ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಜಲ್ಮುರಿ ಸವಿದಿದ್ದು ನಾಟಕ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ, ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದು ವೈರಲ್ ಆಗಿದ್ದು, ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ವಿಧಾನಸಭೆಯ ಚುನಾವಣೆ ಭಾರಿ ರಂಗೇರಿದೆ. ನಾಳೆ ಅರ್ಥಾತ್ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಈ ಚುನಾವಣೆ ನಡೆಯಲಿದೆ. ಇದೇ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಪ್ರಚಾರದಲ್ಲಿ ತೊಡಗಿದ್ದಾರೆ. ಹೇಗಾದರೂ ಮಾಡಿ ಈ ಬಾರಿ ದೀದೀ ಆಡಳಿತಕ್ಕೆ ತಿಲಾಂಜಲಿ ಇತ್ತು, ಮೋದಿ ಆಡಳಿತ ತರಬೇಕು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇದರ ನಡುವೆಯೇ, ಮೊನ್ನೆ ಪ್ರಧಾನಿ ಅಲ್ಲಿಯ ಚಿಕ್ಕ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು 10 ರೂಪಾಯಿಗಳ ಜಲ್ಮುರಿ ಖರೀದಿ ಮಾಡಿದರು, ಅದನ್ನು ಸವಿದು ಅಲ್ಲಿದ್ದವರಿಗೆ ಹಂಚಿದರು.
ಸೋಷಿಯಲ್ ಮೀಡಿಯಾದಲ್ಲಿ ಸದ್ದು
ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೋದಿ ಅವರಿಂದ ನಾಟಕ ಎಂದು ವಿರೋಧಿಗಳು ಕಮೆಂಟ್ಸ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಪ್ರಧಾನಿಯಾಗಲೀ, ಯಾವುದೇ ರಾಜ್ಯಗಳ ಮುಖ್ಯಮಂತ್ರಿಯಾಗಲಿ, ಯಾವುದೇ ಸಚಿವರಾಗಲೀ ಹೀಗೆ ಏಕಾಏಕಿ ಯಾವುದೋ ಅಂಗಡಿಗೆ ಹೋಗಿ ಹೀಗೆಲ್ಲಾ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇಂಥದ್ದೊಂದು ಚಟುವಟಿಕೆ ನಡೆಸುವ ಮುನ್ನ ಸಿಕ್ಕಾಪಟ್ಟೆ ಪ್ರೊಟೋಕಾಲ್ ಇರುತ್ತದೆ. ಅದರಲ್ಲಿಯೂ ಪ್ರಧಾನಿಯಾದವರನ್ನು ಮುಗಿಸಲು ನಮ್ಮದೇ ದೇಶದಲ್ಲಿ ಹೊಂಚು ಹಾಕಿ ಕುಳಿತಿರುವವರೇ ಇರುವಾಗ, ಹೀಗೆಲ್ಲಾ ಸಾರ್ವಜನಿಕವಾಗಿ ಕಂಡಕಂಡಲ್ಲಿ ಸಾಮಾನ್ಯ ಜನರಂತೆ ಹೋಗಿ ತಿನ್ನಲು ಆಗುವುದೇ ಇಲ್ಲ. ಅವರು ತಿನ್ನುವ ಪ್ರತಿಯೊಂದು ಆಹಾರವನ್ನೂ ಮೊದಲು ಬೇರೆಯವರು ಟೇಸ್ಟ್ ಮಾಡಿರುತ್ತಾರೆ. ಅದೇ ರೀತಿ ಇಲ್ಲಿ ಚುರುಮುರಿ ತಿನ್ನುವ ಮೊದಲೂ ಸಿಕ್ಕಾಪಟ್ಟೆ ಪ್ರೊಟೋಕಾಲ್ ನಡೆದಿರುತ್ತದೆ.
ಸಿಎಂ-ಪಿಎಂ ಎಲ್ಲರಿಗೂ ಅಷ್ಟೇ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಬೇರೆ ಕಡೆ ಹೋದರೂ ಅಷ್ಟೇ, ಇನ್ನಾವುದೋ ರಾಜಕೀಯ ಧುರೀಣರು ಹೋದರೂ ಅಷ್ಟೇ. ಇವೆಲ್ಲಾ ಮಾಮೂಲು. ಪ್ರತಿಯೊಬ್ಬರಿಗೆ ಪ್ರೊಟೋಕಾಲ್ ಇದ್ದೇ ಇರುತ್ತದೆ. ಆದರೆ ಮೋದಿ ಅವರು ಮಾಡಿದ್ದೆಲ್ಲಾ ಆಕಸ್ಮಿಕ ಎಂದು ಜನರು ಇದನ್ನೆಲ್ಲಾ ನಂಬಿ ಬಿಡುತ್ತಾರೆ ಎನ್ನುವ ಕಾರಣಕ್ಕೆ ಮಮತಾ ಬ್ಯಾನರ್ಜಿ ಕೆಂಡಾಮಂಡಲವಾಗಿದ್ದಾರೆ. ಇವೆಲ್ಲಾ ನಾಟಕ ಎಂದು ಹೇಳಿದ್ದಾರೆ. ತಮ್ಮ ಅಬ್ಬರದ ಭಾಷಣದಲ್ಲಿ ಇದನ್ನು ಅವರು ತಿಳಿಸಿದ್ದಾರೆ.
ಭರ್ಜರಿ ಡಾನ್ಸ್
ಆದರೆ ಅದರ ನಡುವೆಯೇ, ಮಮತಾ ಬ್ಯಾನರ್ಜಿ ಅವರ ಭರ್ಜರಿ ಡಾನ್ಸ್ ಈಗ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ಕೂಚ್ ಬೆಹರ್ನಲ್ಲಿ ನಡೆದ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ ಅಲ್ಲಿ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಈ ನೃತ್ಯಕ್ಕೆ ಅವರ ಬೆಂಬಲಿಗರು ಮೆಚ್ಚುಗೆ ಸೂಸಿದರೆ, ಇನ್ನುಷ್ಟು ಮಂದಿ ಮೋದಿ ಮಾಡಿದ್ದು ನಾಟಕ, ಇದೇನು ನಿಜನಾ ಎಂದು ಪ್ರಶ್ನಿಸುತ್ತಿದ್ದಾರೆ.


