ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಮತ್ತು ವಿಜಯೇಂದ್ರ ಜತೆಯಾಗಿಯೇ ಪಕ್ಷವನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ ಎಂದು ರಾಜ್ಯ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ. 

ಮಂಗಳೂರು (ನ.12): ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಮತ್ತು ವಿಜಯೇಂದ್ರ ಜತೆಯಾಗಿಯೇ ಪಕ್ಷವನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ ಎಂದು ರಾಜ್ಯ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನಮ್ಮ ಜತೆ ಪ್ರವಾಸ ಮಾಡುತ್ತಿದ್ದವರು. ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿಯೂ ಓಡಾಟ ನಡೆಸಿದ ಅನುಭವಿ. ಅವರು ಉತ್ತಮ ರೀತಿಯಲ್ಲಿ ಪಕ್ಷ ಸಂಘಟಿಸಿ ಬಿಜೆಪಿಯನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತಾರೆ. ನಾನೂ ಅವರ ಜತೆ ರಾಜ್ಯದಲ್ಲಿ ಓಡಾಟ ನಡೆಸುತ್ತೇನೆ ಎಂದಿದ್ದಾರೆ.

ಮಂಗಳೂರು ಪತ್ರಿಕಾ ಭವನ ಕಟ್ಟಡ ಅಭಿವೃದ್ಧಿಗೆ 10 ಲಕ್ಷ ರು. ಮಂಜೂರು: ಮಂಗಳೂರು ಪತ್ರಿಕಾ ಭವನ ಕಟ್ಟಡದ ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ 10 ಲಕ್ಷ ರು. ಮಂಜೂರುಗೊಳಿಸಿರುವುದಾಗಿ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಮಂಗಳೂರಿನ ಉರ್ವ ಮಾರ್ಕೆಟ್‌ ಬಳಿ ನವೀಕೃತ ಪ್ರೆಸ್‌ಕ್ಲಬ್‌ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಂಗಳೂರಲ್ಲಿ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್‌ ಹಾಗೂ ಪತ್ರಿಕಾ ಭವನ ಟ್ರಸ್ಟ್‌ ಈ ಮೂರು ಸಂಘಟನೆಗಳು ಇದ್ದರೂ ಎಲ್ಲವೂ ಒಗ್ಗಟ್ಟಿನಿಂದ ಇದೆ. ಮಂಗಳೂರಿನ ಪತ್ರಕರ್ತರು ಕೂಡ ಎಡ, ಬಲಗಳಲ್ಲಿ ಗುರುತಿಸಿಕೊಳ್ಳದೆ ಸಮಾನ, ನೇರ ಮನಸ್ಥಿತಿಯನ್ನು ಹೊಂದಿದ್ದಾರೆ. ನನ್ನ ರಾಜಕೀಯ ಏಳ್ಗೆಗೆ ಪಕ್ಷ, ಸಂಘಟನೆ ಹೊರತುಪಡಿಸಿದರೆ, ಮಂಗಳೂರಿನ ಪತ್ರಕರ್ತರೂ ಕಾರಣರಾಗಿದ್ದಾರೆ. ಇಡೀ ರಾಜ್ಯಕ್ಕೆ ಮಂಗಳೂರಿನ ಪತ್ರಕರ್ತರ ತಂಡ ಆದರ್ಶಪ್ರಾಯವಾಗಿದೆ. ಪತ್ರಕರ್ತರ ಅಭ್ಯುದಯಕ್ಕೆ ಸಹಕಾರ ನೀಡಲು ಬದ್ಧವಾಗಿರುವುದಾಗಿ ಅವರು ಹೇಳಿದರು.

ಬಿಜೆಪಿಯಲ್ಲಿ ಬಿಎಸ್‌ವೈ, ಶೆಟ್ಟರ್‌, ಈಗ ಡಿವಿಎಸ್‌ ಕಡೆಗಣನೆ: ರೇಣುಕಾಚಾರ್ಯ ಕಿಡಿ

ಕ್ಲಬ್‌ ಹೌಸ್‌ ನಿರ್ಮಾಣ ಬೇಡಿಕೆ: ಮಂಗಳೂರು ಪ್ರೆಸ್‌ಕ್ಲಬ್‌ ಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಮಾತನಾಡಿ, 2002ರಲ್ಲಿ ಸ್ಥಾಪನೆಯಾದ ಪ್ರೆಸ್‌ಕ್ಲಬ್‌ ಕಳೆದ 21 ವರ್ಷಗಳಲ್ಲಿ ಸಾಗಿಬಂದ ಹಾದಿಯನ್ನು ಮೆಲುಕು ಹಾಕಿದರು. 2007ರಲ್ಲಿ ಲೇಡಿಹಿಲ್‌ನ ಈ ಕಟ್ಟಡಕ್ಕೆ ಪ್ರೆಸ್‌ಕ್ಲಬ್ ಸ್ಥಳಾಂತರಗೊಂಡು ಕಾರ್ಯನಿರ್ವಹಿಸಲಾರಂಭಿಸಿತು. ಬಳಿಕ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರೆಸ್‌ಕ್ಲಬ್‌ ಆರಂಭವಾಯಿತು. ಮುಂದೆ ಕ್ಲಬ್‌ ಹೌಸ್‌ ನಿರ್ಮಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಮಾತನಾಡಿ, ಮೂರು ಸಂಘಟನೆಗಳು ಒಂದಾಗಿ ರಾಜ್ಯಕ್ಕೆ ಮಾದರಿಯಾಗಿ ಇಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. 

ಇವಿ ನೀತಿ ಕ್ಲೀನ್‌ ಮೊಬಿಲಿಟಿ ನೀತಿಯಾಗಿ ಮಾರ್ಪಾಟು: ಸಚಿವ ಎಂ.ಬಿ.ಪಾಟೀಲ್‌

ನ.21ರಂದು ಪತ್ರಕರ್ತರ ಜಿಲ್ಲಾ ಸಮ್ಮೇಳನ ಮಂಗಳೂರಿನಲ್ಲಿ ನಡೆಯಲಿದೆ. ಜನವರಿ 5ರಿಂದ 7ರ ವರೆಗೆ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್‌ ಪಂದ್ಯ ನಡೆಯಲಿದೆ. ಬೆಂಗಳೂರಿಗೆ ತೆರಳುವ ಇಲ್ಲಿನ ಪತ್ರಕರ್ತರಿಗೆ ವಾಸ್ತವ್ಯ ಸಲುವಾಗಿ ಬೆಂಗಳೂರು ಪ್ರೆಸ್‌ಕ್ಲಬ್‌ ಜತೆ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ ಸ್ವಾಗತಿಸಿ ಮಾತನಾಡಿ, ಪ್ರೆಸ್‌ಕ್ಲಬ್‌ ಬೆಳೆದು ಬಂದ ಹಾದಿಯನ್ನು ವಿವರಿಸಿದರಲ್ಲದೆ, ಪ್ರೆಸ್‌ಕ್ಲಬ್‌ ವತಿಯಿಂದ ರಿಕ್ರಿಯೇಷನ್‌ ಕ್ಲಬ್‌ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು. ಇದೇ ಸಂದರ್ಭ ನವೀಕರಣದ ಗುತ್ತಿಗೆದಾರ ಪುರಂದರ, ಪ್ರೆಸ್‌ಕ್ಲಬ್‌ ಮೆನೇಜರ್‌ ಅಭಿಷೇಕ್‌, ಉದ್ಯೋಗಿ ಚಂಚಲಾಕ್ಷಿ ಇವರನ್ನು ಗೌರವಿಸಲಾಯಿತು.