ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿ ಶುರುವಾದ ದಿನದಿಂದಲೂ ಶೇ.40 ಕಮಿಷನ್ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಲಂಚದ ಹಣ ಸಂಗ್ರಹಕ್ಕೆ ಗುರಿ ನೀಡಲಾಗಿದೆ: ಸಿದ್ದು
ಬೆಂಗಳೂರು(ಮಾ.05): ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ರಾಜ್ಯದ ಸಚಿವರು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರಿಗೆ ಇಂತಿಷ್ಟುಲಂಚದ ಹಣ ಸಂಗ್ರಹಿಸಿ ನೀಡಬೇಕೆಂಬ ಗುರಿ ನೀಡಿವೆ. ಈ ಬಾರಿ ಜಾತಿ, ಧರ್ಮಗಳ ಆಧಾರದ ಮೇಲೆ ಚುನಾವಣೆ ಗೆಲ್ಲಲಾಗಲ್ಲ ಎಂಬ ಅರಿವಾಗಿದೆ. ಹೀಗಾಗಿ ಪ್ರತಿ ಕ್ಷೇತ್ರಕ್ಕೆ ಕನಿಷ್ಠ 100 ಕೋಟಿ ರು. ಖರ್ಚು ಮಾಡಲು ಲಂಚದ ಹಣ ಸಂಗ್ರಹಿಸುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಲೋಕಾಯುಕ್ತ ದಾಳಿಗೆ ಸಂಬಂಧ ಮಾಡಾಳು ವಿರುಪಾಕ್ಷಪ್ಪ ಬಂಧನವಾಗಬೇಕು. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಶನಿವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ್ದು ಬಿಎಸ್ವೈ: ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದ ಸಿದ್ದರಾಮಯ್ಯ
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿ ಶುರುವಾದ ದಿನದಿಂದಲೂ ಶೇ.40 ಕಮಿಷನ್ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಲಂಚದ ಹಣ ಸಂಗ್ರಹಕ್ಕೆ ಗುರಿ ನೀಡಲಾಗಿದೆ. ಮುಂದಿನ ಚುನಾವಣೆ ಗೆಲ್ಲಲು ಪ್ರತಿ ಕ್ಷೇತ್ರಕ್ಕೆ 100 ಕೋಟಿ ರು. ಖರ್ಚು ಮಾಡಲು ಉದ್ದೇಶಿಸಿದ್ದಾರೆ. ಬಸವರಾಜ ಬೊಮ್ಮಾಯಿಗೆ ನಿಜಕ್ಕೂ ಮಾನ, ಮರ್ಯಾದೆ ಇದ್ದರೆ ವಿರೂಪಾಕ್ಷಪ್ಪನನ್ನು ಈ ಕೂಡಲೇ ಬಂಧಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್ ಅವರು ತಪ್ಪು ಮಾಡದಿದ್ದರೂ ರಾಜೀನಾಮೆ ನೀಡಿದದರು. ದೇವೇಗೌಡರು ನಮ್ಮ ವಿರುದ್ಧ ಒಂದಂಕಿ ಲಾಟರಿ ಆರೋಪ ಮಾಡಿದಾಗ ಕೂಡಲೇ ಪತ್ರಿಕಾಗೋಷ್ಠಿ ಕರೆದು ಅದನ್ನು ಸಿಬಿಐಗೆ ವಹಿಸಿದ್ದೆ, ಪರೇಶ್ ಮೇಸ್ತಾ ಎಂಬ ಯುವಕ ಕಾಲುಜಾರಿ ಬಿದ್ದು ಸತ್ತಾಗ ಅದನ್ನು ಕೊಲೆ ಎಂದು ದೊಂಬಿ-ಗಲಾಟೆ ಎಬ್ಬಿಸಿದ್ದರು. ಅದನ್ನೂ ಕೂಡ ಸಿಬಿಐ ತನಿಖೆಗೆ ವಹಿಸಿದ್ದೆ. ಇದೀಗ ಬೊಮ್ಮಾಯಿ ಸರ್ಕಾರದ ಮೇಲೆ ಇಷ್ಟುಆರೋಪ ಬಂದರೂ ಒಂದನ್ನೂ ತನಿಖೆಗೆ ವಹಿಸದೆ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ನನ್ನ ಪ್ರಕಾರ ಈಗಾಗಲೇ ಬೊಮ್ಮಾಯಿ ರಾಜೀನಾಮೆ ನೀಡಬೇಕಿತ್ತು ಎಂದು ಕಿಡಿ ಕಾರಿದರು.
ಕೂಡಲೇ ಚುನಾವಣೆ ಘೋಷಿಸಿ:
ರಾಜ್ಯ ಸರ್ಕಾರ ಚುನಾವಣೆಗಾಗಿ ಭ್ರಷ್ಟಾಚಾರದ ವೇಗವನ್ನು ಹೆಚ್ಚಿಸಿದೆ. ಹೀಗಾಗಿಯೇ ಕೂಡಲೇ ಚುನಾವಣೆ ಘೋಷಿಸಬೇಕು. ಚುನಾವಣಾ ನೀತಿ ಸಂಹಿತೆ ಘೋಷಣೆಯಾದರೆ ಇವರು ಲಂಚ ಹೊಡೆಯುವುದಾದರೂ ತಪ್ಪುತ್ತದೆ. ಗುತ್ತಿಗೆದಾರರ ಸುಲಿಗೆ, ಅಮಾಯಕರ ಸುಲಿಗೆ ನಿಲ್ಲುತ್ತದೆ. ಯಾವುದೇ ಗುತ್ತಿಗೆದಾರರು ಈಗ ಲಂಚ ನೀಡಿ ಗುತ್ತಿಗೆ ಕೆಲಸ ಹಿಡಿಯಬೇಡಿ. ಯಾಕೆಂದರೆ ನಾವು ಬಂದ ಮೇಲೆ ಈ ಎಲ್ಲಾ ಕಾಮಗಾರಿ ರದ್ದು ಮಾಡುತ್ತೇವೆ ಎಂದರು.
ಕರ್ನಾಟಕದ ಮೈಸೂರು ಸ್ಯಾಂಡಲ್ ಘಮ ವಿಶ್ವ ಪ್ರಸಿದ್ಧಿ. ಅಂತಹ ಮೈಸೂರು ಸ್ಯಾಂಡಲ್ ಸೋಪಿನಲ್ಲೂ ಸುಗಂಧದ ಪರಿಮಳದ ಬದಲಿಗೆ ಭ್ರಷ್ಟಾಚಾರದ ದುರ್ವಾಸನೆ ಬೀರುವಂತೆ ಮಾಡಿದ ಸಾಧನೆ ರಾಜ್ಯ ಬಿಜೆಪಿ ಸರ್ಕಾರದ್ದು. ಇಂತಹ ಭ್ರಷ್ಟ ಬಿಜೆಪಿಯನ್ನು ತೊಲಗಿಸಲು ಜನ ನಿರ್ಧರಿಸಿದ್ದಾರೆ ಅಂತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
