ಪಟನಾದಲ್ಲಿ ಫೋಟೋ ಸೆಷನ್‌ ನಡೆಯುತ್ತಿದೆ. ಎಷ್ಟು ಪಕ್ಷಗಳು ಬರುತ್ತವೆ ಎಂಬುದು ಮುಖ್ಯವೇ ಅಲ್ಲ. ಎಂದಿಗೂ ಇವರ ನಡುವೆ ಒಗ್ಗಟ್ಟು ಸಾಧ್ಯವೇ ಇಲ್ಲ. ಒಂದು ವೇಳೆ ಸಾಧ್ಯವಾದರೆ 2024ರಲ್ಲಿ ಜನ ಎದುರು ಬನ್ನಿ, ಮುಂದಿನ ಚುನಾವಣೆಯಲ್ಲೂ ಮೋದಿ 300ಕ್ಕೂ ಹೆಚ್ಚು ಸ್ಥಾನಗಳ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ: ಅಮಿತ್‌ ಶಾ 

ನವದೆಹಲಿ(ಜೂ.24): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ವಿಪಕ್ಷಗಳು ನಡೆಸುತ್ತಿರುವ ಸಭೆಗೆ ತಿರುಗೇಟು ನೀಡಿರುವ ಬಿಜೆಪಿ, ‘ವಿಪಕ್ಷಗಳ ಒಗ್ಗಟ್ಟು ಸಾಧ್ಯವೇ ಇಲ್ಲ. ಪ್ರಧಾನಿ ಮೋದಿ ಅವರನ್ನು ಸೋಲಿಸುವ ಶಕ್ತಿ ಇಲ್ಲದೇ ಕಾಂಗ್ರೆಸ್‌ ಇತರ ಪಕ್ಷಗಳ ಬೆಂಬಲ ಕೋರುತ್ತಿದೆ’ ಎಂದು ಹೇಳಿದೆ.

ಕಾಶ್ಮೀರದಲ್ಲಿ ಈ ಸಭೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಪಟನಾದಲ್ಲಿ ಫೋಟೋ ಸೆಷನ್‌ ನಡೆಯುತ್ತಿದೆ. ಎಷ್ಟು ಪಕ್ಷಗಳು ಬರುತ್ತವೆ ಎಂಬುದು ಮುಖ್ಯವೇ ಅಲ್ಲ. ಎಂದಿಗೂ ಇವರ ನಡುವೆ ಒಗ್ಗಟ್ಟು ಸಾಧ್ಯವೇ ಇಲ್ಲ. ಒಂದು ವೇಳೆ ಸಾಧ್ಯವಾದರೆ 2024ರಲ್ಲಿ ಜನ ಎದುರು ಬನ್ನಿ, ಮುಂದಿನ ಚುನಾವಣೆಯಲ್ಲೂ ಮೋದಿ 300ಕ್ಕೂ ಹೆಚ್ಚು ಸ್ಥಾನಗಳ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ’ ಎಂದು ಹೇಳಿದರು.

ವಿಪಕ್ಷಗಳ ಮೈತ್ರಿ ಸಭೆ ಅಂತ್ಯ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಅಜೆಂಡಾ ಫಿಕ್ಸ್!

ಮತ್ತೊಂದೆಡೆ, ‘ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಜೈಲಿಗೆ ತಳ್ಳಲ್ಪಟ್ಟಜನರೇ ಈಗ ರಾಹುಲ್‌ ಗಾಂಧಿಯನ್ನು ಸ್ವಾಗತಿಸುತ್ತಿದ್ದಾರೆ’ ಎಂದು ವಿಪಕ್ಷಗಳ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವ್ಯಂಗ್ಯವಾಡಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಮಾತ​ನಾಡಿ, ‘ಕಾಂಗ್ರೆಸ್‌ ಪಕ್ಷಕ್ಕೆ ಮೋದಿ ಅವರನ್ನು ಏಕಾಂಗಿಯಾಗಿ ಎದುರಿಸುವುದು ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದಿದೆ. ಹಾಗಾಗಿ ಎಲ್ಲಾ ಪಕ್ಷಗಳ ಬೆಂಬಲ ಕೋರುತ್ತಿದೆ. ಅಧಿಕಾರ ಈಗ ಅರಮನೆಯಿಂದ ಜನರ ಬಳಿಗೆ ಹೋಗಿದೆ. ಹಾಗಾಗಿಯೇ ತುರ್ತು ಪರಿಸ್ಥಿತಿಯ ಸಮಯದಲ್ಲಿ ಯಾರನ್ನು ಕಂಬಿಯ ಹಿಂದೆ ಹಾಕಿದ್ದರೋ ಈಗ ಅವರ ಬಳಿಗೇ ಹೋಗಬೇಕಾಗಿದೆ’ ಎಂದು ವ್ಯಂಗ್ಯ​ವಾ​ಡಿ​ದ್ದಾ​ರೆ.