ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಿಡ್ನಿ ಕಳೆದುಕೊಂಡ ರೋಗಿಯ ಚಿಕಿತ್ಸೆಗೆ 50 ಲಕ್ಷ, ಉಚಿತ ಶಿಕ್ಷಣ, ವಿಧವೆಯರಿಗೆ 3 ಸಾವಿರ, ಹಿರಿಯ ನಾಗರಿಕರಿಗೆ 5 ಸಾವಿರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವುದು ಜೆಡಿಎಸ್‌ನ ಉದ್ದೇಶವಾಗಿದೆ ಎಂದ ಸಿ.ಎಂ.ಇಬ್ರಾಹಿಂ. 

ದೇವರಹಿಪ್ಪರಗಿ(ಮಾ.24): ಜೆಡಿಎಸ್‌ ಪಕ್ಷ ಜಾತ್ಯತೀತ, ಧರ್ಮಾತೀತ ತಳಹದಿ ಹೊಂದಿದ್ದು, ಪಂಚರತ್ನ ಯೋಜನೆ ಅಳವಡಿಸಿಕೊಂಡಿದೆ. ಹೀಗಾಗಿ, ಕಾಂಗ್ರೆಸ್‌, ಬಿಜೆಪಿ ಏನೇ ಆಮಿಷ ಒಡ್ಡಿದರೂ ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭರವಸೆ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸಮುದಾಯದ ಮುಖಂಡರ ಜೊತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಿಡ್ನಿ ಕಳೆದುಕೊಂಡ ರೋಗಿಯ ಚಿಕಿತ್ಸೆಗೆ 50 ಲಕ್ಷ, ಉಚಿತ ಶಿಕ್ಷಣ, ವಿಧವೆಯರಿಗೆ 3 ಸಾವಿರ, ಹಿರಿಯ ನಾಗರಿಕರಿಗೆ 5 ಸಾವಿರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವುದು ಜೆಡಿಎಸ್‌ನ ಉದ್ದೇಶವಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ; ಜೆಡಿಎಸ್ ಶಾಸಕ ದೇವಾನಂದ ಚೌಹಾನ್ ಸ್ಪಷ್ಟನೆ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಪ್ರಧಾನಿ ಮೋದಿ ದೇಶಕ್ಕೆ ಅಚ್ಛೇ ದಿನ್‌ ಬರುತ್ತವೆ ಎಂದು ಹೇಳಿ ಗ್ಯಾಸ್‌, ಪೆಟ್ರೊಲ್‌, ಡೀಸೆಲ್‌ ಹಾಗೂ ಜನ ಸಾಮಾನ್ಯರು ಬಳಸುವ ವಸ್ತುಗಳ ಬೆಲೆ ಏರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡದೇ ಕಾರ್ಪೋರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಿದ್ದಾರೆ. ಇವು ಅಚ್ಛೇದಿನ್‌ ಅಲ್ಲ ಅತ್ಯಂತ ಕೆಟ್ಟದಿನಗಳು ಎಂದು ಕುಟುಕಿದರು.

ಜೆಡಿಎಸ್‌ ಘೋಷಿತ ಅಭ್ಯರ್ಥಿ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ನಾನು ಪರಾಭವಗೊಂಡಿದ್ದರೂ ನಿಮ್ಮ ಕಷ್ಟ-ಸುಖದಲ್ಲಿ ಭಾಗಿ ಆಗಿದ್ದೇನೆ. ಸಿ.ಎಂ.ಇಬ್ರಾಹಿಂ ಅವರು ನಮ್ಮ ಪಕ್ಷಕ್ಕೆ ಬಂದಿರುವುದರಿಂದ ಆನೆಬಲ ಬಂದಂತಾಗಿದೆ. ಬರುವ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದದಿಂದ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲಿ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಮಳಖೇಡದ ಡಾ.ಮುರ್ತುಜಾ ಖಾದ್ರಿ ವಹಿಸಿದ್ದರು. ಮಾಜಿ ಶಾಸಕರಾದ ಶಹಜಹಾನ್‌ ಡೊಂಗರಗಾಂವ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಸಾಯಬಣ್ಣಾ ಬಾಗೇವಾಡಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಬಸೀರ್‌ ಅಹ್ಮದ್‌ ಸಿಪಾಯಿ, ಮುಖಂಡರಾದ ಅಹ್ಮದಸಾಬ್‌ ಮೋಮಿನ್‌, ಅಬ್ದುಲಗನಿ ಸಿಪಾಯಿ, ಖಾದರಸಾಬ್‌ ಸಿಪಾಯಿ, ಹುಸೇನಬಾಷಾ ಸಿಪಾಯಿ, ನಬೀಸಾಬ್‌ ದೊಡಮನಿ, ಲಾಲಸಾಬ್‌ ಉಸ್ತಾದ, ಅಲ್ಲಾಭಕ್ಷ ಸಿಪಾಯಿ, ಹುಸೇನಸಾಬ್‌ ನಾಗಾವಿ, ಬಾಬು ಉಸ್ತಾದ, ಹುಸೇನಬಾಷಾ ಬಾಣಕಾರ, ಜಾವೇದ್‌ ಬಡೆಘರ, ಬಶೀರ್‌ ಲಲ್ಲೋಟಿ, ಗ್ರಾಮದ ಪ್ರಮುಖರು, ಗಣ್ಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.