Asianet Suvarna News Asianet Suvarna News

ಧಾರವಾಡ: ನಾಲ್ಕು ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್‌? ಭಿನ್ನಮತದಿಂದ ಕಂಗೆಟ್ಟ ಕಾಂಗ್ರೆಸ್!

  • ನಾಲ್ಕು ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್‌?
  • ಕಲಘಟಗಿ, ಗ್ರಾಮೀಣದಲ್ಲಿನ ಭಿನ್ನಮತದಿಂದ ಕಂಗೆಟ್ಟಕಾಂಗ್ರೆಸ್‌
  • ಪಶ್ಚಿಮ, ಸೆಂಟ್ರಲ್‌, ನವಲಗುಂದ, ಕುಂದಗೋಳ ಇನ್ನಷ್ಟುಬಿಕ್ಕಟ್ಟು
  • ಭಿನ್ನಮತವಾದರೆ ಎದುರಿಸುವುದ್ಹೇಗೆ?: ಲೆಕ್ಕಾಚಾರದಲ್ಲಿ ಕೆಪಿಸಿಸಿ
Who has tickets for four constituencies at dharawad rural constituency rav
Author
First Published Apr 8, 2023, 8:17 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ (ಏ.8) : ಕಾಂಗ್ರೆಸ್‌ ಟಿಕೆಟ್‌ ಅಂತಿಮಗೊಳಿಸಿ ಪ್ರಕಟಿಸಿರುವ ಮೂರು ಕ್ಷೇತ್ರಗಳ ಪೈಕಿ ಧಾರವಾಡ ಗ್ರಾಮೀಣ, ಕಲಘಟಗಿ ಕ್ಷೇತ್ರಗಳಲ್ಲಿ ಭಿನ್ನಮತ ತಾರಕ್ಕೇರಿದೆ. ಇಲ್ಲಿನ ಆಕಾಂಕ್ಷಿಗಳೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಅವರ ಬೆಂಬಲಿಗರು ರಾಜೀನಾಮೆ ಕೊಡಲು ಮುಂದಾಗಿರುವುದು ಪಕ್ಷವನ್ನು ಕಂಗೆಡಿಸಿದೆ. ಇದು ಇನ್ನುಳಿದ ನಾಲ್ಕು ಕ್ಷೇತ್ರಗಳ ಟಿಕೆಟ್‌ ಘೋಷಣೆಯ ಮೇಲೂ ಪರಿಣಾಮ ಬೀರುತ್ತಿದೆ.

ಕೆಪಿಸಿಸಿ(KPCC) 3 ಅಭ್ಯರ್ಥಿ ಅಖೈರುಗೊಳಿಸಿ ಬಿಡುಗಡೆಗೊಳಿಸಿರುವ ಪಟ್ಟಿಯಿಂದ ‘ಕೈ’ ಸುಡುವಂತಾಗಿದೆ. ಕಲಘಟಗಿಯ ನಾಗರಾಜ ಛಬ್ಬಿ ಹಾಗೂ ಅವರ ಬೆಂಬಲಿಗರು, ಧಾರವಾಡ ಗ್ರಾಮೀಣ ಕ್ಷೇತ್ರ(Dharwad rural constituency)ದ ಇಸ್ಮಾಯಿಲ್‌ ತಮಟಗಾರ, ಅವರ ಬೆಂಬಲಿಗರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದು ಪಕ್ಷದ ವರಿಷ್ಠರ ನಿದ್ದೆಗೆಡಿಸಿದೆ. ಇದರ ಪರಿಣಾಮವೀಗ ನವಲಗುಂದ, ಕುಂದಗೋಳ, ಅತ್ತ ಧಾರವಾಡ ಪಶ್ಚಿಮ, ಇತ್ತ ಸೆಂಟ್ರಲ್‌ ಕ್ಷೇತ್ರದ ಮೇಲೂ ಪ್ರಭಾವ ಬೀರುವ ಲಕ್ಷಣಗಳು ದಟ್ಟವಾಗುತ್ತಿದೆ.

'ಮನೆ ಮುಂದೆ ರಾಜಕಾರಣಿಗಳಿಗೆ ಪ್ರವೇಶ ಇಲ್ಲ'ಗೇಟಿಗೆ ಬ್ಯಾನರ್‌ ಹಾಕಿದ ಮತದಾರ!

ಮುಸ್ಲಿಂ; ಕುರುಬ:

ಈಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕುರುಬ ಸಮುದಾಯ(Kuruba community)ದವರೂ ಇಲ್ಲ. ಮುಸ್ಲಿಂ ಕೂಡ ಇಲ್ಲ. ಈ ಎರಡು ಸಮುದಾಯಗಳಿಗೆ ತಲಾ 1 ಕ್ಷೇತ್ರಕ್ಕಾದರೂ ಕೊಡಲೇ ಬೇಕು ಎಂಬುದು ಕಾಂಗ್ರೆಸ್‌ನ ಅಘೋಷಿತ ನಿಯಮ. ಸೆಂಟ್ರಲ್‌ ಅಥವಾ ಪಶ್ಚಿಮ ಕ್ಷೇತ್ರಗಳ ಪೈಕಿ ಒಂದರಲ್ಲಿ ಮುಸ್ಲಿಂಗೆ ಕೊಡಬೇಕೆಂಬ ಚಿಂತನೆ ಪಕ್ಷದ್ದು. ಯಾವ ಕ್ಷೇತ್ರಕ್ಕೆ ಕೊಡಬೇಕು. ಯಾರಿಗೆ ಕೊಟ್ಟರೆ ಭಿನ್ನಮತ ಎದುರಾಗಲ್ಲ ಎಂಬ ಯೋಚನೆ ಕೆಪಿಸಿಸಿಯಲ್ಲಿ ನಡೆಯುತ್ತಿದೆ. ಹಾಗೆ ನೋಡಿದರೆ ನಾಲ್ಕೈದು ಜನ ಮುಸ್ಲಿಂ ಸಮುದಾಯದವರು ಸೆಂಟ್ರಲ್‌ ಕ್ಷೇತ್ರಕ್ಕೆ ಟಿಕೆಟ್‌ ಕೇಳಿದ್ದಾರೆ. ಆದರೆ ಪ್ರಬಲವಾಗಿ ಯೂಸೂಫ್‌ ಸವಣೂರು, ಶಾಕೀರ ಸನದಿ ಹೆಸರು ಕೇಳಿ ಬರುತ್ತಿವೆ. ಈ ಪೈಕಿ ಒಬ್ಬರಿಗೆ ಟಿಕೆಟ್‌ ಕೊಡುವ ಕುರಿತು ಚಿಂತನೆ ನಡೆದಿದೆ. ಹಾಗೊಂದು ವೇಳೆ ಸೆಂಟ್ರಲ್‌ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯದವರಿಗೆ ಕೊಟ್ಟರೆ ಅತ್ತ ಪಶ್ಚಿಮಕ್ಕೆ ಲಿಂಗಾಯತ ಸಮುದಾಯದವರಿಗೆ ಕೊಡಬಹುದು. ಆದರೆ ಅಲ್ಲಿ ಲಿಂಗಾಯತ ಸಮುದಾಯದ ಲಿಂಭಿಕಾಯಿಗೆ ಕೊಟ್ಟರೂ ಭಿನ್ನಮತ ಖಚಿತ. ಲಿಂಗಾಯತ ಸಮುದಾಯವನ್ನೇ ಬಿಟ್ಟು ಪಶ್ಚಿಮಕ್ಕೆ ಮುಸ್ಲಿಂ ಸಮುದಾಯಕ್ಕೆ ಕೊಟ್ಟರೆ ಹೇಗೆ? ಎಂಬ ಬಗ್ಗೆಯೂ ಚಿಂತನೆ ನಡೆದಿದೆ. ಆಗ ಸೆಂಟ್ರಲ್‌ ಕ್ಷೇತ್ರದಲ್ಲಿ ಲಿಂಗಾಯತಕ್ಕೆ ಕೊಡಬೇಕಾಗುತ್ತದೆ. ಆಗಲೂ ಅಸಮಾಧಾನದ ಹೊಗೆ ಏಳುವುದು ಗ್ಯಾರಂಟಿ.

ಇನ್ನು ಕುಂದಗೋಳ- ನವಲಗುಂದ ಕಥೆಯೂ ಇದೇ ರೀತಿ. ಈ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಕುರುಬ ಸಮುದಾಯಕ್ಕೆ ಕೊಡಬೇಕು. ಕುಂದಗೋಳದಲ್ಲಿ ಕುರುಬ ಸಮುದಾಯದ ಶಿವಳ್ಳಿ ಕುಟುಂಬಕ್ಕೆ ಟಿಕೆಟ್‌ ಕೊಡಬೇಕೆಂದರೆ ಅಲ್ಲಿ ಈಗಲೇ ಬಂಡಾಯದ ಎಚ್ಚರಿಕೆ ಕೇಳಿ ಬಂದಿದೆ. ಹೀಗಾಗಿ ಇವರ ಬದಲಿಗೆ ಲಿಂಗಾಯತ ಸಮುದಾಯಕ್ಕೆ ನೀಡಿದರೆ, ಇತ್ತ ನವಲಗುಂದದಲ್ಲಿ ಕುರುಬ ಸಮುದಾಯದ ವಿನೋದ ಅಸೂಟಿಗೆ ಟಿಕೆಟ್‌ ನೀಡಬೇಕಾಗುತ್ತದೆ. ಆಗ ಸಹಜವಾಗಿ ಕೋನರಡ್ಡಿ ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಳ್ಳುತ್ತಾರೆ. ಇನ್ನು ಇಲ್ಲಿ ಕೋನರಡ್ಡಿಗೆ ಕೊಟ್ಟರೆ, ಅತ್ತ ಶಿವಳ್ಳಿ ಕುಟುಂಬಕ್ಕೆ ಕೊಡಲೇಬೇಕಾಗುತ್ತದೆ. ಆಗಲೂ 2 ಕ್ಷೇತ್ರದಲ್ಲಿ ಭಿನ್ನಮತ ಖಚಿತ ಎಂದು ಹೇಳಲಾಗುತ್ತಿದೆ.

ವೀಸಾ ಕೊಡಿಸುವುದಾಗಿ ₹50 ಲಕ್ಷ ರು. ಅಧಿಕ ವಂಚನೆ: ಆರೋಪಿ ಸುಧೀರ್ ರಾವ್ ಬಂಧನ

ಹೀಗೆ ಎಷ್ಟೇ ಲೆಕ್ಕಾಚಾರ ಹಾಕಿದರೂ ಅಭ್ಯರ್ಥಿಗಳನ್ನು ಅಂತೀಮಗೊಳಿಸುವುದು ಹೈಕಮಾಂಡ್‌ಗೆ ದೊಡ್ಡ ತಲೆನೋವಾದಂತಾಗಿರುವುದಂತೂ ಸತ್ಯ. ಜತೆಗೆ ಈಗಲೇ ಎದುರಾಗಿರುವ ಕಲಘಟಗಿ ಹಾಗೂ ಧಾರವಾಡ ಗ್ರಾಮೀಣದಲ್ಲಿನ ಭಿನ್ನಮತವನ್ನೇ ನಿಭಾಯಿಸುವುದ್ಹೇಗೆ ಎಂಬ ಚಿಂತೆ ಶುರುವಾಗಿದೆ. ಹೀಗಾಗಿ, ಈ ನಾಲ್ಕು ಕ್ಷೇತ್ರಗಳಿಗೆ ಇನ್ನು ಸ್ವಲ್ಪ ದಿನ ಕಳೆದ ಮೇಲೆಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios