. ಹೌದು, ಇದು ತಾರೇಶ್, ಸ್ವಾತಿಯ ಕಥೆ. ʼನ್ಯೂಸೋ ನ್ಯೂಸುʼ ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ಜೋಡಿ ಈ ಬಗ್ಗೆ ಮಾಹಿತಿ ನೀಡಿದೆ.
ಕೇಸ್ ಯಾಕೆ ದಾಖಲಾಯ್ತು?
ತಾರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ, ವಿವಿಧ ರಂಗದಲ್ಲಿರುವ ಜಾಬ್ ಬಗ್ಗೆ ಮಾಹಿತಿ ಕೊಡುತ್ತಾರೆ. ಇದನ್ನು ನೋಡಿ ತಾರೇಶ್ ಕೆಲಸ ಮಾಡುತ್ತಿದ್ದ ಕಂಪೆನಿ ಅವರು “ನಮ್ಮ ಕಂಪೆನಿಯಲ್ಲಿದ್ದವರು ಬೇರೆ ಕಡೆ ಜಾಬ್ ಇದೆ ಅಂತ ಮಾಹಿತಿ ಕೊಡಬಾರದು, ಇದು ಕಂಪೆನಿ ನಿಯಮದ ವಿರುದ್ಧ” ಎಂದು ನೋಟಿಸ್ ನೀಡಿದ್ದರಂತೆ. ಇನ್ನು ಕೋಚಿಂಗ್ ಕ್ಲಾಸ್ಗೆ ಸೇರಿಕೊಂಡಿದ್ದ ತಾರೇಶ್ ಅವರು ಅಲ್ಲಿನ ರಿಯಾಲಿಟಿ ಹೇಳಿದ್ದಕ್ಕೆ ಅವರ ವಿರುದ್ಧ ಕೇಸ್ ದಾಖಲಿಸಿದ್ದರು.
ಕೆಲಸ ಸಿಗಲಿ ಅಂತ ಹರಕೆ
ತನ್ನಿಂದ ಜಾಬ್ ಮಾಹಿತಿ ತಿಳಿದವರಿಗೆ ಸಹಾಯ ಆಗಲಿ ಅಂತ ಇವರು ಬೇರೆಯವರ ಸಲುವಾಗಿ ಚಾಮುಂಡಿ ಬೆಟ್ಟ ಹತ್ತಿದ್ದರಂತೆ, ನೆಲದ ಮೇಲೆ ಕೂಡ ಊಟ ಮಾಡಿದ್ದರಂತೆ. “ನಾನು ಸೋಶಿಯಲ್ ಮೀಡಿಯಾದಲ್ಲಿ ವೆರಿಫೈ ಮಾಡಿ ಜಾಬ್ ಇದೆ ಅಂತ ಹೇಳ್ತಿದೀನಿ, ಭಾರತದಲ್ಲಿ ಇರೋರೆಲ್ಲರೂ ಜಾಬ್ ಅಪ್ಲೈ ಮಾಡ್ತಾರೆ, ಅವರಲ್ಲಿ ಪ್ರತಿಭಾನ್ವಿತರಿಗೆ ಮಾತ್ರ ಕೆಲಸ ಸಿಗುತ್ತದೆ ಎನ್ನೋದು ಗೊತ್ತಿದೆ. ನನ್ನಿಂದ ಮಾಹಿತಿ ತಿಳಿದವರಿಗೆ ಕೆಲಸ ಸಿಗಲಿ ಅಂತ ಈ ರೀತಿ ಮಾಡಿದ್ದೆ” ಎಂದು ತಾರೇಶ್ ಅವರು ಹೇಳಿದ್ದಾರೆ.
ದೇವಸ್ಥಾನದಲ್ಲಿ ಮದುವೆಯಾಯ್ತು!
ಪಿಯುಸಿಯಲ್ಲಿದ್ದಾಗಲೇ ತಾರೇಶ್ ಹಾಗೂ ಸ್ವಾತಿ ಪರಿಚಯ ಆಗಿತ್ತು. ಆಮೇಲೆ ಇವರಿಬ್ಬರು ಪ್ರೀತಿಸಿದ್ದರು, ಸ್ವಾತಿ ಮನೆಯವರಿಂದ ವಿರೋಧ ಬಂದಿದ್ದಕ್ಕೆ ಇವರಿಬ್ಬರು ದೇವಸ್ಥಾನದಲ್ಲಿ ಮದುವೆಯಾದರು. ಇನ್ನೂ ಸ್ವಾತಿ ಮನೆಯವರು ಈ ಮದುವೆಯನ್ನು ಒಪ್ಪಿಲ್ಲ, ಅಪ್ಪ-ಅಮ್ಮ ಮಾತು ಕೂಡ ಆಡೋದಿಲ್ವಂತೆ.
ತಾರೇಶ್ ಅವರು ಈಗ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ, ಈ ಕೆಲಸ ಮಾಡೋದು ಅವರಿಗೆ ಸುಲಭ ಇರಲಿಲ್ಲ. ಸಾಕಷ್ಟು ಕಡೆ ತಾರೇಶ್ ಅವರು ಕೆಲಸಕ್ಕೆ ಅಪ್ಲೈ ಮಾಡಿದ್ದರೂ ಕೂಡ ಆಗಿರಲಿಲ್ಲ, ಆಮೇಲೆ ಕೊಯಂಬತ್ತೂರಿನಲ್ಲಿ ಕೆಲಸ ಆಗಿತ್ತು.

