Trump is a Dictator Modi His Slave ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯಿಂದ ಮೋದಿ ಸರ್ಕಾರದ ವಿರುದ್ಧ ಗುಡುಗು! ಟ್ರಂಪ್ ಓರ್ವ ಸರ್ವಾಧಿಕಾರಿ, ಮೋದಿ ಗುಲಾಮ ಎಂದ ಖರ್ಗೆ. ವಿದೇಶಾಂಗ ನೀತಿ ಬಗ್ಗೆ ಅವರು ಹೇಳಿದ್ದೇನು? ತಿಳಿಯಲು ಓದಿ.

ಕಲಬುರಗಿ (ಮಾ.8): ಅಮೆರಿಕ ಅಧ್ಯಕ್ಷ ಟ್ರಂಪ್ ಒಬ್ಬ ಸರ್ವಾಧಿಕಾರಿ ಮೋದಿ ಅವನ ಗುಲಾಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು.

Add Asianetnews Kannada as a Preferred SourcegooglePreferred

ಚಿತ್ತಾಪುರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಖರ್ಗೆ ಅವರು, ಕೇಂದ್ರ ಸರ್ಕಾರ ಮತ್ತು ಅಮೆರಿಕದ ವಿದೇಶಾಂಗ ನೀತಿಯ ವಿರುದ್ಧ ಕೆಂಡ ಕಾರಿದ್ದಾರೆ. ಪ್ರಧಾನಿ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ ಎಂದರು.

ಬೈಟೋ ಅಂದ್ರೆ ಬೈಟೋ ಉಟೋ ಅಂದ್ರೆ ಉಟೋ

ಅಮೆರಿಕ ಅಧ್ಯಕ್ಷ ಟ್ರಂಪ್ ಒಬ್ಬ ಸರ್ವಾಧಿಕಾರಿ (Dictator). ಪ್ರಧಾನಿ ಮೋದಿ ಅವರಿಗೆ ಗುಲಾಮನಂತೆ ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬೈದು ಬೈದು ಅಧಿಕಾರಕ್ಕೆ ಬಂದವರು, ಇಂದು ಅಮೆರಿಕ ಹೇಳಿದಂತೆ 'ಬೈಟೋ ಅಂದ್ರೆ ಬೈಟೋ, ಉಟೋ ಅಂದ್ರೆ ಉಟೋ' ಎನ್ನುವ ಸ್ಥಿತಿಗೆ ತಲುಪಿದ್ದಾರೆ. ದೇಶವನ್ನು ಅಮೆರಿಕದ ಬಳಿ ಅಡವಿಡುತ್ತಿದ್ದೀರಿ ಎಂದು ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ದೇಶ ಕಟ್ಟಿದರೆ, ಬಿಜೆಪಿ ದೇಶ ಹಾಳು ಮಾಡುತ್ತಿದೆ!

'ಮೋದಿ ಬೆಳನಿಂದ ಸಂಜೆಯವರೆಗೆ ಕಾಂಗ್ರೆಸ್‌ಗೆ ಬೈಯುವುದೇ ಕೆಲಸವಾಗಿದೆ. ಮಾರಾಯಾ(ಮೋದಿ) ಊರೂರು ತಿರುಗುವುದು, ಹೋದಲೆಲ್ಲ ಕಾಂಗ್ರೆಸ್ ಗೆ ಬೈಯುವುದು. ಏಕೆಂದರೆ ಅವರಿಗೆ ಮಾಡಲು ಏನೂ ಆಗಲ್ಲ. ಅದಕ್ಕೆ ಕಾಂಗ್ರೆಸ್ ಬೈಯುವುದು. ಈ ದೇಶದಲ್ಲಿ ದೊಡ್ಡ ಕಾರ್ಖಾನೆಗಳು, ರಸ್ತೆಗಳು ಮತ್ತು ಶಾಲೆಗಳನ್ನು ಕಟ್ಟಿದ್ದು ಕಾಂಗ್ರೆಸ್. ನಾವು ದೇಶ ಕಟ್ಟುವ ಕೆಲಸ ಮಾಡಿದರೆ, ಮೋದಿ ಅವರು ದೇಶವನ್ನು ಒಡೆಯುವ, ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇರಾನ್ ನೌಕೆ ಅಮೆರಿಕ ಧ್ವಂಸ ಮಾಡಿತು, ಮೋದಿ ಮೌನವೇಕೆ?

ಹಿಂದೂ ಮಹಾಸಾಗರದಲ್ಲಿನ ಇರಾನ್ ನೌಕೆಯನ್ನ ಅಮೆರಿಕದವರು ಸುಟ್ಟರು, ಮೋದಿ ಆ ಬಗ್ಗೆ ಮಾತನಾಡಲಿಲ್ಲ. ಮೋದಿಗೆ ದೇಶ ಉಳಿಸುವ ಶಕ್ತಿ ಎಷ್ಟು ಇದೆ? ಮಾತನಾಡಿ, ಮಂತ್ರ ಹಾಕಿ ದೇಶ ಉಳಿಸಲು ಆಗಲ್ಲ. ಯುವಕರಿಗೆ ಶಕ್ತಿ ತುಂಬಬೇಕು ಕೆಲಸ ಆಗಬೇಕು. ಮೋದಿಯವರು ಏನು ಮಾಡಿದ್ದಾರೆ? ನಮ್ಮ ದೇಶದಲ್ಲಿ ಯಾರಾದರೂ ದಾಳಿ‌ ಮಾಡಿದ್ರೆ ಶ್ರೀಮಂತರು ಊರು ಬಿಟ್ಟು, ಬೇರೆ ದೇಶಕ್ಕೆ ಅಥವಾ ದ್ವೀಪಕ್ಕೆ ಹೋಗುತ್ತಾರೆ. ನಾವು ಬಡವರು ಎಲ್ಲಿಗೆ ಹೋಗಬೇಕು? ಕೇವಲ ಮಂತ್ರ ಹಾಕಿ ದೇಶ ಉಳಿಸಲು ಆಗಲ್ಲ, ಯುವಕರಿಗೆ ಕೆಲಸ ಸಿಗಬೇಕು. ಮೋದಿಯವರೇ, ಇಷ್ಟೆಲ್ಲಾ ನಡೆಯುತ್ತಿದ್ದರೂ ನೀವೆಲ್ಲಿದ್ದೀರಿ? ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಅಮೆರಿಕಾಗೆ ಭಾರೀ ಸೊಕ್ಕು ಬಂದಿದೆ.

ಅಮೆರಿಕಾಗೆ ಭಾರಿ ಸೊಕ್ಕು ಬಂದಿದೆ. ಖಮೇನಿಯನ್ನ ಹತ್ಯೆ ಮಾಡಿದ್ರು, ಅಮೆರಿಕ ಪಕ್ಕದ ದೇಶದ ಅಧ್ಯಕ್ಷನ್ನ ಎಳೆದೊಯ್ದರು. ಒಂದು ದೇಶದ ಮುಖ್ಯಸ್ಥನನ್ನ ರೀತಿ ಅವರ ದೇಶದ ಒಳಗೆ ನುಗ್ಗಿ ಹತ್ಯೆ ಮಾಡಿದ್ರೆ ವಿಶ್ವ ಹೇಗೆ ಸುರಕ್ಷಿತವಾಗಿರುತ್ತಾ? ನೀವು ಎಲ್ಲರನ್ನ ಕೊಲ್ಲುತ್ತಾ ಹೋದ್ರೆ ಶಾಂತಿ ಬರುತ್ತಾ? ನಾವು ಗಾಂಧಿ ಹೇಳಿದ ದಾರಿಯಲ್ಲಿ ನಡೆಯಬೇಕು. ಅದುಬಿಟ್ಟು ಅಮೆರಿಕ ಜೊತೆಗೂಡಿ ನಮ್ಮ ದೇಶವನ್ನು ಹಾಳುಮಾಡುತ್ತಿದ್ದೀರಿ. ಅಮೆರಿಕ ಹೇಳಿದ ಹಾಗೆ ನೀವು(ಮೋದಿ) ಕೇಳುತ್ತಿದ್ದೀರಿ. ನಮ್ಮದು ಸಾರ್ವಭೌಮ ದೇಶ. ನಾವು ಯಾರ ಬಳಿ ವ್ಯಾಪಾರ ಮಾಡಬೇಕು ಅನ್ನೋದು ನಮಗೆ ಬಿಟ್ಟಿದ್ದು, ಆದರೆ ನಾವು ರಷ್ಯಾ ತೈಲ ಖರೀದಿಸಲು ಅಮೆರಿಕ ನಮಗೆ ಒಂದು ತಿಂಗಳ ಸಮಯ ಕೊಡುತ್ತದೆ ಎಂದರೆ ಏನರ್ಥ? ಕಚ್ಚಾತೈಲ ಖರೀದಿಗೆ ಟ್ರಂಪ್ ಅಪ್ಪಣೆ ಬೇಕಾ? ಮುಂದೆ ಟ್ರಂಪ್ ಹೇಳಿದ್ರೆ ಮಾತ್ರ ತೈಲ ಖರೀದಿ ಮಾಡಬೇಕು. ಇಲ್ಲಾಂದ್ರೆ ಇಲ್ಲ. ನೀವು ಗುಲಾಮಗಿರಿ ಮಾಡೋದಲ್ಲದೇ ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳುತ್ತಿದ್ದೀರಿ ನಾವು ಗಾಂಧೀಜಿ ತೋರಿದ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಅಮೆರಿಕದ ಸೊಕ್ಕಿಗೆ ಭಾರತ ಬಲಿಯಾಗಬಾರದು. ಎಂದು ಎಚ್ಚರಿಸಿದರು.

ಕಲಬುರಗಿ ವಿಮಾನ ನಿಲ್ದಾಣ ಸೇಡಿನ ರಾಜಕಾರಣ?

ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಖರ್ಗೆ ಅವರು, 'ನಾವು ಕೆಕೆಆರ್‌ಡಿಬಿ ಅನುದಾನದಲ್ಲಿ ಕಲಬುರಗಿ ಏರ್‌ಪೋರ್ಟ್ ನಿರ್ಮಾಣ ಮಾಡಿದ್ದೆವು. ಆದರೆ ನಾನು ಇಲ್ಲಿ ಓಡಾಡುತ್ತಿದ್ದೇನೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿಮಾನ ಹಾರಾಟವನ್ನೇ ಬಂದ್ ಮಾಡಿದೆ. ಮನ್ ಕೀ ಬಾತ್, ಉಸ್ ಕೀ ಬಾತ್ ಎನ್ನುವ ಮೋದಿ ಈಗ ಜನರ ಸಂಕಷ್ಟದ ಬಗ್ಗೆ ಮಾತನಾಡಲಿ. ಬ್ರಿಟಿಷರನ್ನು ಒದ್ದು ಓಡಿಸಿದ ಇತಿಹಾಸ ನಮ್ಮದು, ಮತ್ತೆ ನಮ್ಮನ್ನು ಗುಲಾಮಗಿರಿಗೆ ತಳ್ಳಬೇಡಿ ಎಂದು ಜನರು ಜಾಗೃತರಾಗುವಂತೆ ಕರೆ ನೀಡಿದರು.