Asianet Suvarna News Asianet Suvarna News

ಗಲಭೆಗೆ ಸರ್ಕಾರದ ವೈಫಲ್ಯವೇ ಕಾರಣ: ಕಾಂಗ್ರೆಸ್ ನಾಯಕರಿಗೆ ಆರ್.ಅಶೋಕ್ ತಿರುಗೇಟು

ನಾಗಮಂಗಲ ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯ ಗಣೇಶೋತ್ಸವದಲ್ಲಿ ಆಗುತ್ತಿರುವ ಗಲಭೆಗೆ ಕಾಂಗ್ರೆಸ್ ಆಡಳಿತದ ಫೇಲ್ಯೂರ್ ಕಾರಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

The reason for the riots is the failure of Congress government Says R Ashok gvd
Author
First Published Sep 21, 2024, 6:02 PM IST | Last Updated Sep 21, 2024, 6:02 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.21): ನಾಗಮಂಗಲ ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯ ಗಣೇಶೋತ್ಸವದಲ್ಲಿ ಆಗುತ್ತಿರುವ ಗಲಭೆಗೆ ಕಾಂಗ್ರೆಸ್ ಆಡಳಿತದ ಫೇಲ್ಯೂರ್ ಕಾರಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಬಿಜೆಪಿ ಸದಸ್ಯತ್ವ ಆಂದೋಲನ ಕುರಿತು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ರಾಜ್ಯದ ವಿವಿಧೆಡೆ ಗಣೇಶೋತ್ಸವದಲ್ಲಿ ಗಲಭೆಯಾಗಲು ವಿಪಕ್ಷ ಕಾರಣ ಎಂಬ ಕಾಂಗ್ರೆಸ್ ಹೇಳಿಕೆ ನೀಡುವುದಕ್ಕೆ ಕಾಂಗ್ರೆಸ್ ಗೆ ನಾಚಿಕೆ ಆಗಬೇಕು. ಅವರಿಗೆ ಕಳೆದ 16 ತಿಂಗಳಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡಲಾಗಿಲ್ಲ. 

ವಿವಿಧ ಇಲಾಖೆ ಸಿಬ್ಬಂದಿಗೆ ಸಂಬಳ ಕೊಡಲಾಗುತ್ತಿಲ್ಲ, ಹಾಲು ಉತ್ಪಾದನಾ ಮಂಡಳಿಗೆ ಸರ್ಕಾರ 1000 ಕೋಟಿಗೂ ಹೆಚ್ಚು ಸಾಲ ಉಳಿಸಿಕೊಂಡಿದೆ. ಎಲ್ಲಾ ವಸ್ತುಗಳ ಬೆಲೆಯನ್ನು ಜಾಸ್ತಿ ಮಾಡಿದ್ದಾರೆ. ಗಾಳಿಯ ಬೆಲೆ ಜಾಸ್ತಿ ಮಾಡುವುದು ಮಾತ್ರ ಬಾಕಿ ಇದೆ. ಇದುವರೆಗೆ ಗಣೇಶನ ಹಬ್ಬವನ್ನು ಅಲ್ಲಿನ ಸಮಿತಿಗಳು ತೀರ್ಮಾನಿಸುತ್ತಿದ್ದವು. ಆದರೆ ಈಗ ಪೊಲೀಸರು ನಿರ್ಧರಿಸುತ್ತಿದ್ದಾರೆ. ಗಣೇಶ ಅಂದರೆ ವಿಘ್ನ ನಿವಾರಕ, ಆದರೆ ಗಣೇಶನಿಗೆ ವಿಘ್ನಗಳನ್ನು ತರುವುದು ಕಾಂಗ್ರೆಸ್ ಸರ್ಕಾರ. ಇದೊಂದು ಧರ್ಮದ ಹಬ್ಬ, ಜನರಿಗೆ ಇದನ್ನು ಆಚರಿಸುವುದಕ್ಕೆ ಅವಕಾಶವಿದೆ. ಆದರೆ ಕಾಂಗ್ರೆಸ್ ಮುಸ್ಲಿಂರನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರ್ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು. 

ಕಾಂಗ್ರೆಸ್‌ನಲ್ಲಿದ್ದಾಗ ಶಾಸಕ ಮುನಿರತ್ನ ಸತ್ಯ ಹರಿಶ್ಚಂದ್ರರಾಗಿದ್ದರಾ: ಆರ್.ಅಶೋಕ್

ನಾನು 30 ವರ್ಷದಿಂದ ಶಾಸಕನಾಗಿ ರಾಜಕೀಯ ನೋಡಿದ್ದೇನೆ. ಯಾವುದೇ ಒಂದು ಸರ್ಕಾರಕ್ಕೆ ವಿರೋಧಿ ಅಲೆ ನಿರ್ಮಾಣ ಆಗುವುದಕ್ಕೆ ಕನಿಷ್ಠ ನಾಲ್ಕು ವರ್ಷ ಬೇಕು. ಆದರೆ ಈ ಸರ್ಕಾರ ಬಂದು 15 ತಿಂಗಳಿಗೆ ವಿರೋಧಿ ಅಲೆ ಶುರುವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಡಿಕೇರಿಯಲ್ಲಿ ಹೇಳಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ಮುಡಾ, ವಾಲ್ಮೀಕಿ ನಿಗಮದ ಹಗರಣ, ನಿಷ್ಠಾವಂತ ಅಧಿಕಾರಿಗಳ ಆತ್ಮಹತ್ಯೆ ಇರಬಹುದು. ಇವೆಲ್ಲವೂ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷಗಳನ್ನು ಮಣಿಸುವ ಪ್ರಯತ್ನಕ್ಕೆ ಮುಂದಾಗಿದೆ. ಅಭಿವೃದ್ದಿ ಕೆಲಸವೆಂದು ಕಾಂಗ್ರೆಸ್ ಒಂದೇ ಒಂದು ಕಲ್ಲನ್ನೂ ಹಾಕಿಲ್ಲ. 

ಸರ್ಕಾರದ ಖಜಾನೆ ಖಾಲಿಯಾಗಿ ಸರ್ಕಾರ ಪಾಪರ್ ಆಗಿದೆ. ಬಾಂಕುಗಳಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಬೆಳಕಿಗೆ ಬಂದಿರುವುದು ಬಿಜೆಪಿ ಹೋರಾಟದಿಂದ. ಇವತ್ತು ಚುನಾವಣೆ ನಡೆದರೂ ಬಿಜೆಪಿ ಜೆಡಿಎಸ್ ರಾಜ್ಯದಲ್ಲಿ 160 ಸ್ಥಾನ ಗೆಲ್ಲುತ್ತವೆ. ಬಿಜೆಪಿ ಪರವಾದ ವಾತಾವರಣವಿದೆ. ಹೀಗಾಗಿ ಕಾಂಗ್ರೆಸ್ ಭಯಭೀತವಾಗಿ ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೂ ಕೇಸ್ ಹಾಕಿದ್ದಾರೆ. ಶೋಭಾ ಕರಂದ್ಲಾಜೆ, ಯತ್ನಾಳ್ ಅವರ ಮೇಲೂ ಕೇಸ್. ಹಾಕಿದ್ದಾರೆ. ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿದ್ದಾರೆ. ಅದನ್ನು ತನಿಖೆ ಮಾಡಿ ಎಂದು ನನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದೆ. 

ಕತ್ತೆ ಕಾಯ್ತಿದ್ರಾ ಪೊಲೀಸರು?: ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ ಎಂದಿದ್ಯಾಕೆ ಆರ್.ಅಶೋಕ್

ಅದಕ್ಕೆ  ನನ್ನ ಮೇಲೆ ಕೇಸ್ ಹಾಕಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಸರ್ಕಾರವನ್ನು ನಾನು ಹೊಗಳಿಕೊಂಡು ಕೂರಲೇ, ಪ್ರಶ್ನಿಸುವ ಅಧಿಕಾರ ನನಗೆ ಇದೆ. ಕೇಸ್ ಹಾಕಿದ ಕೂಡಲೇ ಬಗ್ಗುವ ಪ್ರಶ್ನೆಯೇ ಇಲ್ಲ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ತಿರುಗೇಟು ಕೊಟ್ಟವರು ನಾವು. ಹೀಗಾಗಿ ಈ ಕೇಸುಗಳಿಗೆಲ್ಲಾ ನಾವು ಬಗ್ಗುವವರು ಅಲ್ಲ. ಮುಂದೆ ನಮ್ಮ ಸರ್ಕಾರ ಬಂದಾಗಲೂ ನಿಮಗೂ ಇದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಡಿಕೇರಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Latest Videos
Follow Us:
Download App:
  • android
  • ios