ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ದೌರ್ಜನ್ಯದ ಬಗ್ಗೆ ಸರ್ಕಾರ ಯಾಕೆ ಸುಮ್ಮನಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ದೌರ್ಜನ್ಯದ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ(Priyanka gandhi Vadra) ಅವರು ವಾಗ್ದಾಳಿ ನಡೆಸಿದರು.
ಬುಧವಾರ ಮಾಧ್ಯಮಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಯನ್ನು ಸರ್ಕಾರ ಇದುವರೆಗೂ ಈಡೇರಿಸಿಲ್ಲ. ಜನರಿಗೆ ಉತ್ತರ ಕೊಡಬೇಕಾದ ಜವಾಬ್ದಾರಿ ಸರ್ಕಾರಕ್ಕಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಸಂಸತ್ತು ಎಂಬುದು ಸರ್ಕಾರದ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಮತ್ತು ಹೇಳಿಕೆಗಳನ್ನು ನೀಡಬೇಕಾದ ವೇದಿಕೆ. ಆದರೆ ಅಮಿತ್ ಶಾ ಉತ್ತರಿಸುತ್ತಿಲ್ಲ ಈ ಸರ್ಕಾರ ಮೌನವಾಗಿದೆ ಎಂದು ಪ್ರಿಯಾಂಕಾ ಕಿಡಿಕಾರಿದರು.
ಪೊಲೀಸ್ ದೌರ್ಜನ್ಯದ ಬಗ್ಗೆ ಅಮಿತ್ ಷಾ ಏನು ಹೇಳ್ತಾರೆ?
ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಮಾತನಾಡಿದ ಪ್ರಿಯಾಂಕಾ, ದೆಹಲಿಯಲ್ಲಿ ಮಾತ್ರವಲ್ಲ, ದೇಶದ ಹಲವು ನಗರಗಳಲ್ಲಿ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ, ಗುಂಡು ಹಾರಿಸಿದ್ದಾರೆ. ಯಾಕೆ ಹೀಗಾಯ್ತು? ಅಂತ ಸರ್ಕಾರ ಉತ್ತರ ಕೊಡಬೇಕಲ್ಲವೇ? ಎಂದು ಪ್ರಶ್ನಿಸಿದರು.
ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಮತ್ತು ಪೆಲ್ಲೆಟ್ ಗನ್ಗಳನ್ನು ಬಳಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು. ಅಷ್ಟೇ ಅಲ್ಲ, ಬಿಹಾರದಲ್ಲಿ ಪ್ರತಿಭಟನಾಕಾರರ ವಿರುದ್ಧ ಎಕೆ-47 ರೈಫಲ್ ಬಳಸಲಾಗಿದೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಮತ್ತು ಸರ್ಕಾರ ಉತ್ತರಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ, ವಿಪಕ್ಷಗಳೇ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಸರ್ಕಾರ ಪ್ರತ್ಯಾರೋಪ ಮಾಡುತ್ತಿದೆ.
ರಾಮ ಮಂದಿರ ದೇಣಿಗೆ ಬಗ್ಗೆಯೂ ಸರ್ಕಾರದ ನಿಲುವಿಗೆ ಟೀಕೆ
ಇದೇ ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿದ ದೇಣಿಗೆಯ ಬಗ್ಗೆಯೂ ಪ್ರಿಯಾಂಕಾ ಗಾಂಧಿ ಪ್ರಶ್ನೆ ಎತ್ತಿದ್ದಾರೆ. ದೇಶದ ಜನರೆಲ್ಲಾ ಶ್ರದ್ಧೆ ಭಕ್ತಿಯಿಂದ ಮಂದಿರ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಭಾರತದ ಹೊರಗಿರುವವರೂ ಇದಕ್ಕೆ ಬೆಂಬಲ ನೀಡಿದ್ದಾರೆ. ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್ನಂತಹ ದೇಶಗಳನ್ನು ಉಲ್ಲೇಖಿಸಿ ರಾಮ ಮಂದಿರ ವಿಚಾರದ ಮಹತ್ವವನ್ನು ವಿವರಿಸಿದರು. ಮಂದಿರಕ್ಕೆ ಸಂಬಂಧಿಸಿದ ವಿಷಯಗಳು ಈಗ ಕೇವಲ ರಾಜ್ಯ ಸರ್ಕಾರಕ್ಕೆ ಸೇರಿದ್ದು ಎಂಬ ವಾದವನ್ನು ಅವರು ಪ್ರಶ್ನಿಸಿದರು. ಚುನಾವಣೆ ಬಂದಾಗ ದೇಶಾದ್ಯಂತ ಅಭಿಯಾನ ಮಾಡ್ತೀರಿ, ಆಗ ಇದು ರಾಜ್ಯದ ವಿಷಯ ಆಗಿರಲಿಲ್ಲವೇ? ಈಗ ಮಾತ್ರ ಇದು ರಾಜ್ಯ ಸರ್ಕಾರದ ವಿಷಯ ಹೇಗಾಯ್ತು? ಪ್ರಧಾನಿ ನರೇಂದ್ರ ಮೋದಿಯವರೇ ಮಂದಿರವನ್ನು ಉದ್ಘಾಟಿಸಿದ್ದಾರೆ ಮತ್ತು ದೇಶದ ಮೂಲೆ ಮೂಲೆಯಿಂದ ಜನರು ಅಯೋಧ್ಯೆಗೆ ಬಂದಿದ್ದಾರೆ. ವಿಪಕ್ಷಗಳು ಸಂಸತ್ತಿನಲ್ಲಿ ಸರ್ಕಾರದ ಉತ್ತರಕ್ಕಾಗಿ ಒತ್ತಾಯಿಸುತ್ತಲೇ ಇದ್ದರೆ, ಚರ್ಚೆಗೆ ವಿಪಕ್ಷಗಳೇ ಅಡ್ಡಿಪಡಿಸುತ್ತಿವೆ ಎಂದು ಸರ್ಕಾರ ಆರೋಪಿಸುತ್ತಿದೆ ಎಂದು ಕಿಡಿಕಾರಿದರು.


