Sena Vs Sena: ಕೈ ಮುರಿಯಲಾಗದಿದ್ದರೆ ಕಾಲು ಮುರಿಯಿರಿ ಎಂದ ಶಿಂಧೆ ಬಣದ ಶಾಸಕನ ವಿರುದ್ಧ ಕೇಸ್
ಮಹಾರಾಷ್ಟ್ರ ಸಿಎಂ ಏಕನಾಥ್ ಸಿಂಧೆ ಬಣದ ಶಾಸಕ ಪ್ರಕಾಶ್ ಸುರ್ವೆ ವಿರುದ್ಧ ಉದ್ಧವ್ ಠಾಕ್ರೆ ಬಣದ ಶಿವಸೇನಾ ಗುಂಪು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದೆ. ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್ ಸಿಂಧೆ ಬಣದ ಶಾಸಕ ಪ್ರಕಾಶ್ ಸುರ್ವೆ ವಿರುದ್ಧ ಉದ್ಧವ್ ಠಾಕ್ರೆ ಬಣದ ಶಿವಸೇನಾ ಗುಂಪು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದೆ. ಆಗಸ್ಟ್ 14 ರಂದು ಏಕನಾಥ್ ಬಣದ ಶಾಸಕ ಪ್ರಕಾಶ್ ಸುರ್ವೆ, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಿಮಗೆ ಕೈ ಮುರಿಯಲು ಸಾಧ್ಯವಾಗದಿದ್ದರೆ ಕಾಲು ಮುರಿಯಿರಿ ಮರುದಿನ ನಾನು ಬಂದು ನಿಮಗೆ ಜಾಮೀನು ಕೊಡಿಸಿ ಬಿಡಿಸುವೆ ಎಂದು ಪ್ರಕಾಶ್ ಸುರ್ವೆ ಹೇಳಿದ್ದರು.
ಮುರಿದು ಹೋಗಿ ಎರಡು ಪಾಲಾಗಿರುವ ಶಿವಸೇನೆಯ ಎರಡು ಬಣಗಳ ನಡುವೆ ನಿಜವಾದ ಶಿವಸೇನೆಯ ಬಣ ಹಾಗೂ ಈ ಎರಡು ಬಣಗಳ ನಡುವಿನ ಮುಸುಕಿನ ಗುದ್ದಾಟದ ವಿಚಾರವಾಗಿ ಮಾತನಾಡುತ್ತಾ ಹೀಗೆ ಹೇಳಿದ್ದು, ಶಾಸಕರು ಹೀಗೆ ಮಾತನಾಡಿರುವ ವಿಡಿಯೋ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಮುಂಬೈನ ಮಗಠಾಣೆ ಪ್ರದೇಶದ ಕೊಂಕಣಿ ಪದ ಬುದ್ಧ ವಿಹಾರದಲ್ಲಿ ಆಗಸ್ಟ್ 14 ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ. ಯಾರಾದರೂ ನಿಮಗೆ ಏನಾದರೂ ಹೇಳಿದರೆ ಅವರಿಗೆ ಪ್ರತಿಕ್ರಿಯಿಸಿ, ಯಾರ ದಾದಾಗಿರಿಯನ್ನು ಸಹಿಸಬೇಕಾಗಿಲ್ಲ. ನೀವು ಅವರಿಗೆ ಹೊಡೆಯಿರಿ. ನಾನು, ಪ್ರಕಾಶ್ ಸುರ್ವೆ, ನಿಮಗಾಗಿ ಇಲ್ಲಿದ್ದೇನೆ, ನೀವು ಅವರ ಕೈಗಳನ್ನು ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲುಗಳನ್ನು ಮುರಿಯಿರಿ, ಮರುದಿನ ನಾನು ನಿಮಗೆ ಜಾಮೀನು ನೀಡಿ ಹೊರಗೆ ಕರೆದುಕೊಂಡು ಬರುತ್ತೇನೆ ಎಂದು ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ನಾವು ಯಾರೊಂದಿಗೂ ಜಗಳವಾಡುವುದಿಲ್ಲ, ಆದರೆ ಯಾರಾದರೂ ನಮ್ಮೊಂದಿಗೆ ಜಗಳವಾಡಿದರೆ, ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಈ ಪ್ರಚೋದನಕಾರಿ ಹೇಳಿಕೆಯನ್ನು ಪ್ರತಿಭಟಿಸಿ, ಇದೀಗ ಠಾಕ್ರೆ ಬಣವು ದಹಿಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.ಆನ್ಲೈನ್ನಲ್ಲಿ ಈ ವೀಡಿಯೊ ಸಂಚಲನ ಮೂಡಿಸುತ್ತಿರುವ ವೇಗವನ್ನು ಗಮನಿಸಿದರೆ ಈ ವಿಷಯವು ಇಂದು ನಡೆಯಲಿರುವ ಪ್ರತಿಪಕ್ಷಗಳ ಪತ್ರಿಕಾಗೋಷ್ಠಿಯಲ್ಲಿಯೂ ಚರ್ಚೆಗೆ ಬರುವ ಸಾಧ್ಯತೆಯಿದೆ. ಅಲ್ಲದೇ ಇಂದು ಮುಖ್ಯಮಂತ್ರಿ ಶಿಂಧೆ ಅವರ ಪತ್ರಿಕಾಗೋಷ್ಠಿಯೂ ನಿಗದಿಯಾಗಿದೆ.
ಶಾ ಮಾತು ಉಳಿಸಿಕೊಂಡಿದ್ದರೆ ಅಘಾಡಿ ಹುಟ್ಟುತ್ತಿರಲಿಲ್ಲ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ ತಾಂತ್ರಿಕವಾಗಿ ಅವರ ತಂದೆ ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷದ ಮುಖ್ಯಸ್ಥರಾಗಿ ಉಳಿದಿದ್ದಾರೆ. ಆದರೆ ಪಕ್ಷದ ಹಕ್ಕು ಯಾರಿಗೆ ಸಿಗುತ್ತದೆ ಎಂಬ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ. ಬಿಜೆಪಿ ಬೆಂಬಲದೊಂದಿಗೆ, ಏಕನಾಥ್ ಶಿಂಧೆ ಅವರು ಜೂನ್ನಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಬಹುಪಾಲು ಶಾಸಕರನ್ನು ಕರೆದೊಯ್ದು ಸರ್ಕಾರ ರಚಿಸಿದ್ದರು. ಮತ್ತು ಪಕ್ಷದ ಮೂರನೇ ಎರಡರಷ್ಟು ಶಾಸಕರು ತಮ್ಮೊಂದಿಗೆ ಇರುವುದರಿಂದ ಅವರು ವಿಧಾನಸಭೆಯಲ್ಲಿಯೂ ತಮ್ಮ ಬಣವನ್ನು ಶಿವಸೇನೆ ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪಕ್ಷ, ಚಿಹ್ನೆ ಮತ್ತು ಎಲ್ಲವನ್ನೂ ಪಡೆಯುವುದು ಸುದೀರ್ಘ ಹೋರಾಟವಾಗಿದ್ದು, ಇತರ ಅವಶ್ಯಕತೆಗಳ ಹೊರತಾಗಿ ಪಕ್ಷದ ಘಟಕಗಳಲ್ಲಿ ಬಹುಮತದ ಪುರಾವೆ ಅಗತ್ಯವಿದೆ. ಈ ವಿಷಯ ಈಗಾಗಲೇ ಸುಪ್ರೀಂಕೋರ್ಟ್ ಮತ್ತು ಚುನಾವಣಾ ಆಯೋಗದ ಅಂಗಣದಲ್ಲಿದೆ.
ಕೇಟರಿಂಗ್ ಮ್ಯಾನೇಜರ್ಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ: ವಿಡಿಯೋ ವೈರಲ್