ವಿಧಾನ ಪರಿಷತ್ ಈಗ ಪುನರ್ವಸತಿ ಕೇಂದ್ರವಾಗಿದೆ: ಡಿ.ವಿ.ಸದಾನಂದಗೌಡ
ರಾಜ್ಯದ ವಿವಿಧ ಕ್ಷೇತ್ರಗಳ ಕುರಿತಂತೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಆಳವಾದ ಚರ್ಚೆ ನಡೆಯುವ ವಿಧಾನ ಪರಿಷತ್ ಇವತ್ತು ವಿಚಾರಗಳೇ ಗೊತ್ತಿಲ್ಲದವರು ಮಾಹಿತಿಯ ಕೊರತೆ ಇದ್ದವರ ಪ್ರವೇಶದಿಂದ ತನ್ನ ಮೇಲ್ಮನೆಯ ಮೂಲ ಆಶಯಗಳನ್ನು ಕಳೆದುಕೊಂಡಿದೆ ಇದು ಒಂದು ರೀತಿಯಲ್ಲಿ ಪುನರ್ವಸತಿ ಕೇಂದ್ರವಾಗಿದೆ ಎಲ್ಲಿಯೂ ಸಲ್ಲದವರು ಅಲ್ಲಿ ಸಲ್ಲುವವರು ಎಂಬಂತಾಗಿ ಆಯ್ಕೆಯಾಗುವ ಹಂತಕ್ಕೆ ತಲುಪಿದೆ: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ
![Vidhan Parishat is Now Rehabilitation Centre Says Former CM DV Sadananda Gowda grg Vidhan Parishat is Now Rehabilitation Centre Says Former CM DV Sadananda Gowda grg](https://static-ai.asianetnews.com/images/7cee984f-ca7a-4bfb-91f4-51e0dd117b27/image_363x203xt.jpg)
ಕೋಲಾರ(ಮೇ.22): ಚಿಂತಕರ ಚಾವಡಿಯಾಗಿದ್ದ ರಾಜ್ಯ ವಿಧಾನ ಪರಿಷತ್ ರಾಜಕೀಯ ಹಸ್ತಕ್ಷೇಪದಿಂದ ತನ್ನ ಗೌರವವನ್ನು ಕಳೆದುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬೇಸರ ವ್ಯಕ್ತಪಡಿಸಿದರು. ನಗರದ ಹೊರವಲಯದ ಸಿ.ಬೈರೇಗೌಡ ಶಿಕ್ಷಣ ಸಂಸ್ಥೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.
ಎಲ್ಲಿಯೂ ಸಲ್ಲದವರು ಇಲ್ಲಿ
ರಾಜ್ಯದ ವಿವಿಧ ಕ್ಷೇತ್ರಗಳ ಕುರಿತಂತೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಆಳವಾದ ಚರ್ಚೆ ನಡೆಯುವ ವಿಧಾನ ಪರಿಷತ್ ಇವತ್ತು ವಿಚಾರಗಳೇ ಗೊತ್ತಿಲ್ಲದವರು ಮಾಹಿತಿಯ ಕೊರತೆ ಇದ್ದವರ ಪ್ರವೇಶದಿಂದ ತನ್ನ ಮೇಲ್ಮನೆಯ ಮೂಲ ಆಶಯಗಳನ್ನು ಕಳೆದುಕೊಂಡಿದೆ ಇದು ಒಂದು ರೀತಿಯಲ್ಲಿ ಪುನರ್ವಸತಿ ಕೇಂದ್ರವಾಗಿದೆ ಎಲ್ಲಿಯೂ ಸಲ್ಲದವರು ಅಲ್ಲಿ ಸಲ್ಲುವವರು ಎಂಬಂತಾಗಿ ಆಯ್ಕೆಯಾಗುವ ಹಂತಕ್ಕೆ ತಲುಪಿದೆ ಎಂದರು.
ಡಿಕೆಶಿಯಂಥ ಕಲಾಕಾರ ಕರ್ನಾಟಕದಲ್ಲಿ ಯಾರೂ ಇಲ್ಲ: ಸದಾನಂದಗೌಡ.
ದೇಶಾದ್ಯಂತ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸಮಸ್ಯೆಯಲ್ಲಿವೆ ಸಾಮಾನ್ಯ ಜನರಿಗೆ ಶಿಕ್ಷಣವು ಕೈಗೆ ಎಟುಕುತ್ತಿಲ್ಲ ಶಿಕ್ಷಣದ ಮಹತ್ವವನ್ನು ಅರಿತವರು ಶಿಕ್ಷಣದ ತೊಂದರೆಗಳ ಬಗ್ಗೆ ಗಂಭೀರವಾದ ಚರ್ಚೆ ನಡೆದು ಅದರ ನಿಲುವುಗಳನ್ನು ಪಡೆಯಲು ಯೋಗ್ಯರನ್ನು ಆರಿಸಿ ಕಳುಹಿಸಬೇಕಿದೆ. ಇವತ್ತಿನ ರಾಜಕಾರಣಿಗಳು ವಿಷಯಗಳ ಅಧ್ಯಯನ ಮಾಡುತ್ತಿಲ್ಲ ಎಂದು ಸಂಸದರೂ ಆಗಿರುವ ಡಿವಿಎಸ್ ಹೇಳಿದರು.
ನಾರಾಯಣಸ್ವಾಮಿ ಯೋಗ್ಯ ಅಭ್ಯರ್ಥಿ
ಡಾ.ನಾರಾಯಣಸ್ವಾಮಿ ಅವರು ನಿರಂತರ ಅಧ್ಯಯನ ಮಾಡುವ ಯೋಗ್ಯವಾದ ಅಭ್ಯರ್ಥಿ ಆಗಿದ್ದು ಅವರು ಎಂಎಲ್ಸಿ ಆಗಿಯೇ ನೀರಾವರಿ ವಿಷಯದ ಬಗ್ಗೆ ಪಿಎಚ್ಡಿ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಶಿಕ್ಷಕರ ವಿಶ್ವಾಸಕ್ಕೆ ಧಕ್ಕೆ ಆಗದ ರೀತಿ ಕೆಲಸ ಮಾಡುತ್ತಾರೆ. ಅವರ ಆಯ್ಕೆ ನಿಮ್ಮದಾಗಿರಲಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು.
ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣದ ಸಹಭಾಗಿತ್ವ ಇಲ್ಲದೇ ಹೋಗಿದ್ದರೆ ದೇಶವು ಇಷ್ಟು ಮುಂದುವರೆಯಲು ಸಾಧ್ಯವಾಗುತ್ತಾ ಇರಲಿಲ್ಲ ರಾಜ್ಯ ಸರ್ಕಾರವು ಹೇಗೆ ನಡೆದುಕೊಳ್ಳುತ್ತಾ ಇದೆ ಎಂಬುದನ್ನು ನಾವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಉದ್ಯೋಗ ಮಾಡುವವರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಸರಕಾರಕ್ಕೆ ಚುನಾವಣೆಯಲ್ಲಿ ಉತ್ತರ ಕೊಡಬೇಕು. ರಾಜ್ಯ ಸರ್ಕಾರವು ಉಚಿತ ಕೊಡುಗೆಗಳ ಬದಲಾಗಿ ಅದೇ ಹಣವನ್ನು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೂಡಬಹುದಿತ್ತು ಎಂದು ತಿಳಿಸಿದರು
ಶಿಕ್ಷಕರ ಸಮಸ್ಯೆಗೆ ಸ್ಪಂದನೆ
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮೈತ್ರಿ ಅಭ್ಯರ್ಥಿ ನಿರಂತರವಾಗಿ ಜಿಲ್ಲೆಯ ಅಭಿವೃದ್ಧಿ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ನನ್ನೊಂದಿಗೆ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ಕಳಸಿದರೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗ್ಗೆ ಸರಕಾರದಲ್ಲಿ ಚರ್ಚೆ ನಡೆಸಲು ಸಾಧ್ಯವಾಗುತ್ತದೆ ಎಂದರು.
ಡಿವಿಎಸ್, ಪ್ರತಾಪ್ ಸಿಂಹ ಗೋವಿಂದಾ ಗೋವಿಂದಾ.: ಎಚ್ಡಿಕೆಯವರೇ ನಾನು ಯಾವ ವಿಷ ಹಾಕಿದ್ದೀನಿ ಹೇಳಿ ಎಂದ ಡಿಕೆಶಿ
ಗೆಲುವಿಗೆ ಶ್ರಮಿಸುವ ಭರವಸೆ
ಸಿ.ಬೈರೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ ಮಾತನಾಡಿ, ವೈ.ಎ.ನಾರಾಯಣಸ್ವಾಮಿ ಅಭಿವೃದ್ಧಿ ಪರ ಶಾಸಕ. ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ವ್ಯಕ್ತಿ ಅವರಿಗಿದೆ. ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಬಿಜೆಪಿ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್, ಅಭ್ಯರ್ಥಿಯ ಸಹೋದರ ವೀರಭದ್ರಪ್ಪ, ಸಿಂಡಿಕೇಟ್ ಸದಸ್ಯ ಸಹ್ಯಾದ್ರಿ ಉದಯಕುಮಾರ್, ಬಿಜೆಪಿ ಜಿಲ್ಲಾ ವಕ್ತಾರ ಎಸ್ ಬಿ ವೆಂಕಟಮುನಿಯಪ್ಪ, ಸಂಚಾಲಕ ಮಾಗೇರಿ ನಾರಾಯಣಸ್ವಾಮಿ, ಮಾಧ್ಯಮ ಸಹ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಮಹಿಳಾ ಜೆಡಿಎಸ್ ಜಿಲ್ಲಾ ಅಧ್ಯಕ್ಷೆ ಗಾಯತ್ರಿ ಮುದ್ದಪ್ಪ ಇದ್ದರು.