ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಪಕ್ಷಕ್ಕೆ ಫಂಡಿಂಗ್ ಮಾಡಿದ್ದಾರೆ ಎಂಬ ಆರೋಪವನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್ ತಳ್ಳಿಹಾಕಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಕಾರಣ ಜನರು ಎಸ್‌ಡಿಪಿಐಗೆ ಮತ ಹಾಕಿದ್ದಾರೆ ಎಂದರು.

ಮಂಗಳೂರು (ಏ.15): ಸಚಿವ ಜಮೀರ್‌ ಅಹ್ಮದ್‌ ಖಾನ್‌ ಒಂದು ರಾಜಕೀಯ ಪಕ್ಷದ ಮಂತ್ರಿ ಆಗಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಯಾಕೆ ಫಂಡಿಂಗ್‌ ಮಾಡುತ್ತಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಪ್ರಶ್ನಿಸಿದ್ದಾರೆ. 

Add Asianetnews Kannada as a Preferred SourcegooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಜೀದ್‌ಗೆ ಪತ್ರಕರ್ತರು ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಎಸ್‌ಡಿಪಿಐಗೆ ಸಚಿವ ಜಮೀರ್ ಫಂಡಿಂಗ್ ಮಾಡಿದ ಆರೋಪ‌ದ ಕುರಿತ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಕ್ರೌಡ್ ಫಂಡಿಂಗ್ ಮೂಲಕ ಚುನಾವಣೆ ಎದುರಿಸೋದು. ಜನ ನಮಗೆ ನೋಟು ಕೊಟ್ಟಿದ್ದಾರೆ, ಓಟು ಕೊಟ್ಟಿದ್ದಾರೆ. ವ್ಯಕ್ತಿಯೊಬ್ಬರಿಂದ ಫಂಡಿಂಗ್ ತೆಗೆದುಕೊಳ್ಳುವ ವ್ಯವಸ್ಥೆ ನಮ್ಮಲ್ಲಿಲ್ಲ‌ ಎಂದರು.

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.38ರಷ್ಟು ಮುಸ್ಲಿಮ್‌ ಜನಸಂಖ್ಯೆ ಇದ್ದು, ಮುಸ್ಲಿಮರಿಗೆ ಟಿಕೆಟ್‌ ನೀಡುವ ಒತ್ತಾಯ ಕೇಳಿ ಬಂದಿದ್ದರೂ ಇತರ ಪಕ್ಷಗಳು ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿಲ್ಲ. ಆ ಕಾರಣಕ್ಕೆ ಕಾಂಗ್ರೆಸ್‌ ವಿರುದ್ಧ, ಎಸ್‌ಡಿಪಿಐ ಪರವಾಗಿ ಜನರು ಮತ ಹಾಕಿದ್ದಾರೆ. ಕಾಂಗ್ರೆಸ್‌ಗೆ ಸೋಲಿನ ಭೀತಿ ಆವರಿಸಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ತಕ್ಷಣ ತಾಪಂ, ಜಿಪಂ ಚುನಾವಣೆ ನಡೆಸಬೇಕು. ಕೇಂದ್ರ ಸರ್ಕಾರ ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಅನುದಾನ ತರಲು ಸಾಧ್ಯವಾಗದ 28 ಸಂಸದರು ರಾಜ್ಯದ ಜನರ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.